ಪಾಕಿಸ್ತಾನ ಸೇನಾ ಪೋಸ್ಟ್ ಉಡೀಸ್: ಭಾರತೀಯ ಸೇನೆಯೇ ಬಿಡುಗಡೆ ಮಾಡಿದ ಮೊದಲ ಅಧಿಕೃತ ವಿಡಿಯೋ ಇಲ್ಲಿದೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಉದ್ವಿಗ್ನತೆ ಹೆಚ್ಚಾಗಿದ್ದು, ಜಮ್ಮು ಕಾಶ್ಮೀರದ ಗಡಿಗಳಲ್ಲಿ ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ಮಾಡಿದೆ. ಪಾಕಿಸ್ತಾನದ ಹಲವು ಮಿಲಿಟರಿ ನೆಲೆಗಳು ನಾಶವಾಗಿವೆ. ಭಾರತೀಯ ವಾಯುಪಡೆ ಕೂಡಾ ದಾಳಿ ನಡೆಸಿದೆ. ಇದೀಗ ಭಾರತೀಯ ಸೇನೆಯು ಪಾಕಿಸ್ತಾನ ಸೇನೆಯ ಪೋಸ್ಟ್ ನಾಶಗೊಳಿಸಿದ ಅಧಿಕೃತ ವಿಡಿಯೋ ಬಿಡುಗಡೆ ಮಾಡಿದೆ.

ನವದೆಹಲಿ, ಮೇ 9: ಭಾರತ ಹಾಗೂ ಪಾಕಿಸ್ತಾನ (India Pakistan War) ನಡುವಣ ಉದ್ವಿಗ್ನತೆ ಹೆಚ್ಚಾಗಿದ್ದು, ಗಡಿಯಾಚೆಯಿಂದ ಪಾಕ್ ಸೇನೆ ನಡೆಸುತ್ತಿರುವ ಗುಂಡಿನ ದಾಳಿಗೆ ಭಾರತೀಯ ಸೇನೆ (Indian Army) ಸೂಕ್ತ ತಿರುಗೇಟು ನೀಡುತ್ತಿದೆ. ಇದರ ಪರಿಣಾಮ, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಹಲವಾರು ಪಾಕಿಸ್ತಾನಿ ಸೇನಾ ನೆಲೆಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ. ಗಡಿ ನಿಯಂತ್ರಣ ರೇಖೆಯಾದ್ಯಂತ ಭಾರತೀಯ ವಾಯುಪಡೆ ಕೂಡ ದಾಳಿ ನಡೆಸಿದ್ದು, ಪಾಕಿಸ್ತಾನದ ಮಿಲಿಟರಿ ನೆಲೆ ನಾಶವಾದ ಮೊದಲ ಅಧಿಕೃತ ವಿಡಿಯೋವನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡಿದೆ.
ಭಾರತೀಯ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಪಡೆಗಳು ಹಲವಾರು ಸುತ್ತಿನ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದನ್ನು ಭಾರತೀಯ ಸೇನೆ ವಿಫಲಗೊಳಿಸಿತು. ಅದಾದ ಕೆಲವೇ ಗಂಟೆಗಳ ನಂತರ ಗಡಿಯಾಚೆಗಿನ ಗುಂಡಿನ ದಾಳಿ ಮತ್ತೆ ಆರಂಭವಾಯಿತು. ನಂತರ ಈ ಪ್ರತಿದಾಳಿ ನಡೆದಿದೆ ಎಂದು ಸೇನೆ ತಿಳಿಸಿದೆ.
ಸೇನೆ ಬಿಡುಗಡೆ ಮಾಡಿದ ವಿಡಿಯೋ ಇಲ್ಲಿದೆ
OPERATION SINDOOR
Pakistan Armed Forces launched multiple attacks using drones and other munitions along entire Western Border on the intervening night of 08 and 09 May 2025. Pak troops also resorted to numerous cease fire violations (CFVs) along the Line of Control in Jammu and… pic.twitter.com/WTdg1ahIZp
— ADG PI – INDIAN ARMY (@adgpi) May 9, 2025
ಪಾಕಿಸ್ತಾನದ ಸೇನಾ ನೆಲೆ ಯಾವ ವಲಯದಲ್ಲಿ ನಾಶವಾಗಿದೆ ಎಂಬುದು ತಿಳಿದಿಲ್ಲ. ಆದರೆ ಭಾರತೀಯ ಸೇನೆಯು ಕದನ ವಿರಾಮ ಉಲ್ಲಂಘನೆಗಳಿಗೆ ಪರಿಣಾಮಕಾರಿ ಪ್ರತ್ಯುತ್ತರ ನೀಡುತ್ತಿದೆ ಎಂಬುದರ ಸಂಕೇತವಾಗಿ ಈ ವಿಡಿಯೋವನ್ನು ಬಿಡುಗಡೆ ಮಾಡಿದೆ.
‘ಪಾಕಿಸ್ತಾನದ ಸಶಸ್ತ್ರ ಪಡೆಗಳು ಮೇ 08 ಮತ್ತು 09 ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್ಗಳು ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿ ಅನೇಕ ದಾಳಿಗಳನ್ನು ನಡೆಸಿದವು. ಪಾಕ್ ಪಡೆಗಳು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಹಲವಾರು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿವೆ’ ಎಂದು ಸೇನೆ ತಿಳಿಸಿದೆ.
ಡ್ರೋನ್ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ ಮತ್ತು ಸೇನೆಯಿಂದ ಕದನ ವಿರಾಮ ಉಲ್ಲಂಘನೆಗಳಿಗೆ ಸೂಕ್ತ ತಿರುಗೇಟು ನೀಡಲಾಗಿದೆ ಎಂದು ಸೇನೆಯ ಪ್ರಕಟಣೆ ಹೇಳಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸೇನಾ ಬ್ರಿಗೇಡ್ ಮೇಲೆ ಆತ್ಮಹತ್ಯಾ ದಾಳಿ ನಡೆದಿರುವುದು ನಿಜವೇ?
ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ಪ್ರಯತ್ನಗಳಿಗೆ ತಕ್ಕ ತಿರುಗೇಟು ನೀಡಲಾಗುವುದು ಎಂದು ಸೇನೆ ಹೇಳಿದೆ. ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಗಡಿಯುದ್ದಕ್ಕೂ ಉಗ್ರರ ನುಸುಳುವಿಕೆ ಪ್ರಯತ್ನವನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ವಿಫಲಗೊಳಿಸಿದೆ.
ಗಡಿ ಪ್ರದೇಶಗಳ ಸಮೀಪವಿರುವ ಅನೇಕ ನಗರಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಶ್ರೀನಗರ, ಜಮ್ಮು ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಹಲವಾರು ಸ್ಥಳಗಳಲ್ಲಿ ರಾತ್ರಿಯಿಡೀ ವಿದ್ಯುತ್ ಕಡಿತಗೊಂಡ ವರದಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ