ನೀವ್ಯಾವ ಬಜೆಟ್​ನಲ್ಲಿ ಎಲ್ಲಾ ರಾಜ್ಯಗಳ ಹೆಸರು ಎತ್ತಿದ್ದೀರಿ? ಕಾಂಗ್ರೆಸ್​ಗೆ ನಿರ್ಮಲಾ ಸೀತಾರಾಮನ್ ಸವಾಲು

|

Updated on: Jul 30, 2024 | 5:54 PM

Nirmala Sitharaman speaks at Rajya Sabha: ಜುಲೈ 23ರಂದು ಮಂಡಿಸಲಾದ ಕೇಂದ್ರ ಬಜೆಟ್​ನ ಭಾಷಣದಲ್ಲಿ ಬಿಹಾರ ಮತ್ತು ಆಂಧ್ರ ಹೆಸರನ್ನು ಪ್ರಸ್ತಾಪಿಸಲಾಗಿದೆ. ಬೇರೆ ಹಲವು ರಾಜ್ಯಗಳ ಹೆಸರನ್ನೇ ಎತ್ತಿಲ್ಲ. ಬಜೆಟ್​ನಲ್ಲಿ ಸಾಮಾಜಿಕ ವಲಯಕ್ಕೆ ಫಂಡಿಂಗ್ ಹೆಚ್ಚಿಸಿಲ್ಲ ಎನ್ನುವ ವಿಪಕ್ಷಗಳ ಆರೋಪಗಳನ್ನು ರಾಜ್ಯಸಭೆಯಲ್ಲಿಂದು ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದಾರೆ.

ನೀವ್ಯಾವ ಬಜೆಟ್​ನಲ್ಲಿ ಎಲ್ಲಾ ರಾಜ್ಯಗಳ ಹೆಸರು ಎತ್ತಿದ್ದೀರಿ? ಕಾಂಗ್ರೆಸ್​ಗೆ ನಿರ್ಮಲಾ ಸೀತಾರಾಮನ್ ಸವಾಲು
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ, ಜುಲೈ 30: ಈ ಬಾರಿಯ ಬಜೆಟ್​ನಲ್ಲಿ ಸಾಮಾಜಿಕ ವಲಯಗಳನ್ನು ಕಡೆಗಣಿಸಲಾಗಿದೆ. ಬಿಹಾರ ಮತ್ತು ಆಂಧ್ರಪ್ರದೇಶ ಈ ಎರಡು ರಾಜ್ಯಗಳ ಹೆಸರನ್ನು ಮಾತ್ರವೇ ಪ್ರಸ್ತಾಪಿಸಲಾಗಿದೆ ಎನ್ನುವ ಆರೋಪಗಳನ್ನು ವಿಪಕ್ಷಗಳು ಇಂದೂ ಕೂಡ ಮುಂದುವರಿಸಿವೆ. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಮೇಲಿನ ಎರಡು ಅಂಶಗಳೂ ಸೇರಿದಂತೆ ಬಜೆಟ್ ವಿರುದ್ಧ ಕಿಡಿಕಾರಿದರು. ಜುಲೈ 23ರಂದು ಬಜೆಟ್ ಮಂಡಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಪಕ್ಷಗಳ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮಂಡಿಸಲಾದ ಯಾವುದೇ ಬಜೆಟ್​ನಲ್ಲಿ ಎಲ್ಲಾ ರಾಜ್ಯಗಳ ಹೆಸರು ಎತ್ತಲಾಗಿದ್ದರೆ ತೋರಿಸಿ ಎಂದು ಸವಾಲು ಕೂಡ ಹಾಕಿದರು.

‘ವಿಪಕ್ಷ ನಾಯಕ ಖರ್ಗೆಯವರು ಎತ್ತಿದ ಅಂಶಗಳ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಪ್ರಜಾತಂತ್ರದ ಗೌರವಕ್ಕಾದರೂ ವಿಪಕ್ಷ ಕೇಳುತ್ತದೆ ಎಂದು ನಿರೀಕ್ಷಿಸುವುದೇ ತಪ್ಪೇನೋ. ಅದಿರಲಿ, ಖರ್ಗೆ ಅವರು ನಾನು ಎರಡು ರಾಜ್ಯಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಹಲವು ರಾಜ್ಯಗಳ ಹೆಸರನ್ನೇ ಎತ್ತಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ಹಲವಾರು ಬಜೆಟ್​ಗಳನ್ನು ಮಂಡಿಸಿದೆ. ಪ್ರತೀ ಬಜೆಟ್​ನಲ್ಲೂ ಎಲ್ಲಾ ರಾಜ್ಯದ ಹೆಸರು ಎತ್ತಿರುವ ಅವಕಾಶ ಇರುವುದಿಲ್ಲ ಎನ್ನುವುದು ಅವರಿಗೆ ಗೊತ್ತಿರಬೇಕು,’ ಎಂದು ಸೀತಾರಾಮನ್ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಇದನ್ನೂ ಓದಿ: ನನ್ನ ಅವಧಿಯಲ್ಲೇ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ: ನರೇಂದ್ರ ಮೋದಿ

‘ಬಜೆಟ್ ಭಾಷಣದಲ್ಲಿ ಒಂದು ರಾಜ್ಯದ ಹೆಸರು ಪ್ರಸ್ತಾಪ ಆಗಿಲ್ಲ ಎಂದರೆ ಯೋಜನೆಗಳು, ವಿಶ್ವಬ್ಯಾಂಕ್​ನಂತಹ ಬಾಹ್ಯ ಹಣಕಾಸು ಸಂಸ್ಥೆಗಳ ಸಾಲದ ನೆರವುಗಳು ಆ ರಾಜ್ಯಗಳಿಗೆ ಹೋಗುವುದಿಲ್ಲ ಎಂದರ್ಥವಾ? ಈ ಸೌಲಭ್ಯಗಳು ಯಥಾಪ್ರಕಾರ ದೊರಕುತ್ತವೆ. ವಿಭಾಗವಾರು ನಿಯೋಜನೆ, ವೆಚ್ಚ ಪಟ್ಟಿಯಿಂದ ಇದು ತಿಳಿಯುತ್ತದೆ.

‘ಮಹಾರಾಷ್ಟ್ರ ಹೆಸರು ಎತ್ತಿಲ್ಲ ಎಂದು ಬಜೆಟ್​ನಲ್ಲಿ ಆ ರಾಜ್ಯವನ್ನು ಕಡೆಗಣಿಸಲಾಗಿದೆಯಾ? ವಾಧವಾನ್ ಬಂದರು ಅಭಿವೃದ್ಧಿಗೆ 76,000 ಕೋಟಿ ರೂ ಕೊಡಲಾಗಿದೆ’ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.

ಟಿಎಂಸಿಗೆ ಎಷ್ಟು ಧೈರ್ಯ ಇರಬೇಕು; ನಿರ್ಮಲಾ ಕಿಡಿ

ಬಜೆಟ್​ನಲ್ಲಿ ಪಶ್ಚಿಮ ಬಂಗಾಳಕ್ಕೆ ಏನೂ ಕೊಟ್ಟಿಲ್ಲ ಎಂದು ನಿನ್ನೆ ಟಿಎಂಸಿ ಸದಸ್ಯರು ಮಾಡಿದ ಆರೋಪಕ್ಕೆ ನಿರ್ಮಲಾ ಸೀತಾರಾಮನ್ ಇಂದು ತಿರುಗೇಟು ನೀಡಿದರು. ‘ಪ್ರಧಾನಿ ಮೋದಿ ಕೊಟ್ಟ ಹಲವು ಯೋಜನೆಗಳನ್ನು ಬಂಗಾಳದಲ್ಲಿ ನೀವು ಜಾರಿಗೆ ತಂದೇ ಇಲ್ಲ. ಆದರೂ ಕೂಡ ಈಗ ಕೇಳುವ ಧೈರ್ಯ ತೋರುತ್ತಿದೆ’ ಎಂದು ಅವರು ಅಸಮಾಧಾನ ಪಟ್ಟರು.

ಇದನ್ನೂ ಓದಿ: ದೆಹಲಿಯಲ್ಲಿ ಒಳ್ಳೆ ಕೆಲಸ ಮಾಡಿದ ಆಮ್ ಆದ್ಮಿ ಸಚಿವರನ್ನು ಬಿಜೆಪಿ ಜೈಲಿಗೆ ತಳ್ಳಿದೆ; ಸಿಎಂ ಭಗವಂತ್ ಮಾನ್ ಆರೋಪ

ಸಾಮಾಜಿಕ ವಲಯದ ಕಡಗಣನೆ ಇಲ್ಲ: ನಿರ್ಮಲಾ

ಸಾಮಾಜಿಕ ವಲಯಕ್ಕೆ ಕಡಿಮೆ ಹಣ ಕೊಡಲಾಗಿದೆ ಎನ್ನುವ ಆರೋಪವನ್ನೂ ಹಣಕಾಸು ಸಚಿವರು ತಳ್ಳಿಹಾಕಿದರು. ಕೃಷಿ, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ವಲಯಗಳಿಗೆ ಫಂಡಿಂಗ್ ಅನ್ನು ಈ ಬಜೆಟ್​ನಲ್ಲಿ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, 2047ರೊಳಗೆ ವಿಕಸಿತ ಭಾರತದ ನಿರ್ಮಾಣ ಸಾಧಿಸುವ ಗುರಿಯನ್ನು ಈ ಬಜೆಟ್ ಹೊಂದಿದೆ ಎಂದು ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ