AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಹರು ದಾಖಲೆ ಮುರಿಯಲು ಸಜ್ಜಾದ ಮೋದಿ; ಇಬ್ಬರೂ ಪ್ರಧಾನಿಗಳ ಅಧಿಕಾರಾವಧಿಯ ನಡುವಿನ ಹೋಲಿಕೆಗಳೇನು?

ಭಾರತದ ಮೊದಲ ಪ್ರಧಾನಿಯಾದ ನೆಹರು ಮತ್ತು ಈಗಿನ ಪ್ರಧಾನಿ ಮೋದಿಯ ನಡುವೆ ಹೋಲಿಕೆ ಮಾಡಲಾಗದು. ಏಕೆಂದರೆ, ಇಬ್ಬರ ಅವಧಿಯ ಮಧ್ಯೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಾಕಷ್ಟು ಅಂತರವಿದೆ. ಪಂಡಿತ್ ಜವಾಹರಲಾಲ್ ನೆಹರು ಅವರು ನವ ಭಾರತಕ್ಕೆ ಬೇಕಾದ ಬೌದ್ಧಿಕ ಮತ್ತು ಸಾಂಸ್ಥಿಕ ಅಡಿಪಾಯವನ್ನು ಹಾಕಿಕೊಟ್ಟರೆ, ಪ್ರಧಾನಿ ನರೇಂದ್ರ ಮೋದಿ ಆ ಅಡಿಪಾಯವನ್ನು ಇಂದಿನ ಆಧುನಿಕ ಜಗತ್ತಿನ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಹೆಮ್ಮೆಯೊಂದಿಗೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.

ನೆಹರು ದಾಖಲೆ ಮುರಿಯಲು ಸಜ್ಜಾದ ಮೋದಿ; ಇಬ್ಬರೂ ಪ್ರಧಾನಿಗಳ ಅಧಿಕಾರಾವಧಿಯ ನಡುವಿನ ಹೋಲಿಕೆಗಳೇನು?
Pm Narendra Modi And Nehru
ಸುಷ್ಮಾ ಚಕ್ರೆ
|

Updated on:Jun 06, 2026 | 3:44 PM

Share

ನವದೆಹಲಿ, ಜೂನ್ 6: ಬರುವ ಜೂನ್ 10ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿ, ಭಾರತದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಗೆ ಸತತವಾಗಿ ಅಧಿಕಾರ ನಡೆಸಿದ ಪ್ರಜಾಸತ್ತಾತ್ಮಕ ಪ್ರಧಾನಿ ಎಂಬ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ದೇಶವನ್ನು ಮುನ್ನಡೆಸಿದ ಪ್ರಮುಖ ಪ್ರಧಾನಿಗಳು. ಆದರೆ, ಇಬ್ಬರ ನಾಯಕತ್ವದ ಶೈಲಿ, ಸಿದ್ಧಾಂತ ಮತ್ತು ಅವರು ಆಡಳಿತ ನಡೆಸಿದ ಕಾಲಘಟ್ಟಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಇಬ್ಬರ ನಾಯಕತ್ವದ ನಡುವಿನ ಪ್ರಮುಖ ವ್ಯತ್ಯಾಸಗಳು ಹಾಗೂ ಹೋಲಿಕೆಗಳು ಇಲ್ಲಿವೆ.

ಆಡಳಿತದ ಮಾದರಿ ಹೇಗಿತ್ತು?:

ನೆಹರು ಅವರ ಆಡಳಿತವು ಹೆಚ್ಚಾಗಿ ಕೇಂದ್ರೀಕೃತವಾಗಿತ್ತು. ರಾಜಕೀಯ ಗಣ್ಯರು, ತಜ್ಞರು ಮತ್ತು ಆಯ್ದ ಅಧಿಕಾರಿಗಳ ಮೂಲಕ ಮೇಲಿಂದ ಕೆಳಮಟ್ಟಕ್ಕೆ ನಿರ್ಧಾರಗಳು ಹರಿದು ಬರುತ್ತಿದ್ದವು. ಆದರೆ, ಪ್ರಧಾನಿ ಮೋದಿ ಅವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್” ತತ್ವವು ಆಡಳಿತವನ್ನು ಕೇವಲ ಸರ್ಕಾರದ ಕಾರ್ಯಕ್ರಮವಾಗಿಸದೆ, ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಯ ‘ಜನ ಚಳುವಳಿ’ಯನ್ನಾಗಿ ಮಾರ್ಪಡಿಸಿದೆ. ಸ್ವಚ್ಛ ಭಾರತ ಅಭಿಯಾನ ಅದಕ್ಕೆ ಉದಾಹರಣೆ.

ಇದನ್ನೂ ಓದಿ: ಜೂನ್ 10 ಕ್ಕೆ ಪ್ರಧಾನಿ ಮೋದಿ ಹೆಸರಿಗೆ ಹೊಸ ದಾಖಲೆ, ನೆಹರು ಅಧಿಕಾರಾವಧಿ ಹಿಂದಿಕ್ಕಲಿರುವ ನವ ಭಾರತದ ಸಾರಥಿ

ನೆಹರು ಅವರು ಸೋವಿಯತ್ ಮಾದರಿಯ ಸಮಾಜವಾದಿ ಆರ್ಥಿಕತೆಗೆ ಆದ್ಯತೆ ನೀಡಿದರು. ಭಾರಿ ಉದ್ಯಮಗಳು, ಅಣೆಕಟ್ಟುಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿ ಸ್ಥಾಪಿಸಲು ಒತ್ತು ನೀಡಿದರು. ಖಾಸಗಿ ಬಂಡವಾಳಕ್ಕೆ ಮಿತಿ ಇತ್ತು. ಪ್ರಧಾನಿ ಮೋದಿ ಅವರ ಮಾದರಿಯು ‘ಆತ್ಮನಿರ್ಭರ ಭಾರತ’ ಮತ್ತು ಮುಕ್ತ ಮಾರುಕಟ್ಟೆಗೆ ಆದ್ಯತೆ ನೀಡುತ್ತದೆ. ಸ್ಟಾರ್ಟ್‌ಅಪ್‌ಗಳು, ಡಿಜಿಟಲ್ ಆರ್ಥಿಕತೆ (UPI), ಮೇಕ್ ಇನ್ ಇಂಡಿಯಾ ಮತ್ತು ಖಾಸಗಿ ಉದ್ಯಮಿಗಳನ್ನು ದೇಶದ ಪ್ರಗತಿಯ ಸಹಭಾಗಿಗಳನ್ನಾಗಿ ನೋಡಲಾಗುತ್ತದೆ. ಬಡತನ ನಿರ್ಮೂಲನೆಗೆ ನೇರ ನಗದು ವರ್ಗಾವಣೆ (DBT) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿ:

ಶೀತಲ ಸಮರದ ಕಾಲದಲ್ಲಿ ನೆಹರು ಅವರು ಯಾವುದೇ ಜಾಗತಿಕ ಬಣಕ್ಕೆ (ಅಮೆರಿಕ ಅಥವಾ ರಷ್ಯಾ) ಸೇರದೆ ‘ಅಲಿಪ್ತ ನೀತಿ’ಯನ್ನು ಅನುಸರಿಸಿದರು. ಇದು ನೈತಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದರೂ, ಕೆಲವು ನಿರ್ಣಾಯಕ ಸಮಯದಲ್ಲಿ ಭಾರತ ಜಾಗತಿಕವಾಗಿ ಒಂಟಿಯಾಗುವಂತೆ ಮಾಡಿತು. ಮೋದಿ ಅವರ ವಿದೇಶಾಂಗ ನೀತಿಯು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತದೆ. ಭಾರತವು ಅಮೆರಿಕ, ರಷ್ಯಾ, ಯುರೋಪ್ ಹಾಗೂ ಗಲ್ಫ್ ರಾಷ್ಟ್ರಗಳೊಂದಿಗೆ ಏಕಕಾಲದಲ್ಲಿ ಬಲಿಷ್ಠ ಮತ್ತು ಸಮಾನ ರಾಜತಾಂತ್ರಿಕ ಹಾಗೂ ರಕ್ಷಣಾತ್ಮಕ ಸಂಬಂಧವನ್ನು ಕಾಯ್ದುಕೊಂಡಿದೆ. ಇಂದು ಭಾರತವು ಜಾಗತಿಕ ನಿರ್ಧಾರಗಳನ್ನು ನಿಯಂತ್ರಿಸುವ ಶಕ್ತಿಯಾಗಿ ಹೊರಹೊಮ್ಮಿದೆ.

ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತು:

ನೆಹರು ಅವರ ರಾಜಕಾರಣವು ಪಾಶ್ಚಿಮಾತ್ಯ ಆಧುನಿಕತೆ ಮತ್ತು ಪ್ರಗತಿಪರ ಚಿಂತನೆಗಳಿಂದ ಪ್ರಭಾವಿತವಾಗಿತ್ತು. ಅವರು ಸಾರ್ವಜನಿಕ ಜೀವನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತುಗಳಿಂದ ಅಂತರ ಕಾಯ್ದುಕೊಳ್ಳಲು ಬಯಸಿದ್ದರು. ಪ್ರಧಾನಿ ಮೋದಿ ಭಾರತೀಯ ನಾಗರಿಕತೆಯ ಪ್ರಜ್ಞೆ, ಸಾಂಸ್ಕೃತಿಕ ಹೆಮ್ಮೆ ಮತ್ತು ಐತಿಹಾಸಿಕ ಗುರುತನ್ನು ರಾಷ್ಟ್ರೀಯ ರಾಜಕಾರಣದ ಕೇಂದ್ರಬಿಂದುವಾಗಿಸಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಜಾಗತಿಕ ಮಟ್ಟದಲ್ಲಿ ಅಂತರರಾಷ್ಟ್ರೀಯ ಯೋಗ ದಿನದಂತಹ ಭಾರತದ ಸಾಂಸ್ಕೃತಿಕ ರಾಯಭಾರತ್ವಕ್ಕೆ ಇವರ ಆಡಳಿತದಲ್ಲಿ ಹೆಚ್ಚಿನ ಒತ್ತು ಸಿಕ್ಕಿದೆ.

ಇದನ್ನೂ ಓದಿ: ಜವಾಹರಲಾಲ್ ನೆಹರು- ನರೇಂದ್ರ ಮೋದಿ ಅವಧಿಯ ವ್ಯತ್ಯಾಸಗಳೇನು? ಇಬ್ಬರ ನಾಯಕತ್ವದ ಅವಲೋಕನ ಇಲ್ಲಿದೆ

ರಾಜಕೀಯ ಹಿನ್ನೆಲೆ ಮತ್ತು ಸವಾಲುಗಳು;

ನೆಹರು ಸ್ವಾತಂತ್ರ್ಯ ಹೋರಾಟದ ನಾಯಕತ್ವದ ಹಿನ್ನೆಲೆ, ಮಹಾತ್ಮ ಗಾಂಧೀಜಿಯವರ ಬೆಂಬಲ ಹಾಗೂ ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯದ ಅಲೆಯಲ್ಲಿ ನೆಹರು ನೇರವಾಗಿ ಅಧಿಕಾರಕ್ಕೆ ಬಂದರು. ಅವರಿಗೆ ದೇಶದ ಒಳಗಡೆ ರಾಜಕೀಯ ಪೈಪೋಟಿ ತೀರಾ ಕಡಿಮೆ ಇತ್ತು. ಆದರೆ ಮೋದಿ ಯಾವುದೇ ರಾಜಕೀಯ ಗಾಡ್‌ಫಾದರ್ ಇಲ್ಲದೆ, ದಶಕಗಳ ಕಾಲ ತಳಮಟ್ಟದ ಸಾಂಸ್ಥಿಕ ಹೋರಾಟ ಮತ್ತು ಸುದೀರ್ಘ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಆಡಳಿತಾತ್ಮಕ ಅನುಭವ ಪಡೆದ ನಂತರ ಪ್ರಧಾನಿ ಹುದ್ದೆಗೇರಿದ್ದಾರೆ. ಪ್ರಾದೇಶಿಕ ಪಕ್ಷಗಳ ಭಾರಿ ಪೈಪೋಟಿ, ತೀವ್ರ ರಾಜಕೀಯ ಸ್ಪರ್ಧೆ ಮತ್ತು ಸೋಷಿಯಲ್ ಮೀಡಿಯಾದ ಕಣ್ಗಾವಲಿನ ಯುಗದಲ್ಲಿ ಇವರು ಆಡಳಿತ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Sat, 6 June 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More