ಭತ್ತ, ರಾಗಿ, ಜೋಳ ಸೇರಿ 14 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಮೋದಿ ಸರ್ಕಾರ ನಿರ್ಧಾರ

ಭಾರತದ 14 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಭತ್ತ, ರಾಗಿ, ಸಜ್ಜೆ, ಜೋಳ, ಮೆಕ್ಕೆಜೋಳ, ಹತ್ತಿ ಸೇರಿದಂತೆ 14 ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಇಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಭತ್ತ, ರಾಗಿ, ಜೋಳ ಸೇರಿ 14 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಮೋದಿ ಸರ್ಕಾರ ನಿರ್ಧಾರ
ಬೆಳೆ
Follow us
|

Updated on: Jun 19, 2024 | 9:04 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯಲ್ಲಿ ಇಂದು (ಬುಧವಾರ) ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 14 ಖಾರಿಫ್ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಅನುಮೋದನೆ ನೀಡಿದೆ. “ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ನೀಡಲು ಸರ್ಕಾರವು 2024-25ರ ಮಾರ್ಕೆಟಿಂಗ್ ಸೀಸನ್‌ಗಾಗಿ ಖಾರಿಫ್ ಬೆಳೆಗಳ MSP ಅನ್ನು ಹೆಚ್ಚಿಸಿದೆ” ಎಂದು ಕೃಷಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳಿಗೆ ಎಂಎಸ್‌ಪಿಯಲ್ಲಿ ಅತ್ಯಧಿಕ ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಅವುಗಳೆಂದರೆ ನೈಜರ್‌ಬೀಡ್ (ಕ್ವಿಂಟಲ್‌ಗೆ 983 ರೂ. ಹೆಚ್ಚಳ), ಎಳ್ಳು (ಕ್ವಿಂಟಲ್‌ಗೆ 632 ರೂ. ಹೆಚ್ಚಳ) ಮತ್ತು ಅರ್ಹರ್ ದಾಲ್ (ಕ್ವಿಂಟಲ್‌ಗೆ 550 ರೂ. ಹೆಚ್ಚಳ) ಎಂದು ಅದು ಹೇಳಿದೆ. ನೈಜರ್‌ಸೀಡ್‌ ಮೇಲಿನ ಎಂಎಸ್‌ಪಿಯನ್ನು 5,811 ರೂ.ನಿಂದ 8,717 ರೂ.ಗೆ ಹೆಚ್ಚಿಸಲಾಗಿದ್ದು, ಸೆಸಮುಮ್‌ನ ಎಂಎಸ್‌ಪಿ 6,178 ರೂ.ನಿಂದ 9,267 ರೂ.ಗೆ ಮತ್ತು ಅರ್ಹರ್ ದಾಲ್ ಮೇಲಿನ ಎಂಎಸ್‌ಪಿ 4,761 ರೂ.ನಿಂದ 7,550 ರೂ.ಗೆ ಏರಿಸಲಾಗಿದೆ.

ಭತ್ತದ ಮೇಲಿನ ಎಂಎಸ್‌ಪಿಯನ್ನು 1,533 ರೂ.ನಿಂದ 2,300 ರೂ.ಗೆ ಹೆಚ್ಚಿಸಲಾಗಿದ್ದು, ಜೋವರ್ ಮೇಲಿನ ಎಂಎಸ್‌ಪಿ 2,247 ರೂ.ನಿಂದ 3,371 ರೂ.ಗೆ ಏರಿಕೆಯಾಗಿದೆ. ಸಚಿವ ಸಂಪುಟದ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, ಇಂದಿನ ನಿರ್ಧಾರದಿಂದ ರೈತರಿಗೆ ಸುಮಾರು 2 ಲಕ್ಷ ಕೋಟಿ ಎಂಎಸ್‌ಪಿ ಸಿಗಲಿದೆ. ಇದು ಹಿಂದಿನ ಹಂಗಾಮಿಗಿಂತ 35,000 ಕೋಟಿ ರೂ. ಹೆಚ್ಚಾಗಿದೆ ಎಂದಿದ್ದಾರೆ.

ಇದನ್ನೂ ಓದಿ: PM Modi Varanasi visit: ಉತ್ತರ ಕರ್ನಾಟಕದ ಮಹಿಳೆಗೆ ಪಿಎಂ ಕಿಸಾನ್ ಯೋಜನೆ ಪ್ರಮಾಣ ಪತ್ರ ನೀಡಿದ ಮೋದಿ

ಕೇಂದ್ರ ಸಚಿವ ಸಂಪುಟವು ಇಂದು ಭತ್ತ, ರಾಗಿ, ಬಾಜ್ರಾ, ಜೋಳ, ಮೆಕ್ಕೆಜೋಳ ಮತ್ತು ಹತ್ತಿ ಸೇರಿದಂತೆ 14 ಖಾರಿಫ್ ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಘೋಷಿಸಿತು. ಇದರಿಂದ ಸರ್ಕಾರಕ್ಕೆ 2 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪರಿಣಾಮ ಬೀರಲಿದೆ. ಕೇಂದ್ರ ಸಂಪುಟ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ರೈತರ ಕಲ್ಯಾಣಕ್ಕಾಗಿ ಹಲವು ನಿರ್ಧಾರಗಳ ಮೂಲಕ ಬದಲಾವಣೆಯೊಂದಿಗೆ ನಿರಂತರತೆಯತ್ತ ಗಮನಹರಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವ ಸಂಪುಟದ ನಿರ್ಧಾರಗಳ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಭತ್ತ, ರಾಗಿ, ಬಾಜ್ರಾ, ಜೋಳ, ಮೆಕ್ಕೆಜೋಳ ಮತ್ತು ಹತ್ತಿ ಸೇರಿದಂತೆ 14 ಖಾರಿಫ್ ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಸಂಪುಟ ಅನುಮೋದಿಸಿದೆ. ಪ್ರಧಾನಿ ಮೋದಿಯವರ ಮೂರನೇ ಅವಧಿಯು ಬಹಳ ಮುಖ್ಯವಾಗಿದೆ. ಏಕೆಂದರೆ ಅದು ರೈತರ ಕಲ್ಯಾಣಕ್ಕಾಗಿ ಅನೇಕ ನಿರ್ಧಾರಗಳ ಮೂಲಕ ಬದಲಾವಣೆಯೊಂದಿಗೆ ನಿರಂತರತೆಯನ್ನು ಕೇಂದ್ರೀಕರಿಸುತ್ತದೆ.” ಎಂದಿದ್ದಾರೆ.

ಇದೇ ವೇಳೆ ಮಹಾರಾಷ್ಟ್ರದ ವಧವನ್‌ನಲ್ಲಿ ಸರ್ವಋತು ಗ್ರೀನ್‌ಫೀಲ್ಡ್ ಡೀಪ್-ಡ್ರಾಫ್ಟ್ ಮೇಜರ್ ಪೋರ್ಟ್ ಅನ್ನು ಅಭಿವೃದ್ಧಿಪಡಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರದ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹನುದಲ್ಲಿ ವಾಧವನ್ ಬಂದರಿಗೆ 76,200 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದು 23 ಮಿಲಿಯನ್ TU ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಬಂದರು 12 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ.” ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರವಾಸದಿಂದ ಭಾರತಕ್ಕೆ ಆದ ಲಾಭವೇನು?

ಸಚಿವ ಸಂಪುಟದ ನಿರ್ಧಾರದ ಕುರಿತು ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, “2,870 ಕೋಟಿ ರೂ. ವೆಚ್ಚದಲ್ಲಿ ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಪ್ರಸ್ತಾವನೆಯು ರನ್‌ವೇ ವಿಸ್ತರಣೆ ಮತ್ತು ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಿಸುತ್ತದೆ.” ಎಂದು ತಿಳಿಸಿದ್ದಾರೆ.

ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುವ ಪಿಎಂ ಕಿಸಾನ್ ನಿಧಿಯ 17ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು. ಮಂಗಳವಾರ ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ಸುಮಾರು 9.26 ಕೋಟಿ ಫಲಾನುಭವಿ ರೈತರಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ 17ನೇ ಕಂತನ್ನು ನೇರ ಲಾಭ ವರ್ಗಾವಣೆ ಮೂಲಕ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ