ಪಾಕಿಸ್ತಾನ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದು ನಿಜ; ಮೊದಲ ಬಾರಿ ಒಪ್ಪಿಕೊಂಡ ಭಾರತ

ನಾವು ಭಾರತದ 6 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ. ಆದರೆ ಮೊದಲ ಬಾರಿಗೆ ಪಾಕಿಸ್ತಾನದ ದಾಳಿಯಿಂದ ಭಾರತದ ಯುದ್ಧ ವಿಮಾನಗಳ ನಷ್ಟವಾಗಿರುವುದು ನಿಜ ಎಂಬುದನ್ನು ಸಿಡಿಎಸ್ ಅನಿಲ್ ಚೌಹಾಣ್ ಒಪ್ಪಿಕೊಂಡಿದ್ದಾರೆ. ಎಷ್ಟು ಯುದ್ಧ ವಿಮಾನಗಳು ನಷ್ಟವಾಗಿದೆ ಎಂಬುದರ ಬಗ್ಗೆ ಅವರು ವಿವರವಾದ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಪಾಕಿಸ್ತಾನ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದು ನಿಜ; ಮೊದಲ ಬಾರಿ ಒಪ್ಪಿಕೊಂಡ ಭಾರತ
Anil Chauhan

Updated on: May 31, 2025 | 5:01 PM

ನವದೆಹಲಿ, ಮೇ 31: ಭಾರತ ಮತ್ತು ಪಾಕಿಸ್ತಾನದ (India-Pakistan Conflict) ನಡುವಿನ ದಾಳಿಯಲ್ಲಿ ನಾವು ಭಾರತದ 6 ಫೈಟರ್ ಜೆಟ್​ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ, ಅದನ್ನು ಭಾರತ ನಿರಾಕರಿಸಿದೆ. ಇದರ ಮಧ್ಯೆ ಮೊದಲ ಬಾರಿಗೆ ಭಾರತ ತನ್ನ ಯುದ್ಧ ವಿಮಾನ ಪಾಕಿಸ್ತಾನದ ದಾಳಿಯ ವೇಳೆ ನಷ್ಟವಾಗಿರುವುದು ನಿಜ ಎಂದು ಒಪ್ಪಿಕೊಂಡಿದೆ. ಮೇ ತಿಂಗಳಲ್ಲಿ ಪಾಕಿಸ್ತಾನದೊಂದಿಗಿನ ಘರ್ಷಣೆಯಲ್ಲಿ ಅನಿರ್ದಿಷ್ಟ ಸಂಖ್ಯೆಯ ಯುದ್ಧ ವಿಮಾನಗಳನ್ನು ಕಳೆದುಕೊಂಡಿರುವುದಾಗಿ ಭಾರತದ ಸೇನೆ ಮೊದಲ ಬಾರಿಗೆ ದೃಢಪಡಿಸಿದೆ. ಪಾಕಿಸ್ತಾನದೊಂದಿಗಿನ ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಭಾರತ ತನ್ನ ಫೈಟರ್ ಜೆಟ್‌ಗಳನ್ನು ಕಳೆದುಕೊಂಡಿದೆ ಎಂದು ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಒಪ್ಪಿಕೊಂಡಿದ್ದಾರೆ.

ಸಿಂಗಾಪುರದಲ್ಲಿ ಶಾಂಗ್ರಿ-ಲಾ ಸಂವಾದದ ಸಂದರ್ಭದಲ್ಲಿ ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯವನ್ನು ದೃಢಪಡಿಸಿದ್ದಾರೆ. ಆದರೆ, ವಿವರವಾದ ಮಾಹಿತಿ ನೀಡಲು ನಿರಾಕರಿಸಿದ್ದಾರೆ. “ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ್ದು ಮುಖ್ಯ ಸಂಗತಿಯಲ್ಲ. ಆ ಜೆಟ್ ಅನ್ನು ಏಕೆ ಹೊಡೆದುರುಳಿಸಲಾಯಿತು ಎಂಬುದು ಮುಖ್ಯ ಎಂದು ನಾನು ಭಾವಿಸುತ್ತೇನೆ” ಎಂದು ಅನಿಲ್ ಚೌಹಾಣ್ ಯುದ್ಧ ವಿಮಾನದ ನಷ್ಟಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದ್ದಾರೆ. ನಷ್ಟವಾದ ಭಾರತೀಯ ಜೆಟ್‌ಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಲು ಅವರು ನಿರಾಕರಿಸಿದರೂ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಪಾಕಿಸ್ತಾನದ ಹೇಳಿಕೆಗಳನ್ನು ಅವರು “ಸಂಪೂರ್ಣವಾಗಿ ತಪ್ಪು ಹೇಳಿಕೆ” ಎಂದು ತಳ್ಳಿಹಾಕಿದ್ದಾರೆ. ಮೂಲಗಳ ಪ್ರಕಾರ ಭಾರತದ 1 ಫೈಟರ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ.

ಇದನ್ನೂ ಓದಿ
ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪಾಕ್ ಸಿದ್ಧ ಎಂದ ಡೊನಾಲ್ಡ್ ಟ್ರಂಪ್
ರಾಹುಲ್ ಗಾಂಧಿ, ರೇವಂತ್ ರೆಡ್ಡಿಯಿಂದ ಸಶಸ್ತ್ರ ಪಡೆಗೆ ಅವಮಾನ; ಕಿಶನ್ ರೆಡ್ಡಿ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ

ಇದನ್ನೂ ಓದಿ: ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಕಾನ್ಪುರದಲ್ಲಿ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಎಚ್ಚರಿಕೆ

ಎಷ್ಟು ಫೈಟರ್ ಜೆಟ್​ಗಳು ಪತನವಾದವು, ಏಕೆ ಪತನಗೊಂಡವು ಎಂಬುದಕ್ಕಿಂತ ಯಾವ ತಪ್ಪಿಗಾಗಿ ದಾಳಿ ನಡೆಸಲಾಯಿತು ಎಂಬುದು ಮಾತ್ರ ಮುಖ್ಯ ಎಂದು ಅನಿಲ್ ಚೌಹಾಣ್ ಹೇಳಿದ್ದಾರೆ. ಮೇ 7ರಂದು ಪಾಕಿಸ್ತಾನದೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ದೇಶದ ಯುದ್ಧ ವಿಮಾನಗಳ ಭವಿಷ್ಯದ ಬಗ್ಗೆ ಭಾರತ ಸರ್ಕಾರ ಅಥವಾ ಮಿಲಿಟರಿ ಅಧಿಕಾರಿಯೊಬ್ಬರು ನೀಡಿರುವ ಮೊದಲ ನೇರ ಹೇಳಿಕೆಗಳು ಇವು.


“ನಾವು ಮಾಡಿದ ಯುದ್ಧತಂತ್ರದ ತಪ್ಪನ್ನು ಅರ್ಥಮಾಡಿಕೊಳ್ಳಲು, ಅದನ್ನು ಸರಿಪಡಿಸಲು, ಎರಡು ದಿನಗಳ ನಂತರ ಅದನ್ನು ಮತ್ತೆ ಕಾರ್ಯಗತಗೊಳಿಸಲು ನಮಗೆ ಸಾಧ್ಯವಾಗುತ್ತದೆ. ನಾವು ನಮ್ಮ ಎಲ್ಲಾ ಜೆಟ್‌ಗಳನ್ನು ಮತ್ತೆ ಹಾರಿಸಿದ್ದೇವೆ, ದೀರ್ಘ ವ್ಯಾಪ್ತಿಯನ್ನು ಗುರಿಯಾಗಿಸಿಕೊಂಡಿದ್ದೇವೆ” ಎಂದು ಅವರು ಬ್ಲೂಮ್‌ಬರ್ಗ್ ಟಿವಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂದೂರದ ಬಳಿಕ ಭಾರತದ ಡಿಫೆನ್ಸ್ ಶಕ್ತಿ ಮೇಲೆ ಜಗತ್ತಿನ ಕಣ್ಣು; ಯುದ್ಧವಿಮಾನ ತಯಾರಿಕೆಯಲ್ಲೂ ಪಳಗುತ್ತಿದೆ ಭಾರತ

ಮೇ 28ರಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ವಾಯುಪಡೆಯು ಹೋರಾಟದ ಮೊದಲ ದಿನದಂದು ಭಾರತದ 4 ರಫೇಲ್‌ಗಳು ಸೇರಿದಂತೆ 6 ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿಕೊಂಡಿದ್ದರು. ಲಾಚಿನ್ ನಗರದಲ್ಲಿ ಅಜೆರ್ಬೈಜಾನಿ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದರು.

ಭಾರತ- ಪಾಕಿಸ್ತಾನದ ನಡುವಿನ ಪರಮಾಣು ಯುದ್ಧವನ್ನು ತಪ್ಪಿಸಲು ಅಮೆರಿಕ ಸಹಾಯ ಮಾಡಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಬಗ್ಗೆ ಜನರಲ್ ಚೌಹಾಣ್ ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ ಎರಡೂ ಕಡೆಯವರು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆ ಇದೆ ಎಂದು ಹೇಳುವುದು “ಅಸಂಭವ” ಎಂದು ಹೇಳಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪಾಕಿಸ್ತಾನದೊಂದಿಗಿನ ಸಂವಹನ ಮಾರ್ಗಗಳು ಯಾವಾಗಲೂ ತೆರೆದಿರುತ್ತವೆ ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ