Kisan Parliament: ನಾಳೆಯಿಂದ ಜಂತರ್ ಮಂತರ್​​ನಲ್ಲಿ ‘ಕಿಸಾನ್ ಪಾರ್ಲಿಮೆಂಟ್’, ಪ್ರತಿದಿನ ಇಲ್ಲಿ ಸೇರಲಿದ್ದಾರೆ 200 ರೈತರು

Jantar Mantar: ಪ್ರತಿಭಟನಾಕಾರರು ಮಂಗಳವಾರ ದೆಹಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ರೈತ ಮುಖಂಡರು ಜಂತರ್ ಮಂತರ್​​ನಲ್ಲಿ ಶಾಂತಿಯುತ ಪ್ರದರ್ಶನಗಳನ್ನು ನಡೆಸಲಿದ್ದಾರೆ. ಯಾವುದೇ ಪ್ರತಿಭಟನಾಕಾರರು ಸಂಸತ್ತಿಗೆ ಹೋಗುವುದಿಲ್ಲ ಎಂದು ಹೇಳಿದರು. ಜಂತರ್ ಮಂತರ್‌ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪ್ರತಿಭಟನೆ ನಡೆಯಲಿದೆ.

Kisan Parliament: ನಾಳೆಯಿಂದ ಜಂತರ್ ಮಂತರ್​​ನಲ್ಲಿ 'ಕಿಸಾನ್ ಪಾರ್ಲಿಮೆಂಟ್', ಪ್ರತಿದಿನ ಇಲ್ಲಿ ಸೇರಲಿದ್ದಾರೆ 200 ರೈತರು
ಸಂಸತ್ ಮುಂದೆ ನಿಯೋಜಿಸಲಾಗಿರುವ ಪೊಲೀಸ್ ಪಡೆ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Jul 21, 2021 | 12:16 PM

ದೆಹಲಿ: ಸರ್ಕಾರವು ಸಂಸತ್ತಿನೊಳಗೆ ವಿವಿಧ ವಿಷಯಗಳ ಬಗ್ಗೆ ವಿರೋಧವನ್ನು ಎದುರಿಸುತ್ತಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ತಮ್ಮ ಬೇಡಿಕೆಗಳನ್ನು ಸರ್ಕಾರ ಆಲಿಸದ ಹೊರತು ಮುಂಗಾರು ಅಧಿವೇಶನವನ್ನು ಸಾಮಾನ್ಯವಾಗಿ ಮುಂದುವರಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅದೇ ವೇಳೆ ಸಂಸತ್ತಿನ ಹೊರಗೆ ಸರ್ಕಾರ ಹೊಸ ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಎಂಟು ತಿಂಗಳಿಗೂ ಹೆಚ್ಚು ಕಾಲ ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರು ಜುಲೈ 22 ರಿಂದ ಜಂತರ್ ಮಂತರ್‌ನಲ್ಲಿ ‘ಕಿಸಾನ್ ಪಾರ್ಲಿಮೆಂಟ್’ ನಡೆಸುವುದಾಗಿ ಹೇಳಿದ್ದಾರೆ. ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಗುರುವಾರದಿಂದ ಪ್ರತಿದಿನ 200 ಪ್ರತಿಭಟನಾಕಾರರು ಜಂತರ್ ಮಂತರಿಗೆ ಹೋಗಬೇಕೆಂದು ನಿರ್ಧರಿಸಿದ್ದಾರೆ.

“ನಾವು ಜುಲೈ 22 ರಿಂದ ಮಾನ್ಸೂನ್ ಅಧಿವೇಶನ ಮುಗಿಯುವವರೆಗೆ ‘ಕಿಸಾನ್ ಪಾರ್ಲಿಮೆಂಟ್’ ನಡೆಸುತ್ತೇವೆ ಮತ್ತು ಪ್ರತಿದಿನ 200 ಪ್ರತಿಭಟನಾಕಾರರು ಜಂತರ್ ಮಂತರಿಗೆ ಹೋಗಲಿದ್ದಾರೆ. ಪ್ರತಿದಿನ ಒಬ್ಬ ಸ್ಪೀಕರ್ ಮತ್ತು ಒಬ್ಬ ಉಪ ಸ್ಪೀಕರ್ ಅವರನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ಎರಡು ದಿನಗಳಲ್ಲಿ ಎಪಿಎಂಸಿ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿದೆ. ನಂತರ, ಪ್ರತಿ ಎರಡು ದಿನಗಳಿಗೊಮ್ಮೆ ಇತರ ಮಸೂದೆಗಳ ಬಗ್ಗೆಯೂ ಚರ್ಚಿಸಲಾಗುವುದು ”ಎಂದು ರೈತ ಮುಖಂಡರು ಮಂಗಳವಾರ ಹೇಳಿದ್ದಾರೆ.

ಪ್ರತಿಭಟನಾಕಾರರು ಮಂಗಳವಾರ ದೆಹಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ರೈತ ಮುಖಂಡರು ಜಂತರ್ ಮಂತರ್​​ನಲ್ಲಿ ಶಾಂತಿಯುತ ಪ್ರದರ್ಶನಗಳನ್ನು ನಡೆಸಲಿದ್ದಾರೆ. ಯಾವುದೇ ಪ್ರತಿಭಟನಾಕಾರರು ಸಂಸತ್ತಿಗೆ ಹೋಗುವುದಿಲ್ಲ ಎಂದು ಹೇಳಿದರು. ಜಂತರ್ ಮಂತರ್‌ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪ್ರತಿಭಟನೆ ನಡೆಯಲಿದೆ.

“ಪ್ರತಿಭಟನಾಕಾರರ ಸಂಖ್ಯೆಯನ್ನು ಕಡಿಮೆ ಮಾಡಲು ಪೊಲೀಸರು ನಮ್ಮನ್ನು ಕೇಳಿದಾಗ, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಮನಹರಿಸಲು ನಾವು ಅವರಿಗೆ ಹೇಳಿದೆವು ಮತ್ತು ಪ್ರತಿಭಟನೆಯು ಶಾಂತಿಯುತವಾಗಿರುತ್ತದೆ ಎಂದು ಭರವಸೆ ನೀಡಿದ್ದೇವೆ” ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾಸಂಗ್ ರಾಷ್ಟ್ರೀಯ ಅಧ್ಯಕ್ಷ ಶಿವ ಕುಮಾರ್ ಕಕ್ಕಾ ಹೇಳಿದರು.

ಸಂಸತ್​ನ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದ್ದು ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ. ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಕಳೆದ ವರ್ಷ ನವೆಂಬರ್ 26 ರಿಂದ ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ರೈತ ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020- ಈ ಮೂರು ಕಾಯ್ದೆಗಳನ್ನು ರೈತರು ವಿರೋಧಿಸುತ್ತಿದ್ದಾರೆ.

ರೈತ ಮುಖಂಡರು ಮತ್ತು ಕೇಂದ್ರವು ಹಲವಾರು ಸುತ್ತಿನ ಮಾತುಕತೆ ನಡೆಸಿದರೂ ಬಿಕ್ಕಟ್ಟು ಉಳಿದಿದೆ.