Fact Check: ಜಮ್ಮು ಕಾಶ್ಮೀರದಲ್ಲಿ ಸೇನಾ ಬ್ರಿಗೇಡ್ ಮೇಲೆ ಆತ್ಮಹತ್ಯಾ ದಾಳಿ ನಡೆದಿರುವುದು ನಿಜವೇ?
India Pakistan War: ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧೊನ್ಮಾದ ಹೆಚ್ಚಾಗಿರುವ ಸಂದರ್ಭದಲ್ಲೇ ಸುಳ್ಳು ಸುದ್ದಿಗಳೂ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಜಮ್ಮು ಕಾಶ್ಮೀರದಲ್ಲಿ ಸೇನಾ ಪಡೆ ಮೇಲೆ ಆತ್ಮಾಹುತಿ ದಾಳಿ ನಡೆದಿದೆ ಎಂಬ ವದಂತಿಯೊಂದು ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಅದು ಸುಳ್ಳು ಎಂಬುದು ತಿಳಿದುಬಂದಿದೆ. ಆ ಕುರಿತ ವಿವರಗಳು ಇಲ್ಲಿವೆ.

ನವದೆಹಲಿ, ಮೇ 9: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸೇನಾ ಬ್ರಿಗೇಡ್ ಮೇಲೆ ಆತ್ಮಹತ್ಯಾ ದಾಳಿ ನಡೆದಿದೆ ಎಂದು ಹೇಳಲಾಗುತ್ತಿರುವ, ‘ಫಿದಾಯೀನ್ ದಾಳಿ’ಯ (Fidayeen Attack) ಕುರಿತ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಆದರೆ, ಭಾರತೀಯ ಸೇನೆ ಈ ಸುದ್ದಿಯನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಪಿಐಬಿ ಕೂಡ ಫ್ಯಾಕ್ಟ್ ಚೆಕ್ (Fact Check) ಮಾಡಿದ್ದು, ಫಿದಾಯೀನ್ ದಾಳಿ ಕುರಿತ ಸುದ್ದಿಗಳು ಫೇಕ್ ಎಂದಿದೆ. ಇಂಥ ವರದಿಗಳನ್ನು ಯಾರೂ ನಂಬಬಾರದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು ಎಂದು ಸೇನೆ ಕೂಡ ಖಡಕ್ ಸೂಚನೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಯಾವುದೇ ಆತ್ಮಾಹುತಿ ದಾಳಿ ನಡೆದಿಲ್ಲ ಎಂದು ಸೇನೆ ಹೊರಡಿಸಿದ ಅಧಿಕೃತ ಪ್ರಕಟಣೆ ಕೂಡ ತಿಳಿಸಿದೆ. ಈ ಸುದ್ದಿ ಸಂಪೂರ್ಣವಾಗಿ ನಕಲಿ ಮತ್ತು ದಾರಿತಪ್ಪಿಸುವಂತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ದೃಢೀಕರಿಸದ ಮತ್ತು ಬೇಜವಾಬ್ದಾರಿಯುತ ಸುದ್ದಿಗಳನ್ನು ನಂಬಬೇಡಿ ಎಂದು ಸೇನೆಯು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.
ಫಿದಾಯೀನ್ ದಾಳಿ ವದಂತಿ ಹಬ್ಬಿಸಿದವರು ಯಾರು?
ಇತ್ತೀಚಿನ ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ವದಂತಿಗಳು ಮತ್ತು ನಕಲಿ ಸುದ್ದಿಗಳು ವೇಗವಾಗಿ ಹರಡುತ್ತಿವೆ. ಇದು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸುವುದಲ್ಲದೆ, ಭದ್ರತಾ ವ್ಯವಸ್ಥೆಗೆ ಸವಾಲನ್ನು ಒಡ್ಡುತ್ತಿದೆ. ಅಧಿಕೃತ ಮೂಲಗಳಿಂದ ಬಂದ ಮಾಹಿತಿಯನ್ನು ಮಾತ್ರ ನಂಬುವಂತೆ ಸೇನೆ ಮತ್ತು ಆಡಳಿತವು ನಿರಂತರವಾಗಿ ಜನರಿಗೆ ಮನವಿ ಮಾಡುತ್ತಿದೆ. ಆದಾಗ್ಯೂ ಸುಳ್ಳು ಸುದ್ದಿಗಳನ್ನು ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೇನೆ ಎಚ್ಚರಿಕೆ ನೀಡಿದೆ.
ಪಿಐಬಿ ಟ್ವೀಟ್
🚨 #Fake_news is circulating about a “fidayeen” attack on an Army brigade in #Rajouri, #Jammu and #Kashmir.#PIBFactCheck:
▶️ No such #fidayeen or suicide attack has occurred on any army cantt.
⚠️ Do not fall for these false claims intended to #mislead and cause confusion. pic.twitter.com/x8Az5tigUO
— PIB Fact Check (@PIBFactCheck) May 8, 2025
ಯಾವುದೇ ದೃಢೀಕೃತವಲ್ಲ ಸುದ್ದಿಗಳನ್ನು ಹಂಚಿಕೊಳ್ಳಬೇಡಿ. ವದಂತಿಗಳನ್ನು ಹರಡುವವರ ಬಗ್ಗೆ ಸ್ಥಳೀಯ ಆಡಳಿತಕ್ಕೆ ತಿಳಿಸಿ. ಸಾಮಾಜಿಕ ಮಾಧ್ಯಮದಲ್ಲಿ ಸಂಯಮ ಮತ್ತು ಜವಾಬ್ದಾರಿಯನ್ನು ಪಾಲಿಸಿ ಎಂದು ಸೇನೆ ಮನವಿ ಮಾಡಿದೆ.
ಇದನ್ನೂ ಓದಿ: ಪಾಕಿಸ್ತಾನದ ಜೊತೆಗಿನ ಉದ್ವಿಗ್ನತೆ ಬೆನ್ನಲ್ಲೇ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೊತೆ ರಾಜನಾಥ್ ಸಿಂಗ್ ಮಾತುಕತೆ
ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಪರಿಸ್ಥಿತಿ ಇರುವ ಸಂದರ್ಭದಲ್ಲೇ ಈ ರೀತಿಯ ಫೇಕ್ ನ್ಯೂಸ್ಗಳು ಹರಡುತ್ತಿರವುದು ಮತ್ತಷ್ಟು ಆತಂಕಕಾರಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ