ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನಗೊಳಿಸುವುದು ಹೇಗೆ? ಸರ್ಕಾರದ ಪ್ಲ್ಯಾನ್ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಒಂದು ರಾಷ್ಟ್ರ ಒಂದು ಚುನಾವಣೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ, ದೇಶದಲ್ಲಿ ಇದು ಜಾರಿಯಾಗುವುದು ಹೇಗೆ? ಪ್ರಕ್ರಿಯೆಗಳೇನು? ಸಮಿತಿಯ ಶಿಫಾರಸುಗಳೇನು? ಈ ಮೊದಲು ಭಾರತದಲ್ಲಿ ಎಲ್ಲಾ ಚುನಾವಣೆಗಳು ಒಟ್ಟಿಗೆ ನಡೆದ ನಿದರ್ಶನಗಳಿವೆಯೇ?, ಯಾವ ಯಾವ ರಾಷ್ಟ್ರದ ಚುನಾವಣಾ ಪ್ರಕ್ರಿಯೆಗಳು ಹೇಗಿರುತ್ತವೆ, ಸಂವಿಧಾನದ ಯಾವ ವಿಧಿಗಳ ತಿದ್ದುಪಡಿ ಅಗತ್ಯವಿದೆ ಎಂಬುದರ ಕುರಿತ ಸಮಗ್ರ ವರದಿ ಇಲ್ಲಿದೆ.

ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನಗೊಳಿಸುವುದು ಹೇಗೆ? ಸರ್ಕಾರದ ಪ್ಲ್ಯಾನ್ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ
ರಾಮನಾಥ್ ಕೋವಿಂದ್, ನರೇಂದ್ರ ಮೋದಿ, ಅಮಿತ್ ಶಾ
Follow us
|

Updated on:Sep 19, 2024 | 11:51 AM

ಪ್ರಧಾನಿ ನರೇಂದ್ರ ಮೋದಿ(Narendra Modi) 2014ರಲ್ಲಿ ನೀಡಿರುವ ಭರವಸೆಯಂತೆ ‘‘ಒಂದು ರಾಷ್ಟ್ರ ಒಂದು ಚುನಾವಣೆ’’ಗೆ ಕೇಂದ್ರ ಸಚಿವ ಸಂಪುಟದಿಂದಲೂ ಅನುಮೋದನೆ ದೊರೆತಿದೆ. ಒಂದು ರಾಷ್ಟ್ರ ಒಂದು ಚುನಾವಣೆಯ ಪ್ರಕ್ರಿಯೆಯನ್ನು ನಿರ್ಧರಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು. ಅದು 8 ಸದಸ್ಯರನ್ನು ಒಳಗೊಂಡಿತ್ತು. ಕೋವಿಂದ್ ಸಮಿತಿಯನ್ನು 2023ರ ಸೆಪ್ಟೆಂಬರ್ 3ರಂದು ರಚಿಸಲಾಯಿತು. ಸಮಿತಿಯು ಮಾರ್ಚ್​ 14ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವರದಿ ಸಲ್ಲಿಸಿತ್ತು. ಈ ವರದಿಗೆ ಮೋದಿ ಸಂಪುಟ ಒಪ್ಪಿಗೆ ನೀಡಿದೆ.

ಎಲ್ಲಾ ವಿಧಾನಸಭೆಗಳ ಅವಧಿಯನ್ನು 2029ರವರೆಗೆ ವಿಸ್ತರಿಸುವಂತೆ ಸಮಿತಿ ಸೂಚಿಸಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಮಸೂದೆಯನ್ನು ಮಂಡಿಸಬಹುದು. ಒಂದು ರಾಷ್ಟ್ರ ಒಂದು ಚುನಾವಣೆ ಯಾವಾಗ ಜಾರಿಗೆ ಬರಬಹುದು, ಅಧಿಕಾರಾವಧಿ ಪೂರ್ಣಗೊಳ್ಳದ ವಿಧಾನಸಭೆಗಳ ಗತಿ ಏನು? ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾದ ನಂತರ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯು ಹೇಗೆ ಬದಲಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಮತ್ತಷ್ಟು ಓದಿ: One Nation One Election: ಒಂದು ರಾಷ್ಟ್ರ ಒಂದು ಚುನಾವಣೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಸರ್ಕಾರ ಹೇಳಿದ್ದೇನು? ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿ ನಡೆಸಿ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಸಮಿತಿ ಸೂಚಿಸಿದೆ. ಮೊದಲ ಹಂತದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. 100 ದಿನಗಳಲ್ಲಿ ಎರಡನೇ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.

ಮತ್ತಷ್ಟು ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಜಾಪ್ರಭುತ್ವದಲ್ಲಿ ಪ್ರಾಯೋಗಿಕವಲ್ಲ: ಮಲ್ಲಿಕಾರ್ಜುನ ಖರ್ಗೆ

ಕೋವಿಂದ್ ಸಮಿತಿಯ ಶಿಫಾರಸನ್ನು 2029ರ ಲೋಕಸಭಾ ಚುನಾವಣೆಯ ನಂತರ ಜಾರಿಗೆ ತರಲಾಗುವುದು, 2029ರ ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಹಾಗೂ ಕೇಂದ್ರ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ನಿಗದಿತ ದಿನಾಂಕವನ್ನು ರಾಷ್ಟ್ರಪತಿ ನಿರ್ಧರಿಸುತ್ತಾರೆ. ಇದಕ್ಕಾಗಿ ಕನಿಷ್ಠ 5ರಿಂದ 6 ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ ಎಂದು ಹೇಳಿದ್ದರು.

ಒಂದು ರಾಷ್ಟ್ರ ಒಂದು ಚುನಾವಣೆ ಕುರಿತ ಕೋವಿಂದ್ ಸಮಿತಿಯ ಸಲಹೆಗಳನ್ನು ಪರಿಗಣಿಸಲು ಮೋದಿ ಕ್ಯಾಬಿನೆಟ್ ದೇಶಾದ್ಯಂತ ಚರ್ಚೆ ನಡೆಸಲಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದಾದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಕೋವಿಂದ್ ಸಮಿತಿ ಸಲಹೆ ಏನು? ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ಎಲ್ಲಾ ರಾಜ್ಯಗಳ ವಿಧಾನಸಭೆಗಳ ಅಧಿಕಾರಾವಧಿಯನ್ನು ಮುಂದಿನ ಲೋಕಸಭಾ ಚುನಾವಣೆವರೆಗೆ ಅಂದರೆ 2029ರವರೆಗೆ ವಿಸ್ತರಿಸಲು ಸಲಹೆ ನೀಡಿದೆ. ಮೊದಲ ಹಂತದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬಹುದು. ಎರಡನೇ ಹಂತದಲ್ಲಿ 100 ದಿನಗಳಲ್ಲಿ ಸ್ಥಳೀಯ ಚುನಾವಣೆಗಳನ್ನು ನಡೆಸಬಹುದು. ಹಂಗ್ ಅಸ್ಸೆಂಬ್ಲಿ ಮತ್ತು ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಉಳಿದ 5 ವರ್ಷಗಳ ಅವಧಿಗೆ ಹೊಸದಾಗಿ ಚುನಾವಣೆ ನಡೆಸಬಹುದು.

ಮತ್ತಷ್ಟು ಓದಿ: One Nation, One Election: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂದರೇನು? ವಿಧಾನಸಭಾ ಎಲೆಕ್ಷನ್​ ನಡೆಯೋದೇ ಇಲ್ವ?

ಚುನಾವಣಾ ಆಯೋಗವು ರಾಜ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಯನ್ನು ಸಿದ್ಧಪಡಿಸಬಹುದು.

ವರದಿಯನ್ನು ಹೇಗೆ ಸಿದ್ಧಪಡಿಸಲಾಯಿತು? ಸಮಿತಿಯು 62 ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿದೆ, ಈ ಪೈಕಿ 32 ಪಕ್ಷಗಳು ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದೆ. ಇದೇ ವೇಳೆ 15 ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ 15 ಪಕ್ಷಗಳು ಯಾವುದೇ ಉತ್ತರವನ್ನು ನೀಡಿಲ್ಲ, 191 ದಿನಗಳ ಸಂಶೋಧನೆಯ ನಂತರ ಸಮಿತಿಯು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತ್ತು. ಸಮಿತಿಯ ವರದಿ 18 ಸಾವಿರದ 626 ಪುಟಗಳಿವೆ.

ಸಮಿತಿ ಯಾವ ಯಾವ ದೇಶಗಳ ಚುನಾವಣಾ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದೆ? ಒಂದು ರಾಷ್ಟ್ರ ಒಂದು ಚುನಾವಣೆಗಾಗಿ ಹಲವು ದೇಶಗಳ ಸಂವಿಧಾನಗಳನ್ನು ವಿಶ್ಲೇಷಿಸಲಾಗಿದೆ. ಸಮಿತಿಯು ಸ್ವೀಡನ್, ಜಪಾನ್, ಜರ್ಮನಿ, ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಫಿಲಿಪೈನ್ಸ್, ಇಂಡೋನೇಷ್ಯಾ ಚುನಾವಣಾ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದೆ.

ಮುಂದಿನ ವರ್ಷ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಜರ್ಮನಿಯಲ್ಲಿ ಮೊದಲು ಪ್ರಧಾನಿಯನ್ನು ಆಯ್ಕೆ ಮಾಡಲಾಗುತ್ತದೆ ನಂತರ ಉಳಿದ ಚುನಾವಣೆಗಳು ನಡೆಯುತ್ತವೆ.

ಒಂದು ರಾಷ್ಟ್ರ ಒಂದು ಚುನಾವಣೆಗೆ ಯಾವ ಪಕ್ಷಗಳು ಸಿದ್ಧವಾಗಿವೆ? ಒನ್ ನೇಷನ್ ಒನ್ ಎಲೆಕ್ಷನ್ ಅನ್ನು ಬಿಜೆಪಿ, ನಿತೀಶ್ ಕುಮಾರ್ ಅವರ ಜೆಡಿಯು, ತೆಲುಗು ದೇಶಂ ಪಕ್ಷ (ಟಿಡಿಪಿ), ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ ಬೆಂಬಲಿಸಿವೆ. ಇದರೊಂದಿಗೆ ಅಸ್ಸಾಂ ಗಣ ಪರಿಷತ್, ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಶಿವಸೇನೆ (ಶಿಂಧೆ) ಬಣ ಕೂಡ ಒನ್ ನೇಷನ್ ಒನ್ ಎಲೆಕ್ಷನ್ ಅನ್ನು ಬೆಂಬಲಿಸಿವೆ.

ಭಾರತದಲ್ಲಿ ಮೊದಲು ಏಕಕಾಲಕ್ಕೆ ಚುನಾವಣೆಗಳು ನಡೆಯುತ್ತಿದ್ದವೇ? ಹೌದು ಇದು ನಡೆದಿದೆ, ಭಾರತದ ಸ್ವಾತಂತ್ರ್ಯದ ನಂತರ, 1952, 1957, 1962 ಮತ್ತು 1967 ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದವು. ಆದಾಗ್ಯೂ, 1968 ಮತ್ತು 1969 ರಲ್ಲಿ, ಅನೇಕ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯು ಅಕಾಲಿಕವಾಗಿ ಕೊನೆಗೊಂಡಿತು. 1970 ರಲ್ಲಿ, ಇಂದಿರಾ ಗಾಂಧಿಯವರು ಲೋಕಸಭೆಯನ್ನು ಅದರ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜಿಸಲು ಸಲಹೆ ನೀಡಿದರು. ಇದರೊಂದಿಗೆ ಭಾರತದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಸಂಪ್ರದಾಯವನ್ನೂ ಮುರಿದರು. ಮೂಲತಃ 1972ರಲ್ಲಿ ಲೋಕಸಭೆ ಚುನಾವಣೆ ನಡೆಯಬೇಕಿತ್ತು. ಇದೀಗ ಮತ್ತೆ ಮೋದಿ ಸರ್ಕಾರ ಅದನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ.

ಯಾವ ರಾಜ್ಯಗಳ ವಿಧಾನಸಭೆಗಳ ಅವಧಿಯನ್ನು ಕಡಿಮೆ ಮಾಡಬಹುದು? ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾದರೆ ತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳ ಈಗಿನ ಅಧಿಕಾರಾವಧಿ 3ರಿಂದ 5 ತಿಂಗಳು ಕಡಿಮೆಯಾಗಲಿದೆ. ಗುಜರಾತ್, ಕರ್ನಾಟಕ, ಹಿಮಾಚಲ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ರಾಜ್ಯಗಳ ಅಧಿಕಾರಾವಧಿಯೂ 13ರಿಂದ 17 ತಿಂಗಳು ಕಡಿಮೆಯಾಗಲಿದೆ. ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯ ಪ್ರಸ್ತುತ ಅಧಿಕಾರಾವಧಿಯು ಕಡಿಮೆಯಾಗುತ್ತದೆ.

ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೆ ತರಲು ಪ್ರಕ್ರಿಯೆಗಳೇನು? ಸಾಂವಿಧಾನಿಕ ತಿದ್ದುಪಡಿ: ಪ್ರಸ್ತುತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ವಿವಿಧ ಸಮಯಗಳಲ್ಲಿ ಚುನಾವಣೆಗಳು ನಡೆಯುವುದರಿಂದ, ಅವುಗಳನ್ನು ಏಕಕಾಲದಲ್ಲಿ ನಡೆಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗಿದೆ. ಇದಕ್ಕೆ ಸಂವಿಧಾನದ 83, 85, 172, 174 ಮತ್ತು 356 ನೇ ವಿಧಿಗಳಿಗೆ ತಿದ್ದುಪಡಿಗಳ ಅಗತ್ಯವಿರುತ್ತದೆ, ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬಹುದು.

ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಬಹುಮತ:ಈ ಪ್ರಸ್ತಾವನೆಯನ್ನು ಅಂಗೀಕರಿಸಲು, ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಇದಲ್ಲದೇ ರಾಜ್ಯ ಮಟ್ಟದ ಚುನಾವಣೆಯ ಮೇಲೂ ಪರಿಣಾಮ ಬೀರುವುದರಿಂದ ರಾಜ್ಯ ವಿಧಾನಸಭೆಗಳಲ್ಲೂ ಈ ಬಗ್ಗೆ ಒಪ್ಪಿಗೆ ಸೂಚಿಸಬೇಕಿದೆ.

ಚುನಾವಣಾ ಆಯೋಗದ ಕಾನೂನು ಮತ್ತು ಪಾತ್ರ ಚುನಾವಣಾ ಆಯೋಗವು ಈ ವ್ಯವಸ್ಥೆಗಾಗಿ ಚುನಾವಣಾ ನಿಯಮಗಳು ಮತ್ತು ಕಾರ್ಯವಿಧಾನಗಳಲ್ಲಿ ವ್ಯಾಪಕವಾದ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಚುನಾವಣೆಯನ್ನು ಸುಗಮವಾಗಿ ನಡೆಸಲು ಚುನಾವಣಾ ಆಯೋಗದ ಒಪ್ಪಿಗೆ ಮತ್ತು ಅದರ ಸಕ್ರಿಯ ಭಾಗವಹಿಸುವಿಕೆ ಕೂಡ ಅಗತ್ಯವಾಗಿದೆ.

ಹಲವು ಸವಾಲುಗಳು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದಕ್ಕೆ ಹೆಚ್ಚಿನ ಸಂಖ್ಯೆಯ EVM ಯಂತ್ರಗಳು ಮತ್ತು ಮಾನವ ಸಂಪನ್ಮೂಲಗಳಂತಹ ಬೃಹತ್ ಸಂಪನ್ಮೂಲಗಳು ಬೇಕಾಗುತ್ತವೆ. ಇದಕ್ಕಾಗಿ ವ್ಯಾಪಕ ಸಿದ್ಧತೆ ನಡೆಸಬೇಕಾಗುತ್ತದೆ. ರಾಜಕೀಯ ಮತ್ತು ಒಮ್ಮತ:ಈ ಬದಲಾವಣೆಗೆ ವಿಶಾಲ ರಾಜಕೀಯ ಒಮ್ಮತವೂ ಮುಖ್ಯ. ವಿವಿಧ ರಾಜಕೀಯ ಪಕ್ಷಗಳ ಬೆಂಬಲ ಅಥವಾ ವಿರೋಧದ ಪ್ರಕಾರ ಅದರ ಭವಿಷ್ಯವೂ ನಿರ್ಧಾರವಾಗುತ್ತದೆ. ಇದಲ್ಲದೆ, ಸಾರ್ವಜನಿಕ ಅಭಿಪ್ರಾಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಂವಿಧಾನದ ಈ 5 ವಿಧಿಗಳಿಗೆ ತಿದ್ದುಪಡಿ ಮಾಡಲಾಗುವುದೇ? ವಿಧಿ 83: ಲೋಕಸಭೆ ಮತ್ತು ರಾಜ್ಯಸಭೆಯ ಅವಧಿಯನ್ನು ವ್ಯಾಖ್ಯಾನಿಸುತ್ತದೆ. ಲೋಕಸಭೆಯ ಅಧಿಕಾರಾವಧಿ: 5 ವರ್ಷಗಳು, ಮೊದಲು ವಿಸರ್ಜಿಸದಿದ್ದರೆ. ರಾಜ್ಯಸಭೆಯು ಶಾಶ್ವತ ಸದನವಾಗಿದೆ, ಅದನ್ನು ವಿಸರ್ಜಿಸಲಾಗುವುದಿಲ್ಲ, ಆದರೆ ಅದರ ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ. ವಿಧಿ 85(ಸಂಸತ್ತಿನ ಅಧಿವೇಶನ ಮತ್ತು ವಿಸರ್ಜನೆ) ಸಂಸತ್ತಿನ ಅಧಿವೇಶನವನ್ನು ಕರೆಯುವ ಮತ್ತು ಲೋಕಸಭೆಯನ್ನು ವಿಸರ್ಜಿಸುವ ವಿಧಾನವನ್ನು ವಿವರಿಸುತ್ತದೆ. ರಾಷ್ಟ್ರಪತಿ ಕಾಲಕಾಲಕ್ಕೆ ಸಂಸತ್ತಿನ ಅಧಿವೇಶನಗಳನ್ನು ಕರೆಯುತ್ತಾರೆ ಮತ್ತು ಎರಡು ಅಧಿವೇಶನಗಳ ನಡುವೆ ಗರಿಷ್ಠ 6 ತಿಂಗಳ ಅಂತರವಿರಬಹುದು ಎಂದು ಅದು ಹೇಳುತ್ತದೆ. ಲೋಕಸಭೆಯನ್ನು ವಿಸರ್ಜಿಸುವ ಹಕ್ಕು ರಾಷ್ಟ್ರಪತಿಗೆ ಇದೆ.

ವಿಧಿ 172 (ರಾಜ್ಯ ಶಾಸಕಾಂಗಗಳ ಅಧಿಕಾರಾವಧಿ) ರಾಜ್ಯ ಶಾಸಕಾಂಗಗಳ ಅಧಿಕಾರಾವಧಿಯನ್ನು ನಿರ್ಧರಿಸುತ್ತದೆ. ರಾಜ್ಯ ಅಸೆಂಬ್ಲಿಗಳ ಅಧಿಕಾರಾವಧಿ: 5 ವರ್ಷಗಳು, ಮೊದಲು ವಿಸರ್ಜಿಸದಿದ್ದರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ವಿಧಾನಸಭೆಗಳ ಅಧಿಕಾರಾವಧಿಯನ್ನು ವಿಸ್ತರಿಸಬಹುದು, ಆದರೆ ಗರಿಷ್ಠ ಒಂದು ವರ್ಷಕ್ಕೆ.

ವಿಧಿ 174 (ರಾಜ್ಯ ಶಾಸಕಾಂಗಗಳ ಅಧಿವೇಶನ ಮತ್ತು ವಿಸರ್ಜನೆ) ರಾಜ್ಯ ಅಸೆಂಬ್ಲಿಗಳ ಎರಡು ಅಧಿವೇಶನಗಳ ನಡುವೆ ಗರಿಷ್ಠ 6 ತಿಂಗಳ ಅಂತರವಿರಬಹುದು. ಅಗತ್ಯವಿದ್ದಾಗ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ.

ವಿಧಿ 356 (ರಾಷ್ಟ್ರಪತಿ ಆಳ್ವಿಕೆ) ಸಾಂವಿಧಾನಿಕ ಯಂತ್ರವು ವಿಫಲವಾದಾಗ ಈ ಲೇಖನವು ಅನ್ವಯಿಸುತ್ತದೆ, ಇದನ್ನು ರಾಷ್ಟ್ರಪತಿ ಆಳ್ವಿಕೆ ಎಂದು ಕರೆಯಲಾಗುತ್ತದೆ.

ಒಂದು ರಾಜ್ಯದ ಸರ್ಕಾರವು ಸಾಂವಿಧಾನಿಕ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ರಾಷ್ಟ್ರಪತಿಗಳು ಆ ರಾಜ್ಯದ ಆಡಳಿತವನ್ನು ವಹಿಸಿಕೊಳ್ಳಬಹುದು ಮತ್ತು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಬಹುದು ಅಥವಾ ಅಮಾನತುಗೊಳಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:42 am, Thu, 19 September 24