ಎಐನಿಂದ ದೊಡ್ಡ ಕಂಪನಿಗಳಲ್ಲಿ ಕೆಲಸಕ್ಕೆ ಕತ್ತರಿ ಬೀಳಬಹುದು; ಲಕ್ಷಾಂತರ ಸಣ್ಣ ಕಂಪನಿಗಳಿಂದ ಉದ್ಯೋಗಸೃಷ್ಟಿ: ನಂದನ್ ನಿಲೇಕಣಿ
ಎಐ ಯುಗದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಉದ್ಯೋಗನಷ್ಟವಾಗಬಹುದು ಎಂಬುದನ್ನು ನಂದನ್ ನಿಲೇಕಣಿ ಒಪ್ಪಿದ್ದಾರೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಹೋಗಬಹುದು, ಆದರೆ, ಭಾರೀ ಸಂಖ್ಯೆಯಲ್ಲಿರುವ ಸಣ್ಣ ಕಂಪನಿಗಳು ಉದ್ಯೋಗ ರಕ್ಷಿಸುತ್ತವೆ ಎಂದಿದ್ದಾರೆ. ಯುವಜನರು ಎಐ ಸಾಧನಗಳನ್ನು ಬಳಸುವ ಕೌಶಲ್ಯ ಕಲಿಯಬೇಕು ಎಂದು ನಿಲೇಕಣಿ ತಿಳಿಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 10: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಆಗಮನದಿಂದ ಜಾಗತಿಕ ಮಟ್ಟದಲ್ಲಿ ಉದ್ಯೋಗ ನಷ್ಟದ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ‘ಆಧಾರ್’ ರೂವಾರಿ ನಂದನ್ ನಿಲೇಕಣಿ ಅವರು ಆಶಾವಾದ ಮುಂದಿಟ್ಟಿದ್ದಾರೆ. ದೊಡ್ಡ ಕಾರ್ಪೊರೇಟ್ ಕಂಪನಿಗಳು ವೆಚ್ಚ ತಗ್ಗಿಸಲು ಎಐ ಬಳಸಿ ಉದ್ಯೋಗ ಕಡಿತಗೊಳಿಸಬಹುದು. ಆದರೆ, ಭಾರತದಂತಹ ದೇಶಗಳಲ್ಲಿ ಕೋಟ್ಯಂತರ ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂದರೆ, ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ದಕ್ಷತೆ ಹೆಚ್ಚಿಸಿಕೊಳ್ಳಲು ಮತ್ತು ಕಾರ್ಯಾಚರಣೆಯ ವೆಚ್ಚ ತಗ್ಗಿಸಲು ಎಐ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿವೆ. ಇದರಿಂದಾಗಿ ಆ ಸಂಸ್ಥೆಗಳಲ್ಲಿ ಸಾಂಪ್ರದಾಯಿಕ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಭಾರತದಲ್ಲಿ ಲಕ್ಷಾಂತರ ಸಣ್ಣ ಉದ್ಯಮಗಳು, ಕಿರಾಣಿ ಅಂಗಡಿಗಳು ಮತ್ತು ಸ್ಥಳೀಯ ಸೇವಾದಾರರಿದ್ದಾರೆ. ಎಐ ತಂತ್ರಜ್ಞಾನವನ್ನು ಸರಳಗೊಳಿಸಿ ಈ ಸಣ್ಣ ಉದ್ಯಮಗಳಿಗೆ ತಲುಪಿಸಿದರೆ, ಅವರ ವ್ಯಾಪಾರ ವೃದ್ಧಿಯಾಗಿ ಹೆಚ್ಚಿನ ಜನರಿಗೆ ಕೆಲಸ ನೀಡಲು ಸಾಧ್ಯವಾಗುತ್ತದೆ ಎಂಬುದು ನಿಲೇಕಣಿ ಅವರ ಅನಿಸಿಕೆ.
ಇದನ್ನೂ ಓದಿ: ಬಯೋಮೆಟ್ರಿಕ್ ಆಧಾರ್ ದೃಢೀಕರಣ ಇಲ್ಲದೆ ಜಿಎಸ್ಟಿ ನೊಂದಣಿಗೆ ಅವಕಾಶ ಇಲ್ಲ: ದೆಹಲಿ ಹೈಕೋರ್ಟ್ ಆದೇಶ
ಡಿಜಿಟಲ್ ಮೂಲಸೌಕರ್ಯದ (DPI) ಪಾತ್ರ: ಭಾರತದ ‘ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್’ (ಯುಪಿಐ, ಓಎನ್ಡಿಸಿ ಇತ್ಯಾದಿ) ಸಣ್ಣ ವ್ಯಾಪಾರಿಗಳಿಗೆ ಆನ್ಲೈನ್ ಮಾರುಕಟ್ಟೆ ಪ್ರವೇಶಿಸಲು ನೆರವಾಗಿದೆ. ಇದಕ್ಕೆ ಎಐ ಬೆಂಬಲ ಸಿಕ್ಕರೆ ಸಣ್ಣ ಉದ್ಯಮಗಳು ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕರು ತಿಳಿಸಿದ್ದಾರೆ.
ಕೌಶಲ್ಯ ವೃದ್ಧಿ (Re-skilling): ಎಐ ತಂತ್ರಜ್ಞಾನವು ಮಾನವ ಶಕ್ತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ, ಬದಲಿಗೆ ಕೆಲಸ ಮಾಡುವ ವಿಧಾನವನ್ನು ಬದಲಾಯಿಸುತ್ತದೆ. ಆದ್ದರಿಂದ ಯುವಜನತೆ ಎಐ ಉಪಕರಣಗಳನ್ನು ಬಳಸುವ ಕೌಶಲ್ಯವನ್ನು ಕಲಿತುಕೊಳ್ಳುವುದು ಅಗತ್ಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಈಕ್ವಿಟಿ ಫಂಡ್ಗಳಿಗೆ ಹರಿದುಬಂದ ಬಂಡವಾಳ 29,329 ಕೋಟಿ ರೂ; ಆಗಸ್ಟ್ನಲ್ಲಿ ನಿವ್ವಳ ಹೂಡಿಕೆಯಲ್ಲಿ ಶೇ. 19 ಏರಿಕೆ
ತಂತ್ರಜ್ಞಾನವನ್ನು ಕೇವಲ ಬೃಹತ್ ಕಂಪನಿಗಳ ಶಕ್ತಿಯಾಗಿ ನೋಡದೆ, ಸಮಾಜದ ತಳಮಟ್ಟದ ಉದ್ಯಮಿಗಳಿಗೆ ತಲುಪಿಸಿದಾಗ ಮಾತ್ರ ಉದ್ಯೋಗ ಭದ್ರತೆ ಮತ್ತು ಆರ್ಥಿಕ ಸಮಾನತೆ ಸಾಧ್ಯ ಎಂದು ನಿಲೇಕಣಿ ಪ್ರತಿಪಾದಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




