ಸದ್ಗುರು ‘ಕಾವೇರಿ ಕೂಗು’ ಆಂದೋಲನದ ಭಾಗವಾಗಿ ಬೃಹತ್ ಸಮಾವೇಶ, 6 ಸಾವಿರಕ್ಕೂ ಹೆಚ್ಚು ರೈತರ ದಂಡು
ಸದ್ಗುರುಗಳ 'ಕಾವೇರಿ ಕೂಗು' ಆಂದೋಲನವು ನದಿ ಪುನಶ್ಚೇತನ, ರೈತರ ಆದಾಯ ಹೆಚ್ಚಳಕ್ಕೆ ಮರ ಆಧಾರಿತ ಕೃಷಿಯನ್ನು ಉತ್ತೇಜಿಸುತ್ತದೆ. ತಿರುಚಿರಾಪಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ 6000ಕ್ಕೂ ಹೆಚ್ಚು ರೈತರು ಭಾಗವಹಿಸಿ, ಆಹಾರ ಅರಣ್ಯ ಕೃಷಿ, ಬಹುಪದರ ಕೃಷಿಯ ಬಗ್ಗೆ ತಿಳಿದುಕೊಂಡರು. ಮಣ್ಣಿನ ಫಲವತ್ತತೆ, ಅಂತರ್ಜಲ ಹೆಚ್ಚಳಕ್ಕೆ ಇದು ಪರಿಣಾಮಕಾರಿ ಪರಿಹಾರ ಎಂದು ವಿಜ್ಞಾನಿಗಳು ಪ್ರತಿಪಾದಿಸಿದರು.

ತಿರುಚಿರಾಪಳ್ಳಿ, ಜೂನ್ 14: ಕಳೆದ ಏಳು ದಶಕಗಳಲ್ಲಿ ಶೇ. 40ರಷ್ಟು ಬತ್ತಿಹೋಗಿರುವ ಕಾವೇರಿ ನದಿಯ ಪುನಃಶ್ಚೇತನಕ್ಕಾಗಿ ಕಾವೇರಿ ಕೂಗು(Cauvery Calling) ಅಭಿಯಾನವನ್ನು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಆರಂಬಿಸಿದ್ದಾರೆ. ಸದ್ಗುರು ಅವರ ಸೇವ್ ಸಾಯಿಲ್(ಮಣ್ಣು ಉಳಿಸಿ), ಕಾವೇರಿ ಕಾಲಿಂಗ್(ಕಾವೇರಿ ಕೂಗು) ಆಂದೋಲನದ ಭಾಗವಾಗಿ ತಿರುಚಿರಾಪಳ್ಳಿಯ ಎಸ್ಆರ್ಎಂ ವಿಶ್ವವಿದ್ಯಾಲಯದ ಆವರಣದಲ್ಲಿ ‘ಫುಡ್ ಫಾರೆಸ್ಟ್ ಕಲ್ಟಿವೇಷನ್ ಆ್ಯಂಡ್ ಸೌತ್ ಇಂಡಿಯನ್ ಫ್ರೂಟ್ ಫೆಸ್ಟಿವಲ್’ ಬೃಹತ್ ಸಮಾವೇಶ ನಡೆಯಿತು. ಪ್ರಕೃತಿ ಸ್ನೇಹಿ ಕೃಷಿಯತ್ತ ಹೊಸ ಕ್ರಾಂತಿ ಸೃಷ್ಟಿಸಿರುವ ಈ ಸಮಾವೇಶದಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಗತಿಪರ ರೈತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮರ ಆಧಾರಿತ ಕೃಷಿ ಮತ್ತು ಆಹಾರ ಅರಣ್ಯಗಳ ನಿರ್ಮಾಣವು ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ, ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಕೃಷಿ ವಿಜ್ಞಾನಿಗಳು ಏಕಕಂಠದಿಂದ ಪ್ರತಿಪಾದಿಸಿದರು.
‘ಆಗ್ರೋಫಾರೆಸ್ಟ್ರಿ’ ಇನ್ಮುಂದೆ ‘ಮರ ಆಧಾರಿತ ಕೃಷಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕಾವೇರಿ ಕೂಗು ಆಂದೋಲನದ ಸಂಯೋಜಕ ತಮಿಳ್ಮಾರನ್, ನಮ್ಮ ಆಂದೋಲನದ ಮೂಲಕ ರೈತರಲ್ಲಿ ಮರ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಮಣ್ಣಿನ ಫಲವತ್ತತೆ, ಅಂತರ್ಜಲ ವೃದ್ಧಿ ಮತ್ತು ನದಿಗಳ ಆರೋಗ್ಯವನ್ನು ಸುಧಾರಿಸುತ್ತಿದೆ. ಇತ್ತೀಚೆಗೆ ಹೊಸೂರಿನಲ್ಲಿ ನಡೆದ ಕೃಷಿ ಸಮಾವೇಶದಲ್ಲಿ ನಾವು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ‘ಅಗ್ರೋಫಾರೆಸ್ಟ್ರಿ’ ಎಂಬ ಹೆಸರನ್ನು ‘ಮರ ಆಧಾರಿತ ಕೃಷಿ’ (Tree-Based Agriculture) ಎಂದು ಮರುನಾಮಕರಣ ಮಾಡಲು ವಿನಂತಿಸಿದ್ದೆವು. ಈ ಮನವಿಯನ್ನು ಪುರಸ್ಕರಿಸಿದ ಸಚಿವರು, ಶೀಘ್ರದಲ್ಲೇ ಈ ಹೆಸರು ಬದಲಾವಣೆಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ” ಎಂದು ಹರ್ಷ ಹಂಚಿಕೊಂಡರು.
ಮಧುಮೇಹಿಗಳಿಗಾಗಿ ಬಂತು ವಿಶೇಷ ‘ಕಾವೇರಿ’ ಬಾಳೆಹಣ್ಣು! ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ (NRCB) ನಿರ್ದೇಶಕರಾದ ಡಾ. ಸೆಲ್ವರಾಜನ್ ಅವರು ಮಾತನಾಡುತ್ತಾ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದ್ದು, ಮರ ಆಧಾರಿತ ಕೃಷಿ ಇಂದಿನ ತುರ್ತು ಅಗತ್ಯವಾಗಿದೆ ಎಂದರು. ತಮ್ಮ ಸಂಶೋಧನಾ ಕೇಂದ್ರವು ಸಂಪೂರ್ಣವಾಗಿ ಸುಕ್ರೋಸ್-ಮುಕ್ತ (Sucrose-free) ಹೊಂದಿರುವ, ಮಧುಮೇಹ (Diabetic) ರೋಗಿಗಳಿಗೂ ಸೂಕ್ತವಾದ ‘ಕಾವೇರಿ’ ಎಂಬ ಹೊಸ ತಳಿಯ ಬಾಳೆಹಣ್ಣನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದರು. ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ (Value-added products) ಮೂಲಕ ರೈತರು ತಮ್ಮ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.
ಮತ್ತಷ್ಟು ಓದಿ: ಕಾವೇರಿ ಪುನರುಜ್ಜೀವನಕ್ಕೆ ‘ಕಾವೇರಿ ಕೂಗು’ ಮಹಾ ಸಂಕಲ್ಪ: 1.2 ಕೋಟಿ ಹೊಸ ಸಸಿ ನೆಡಲು ಸಜ್ಜಾದ 2.6 ಲಕ್ಷ ರೈತರು
ತೆಂಗಿನ ತೋಟದಲ್ಲಿ ಕೋಟಿ ಆದಾಯ ತೆಂಗಿನ ತೋಟಗಳಲ್ಲಿ ಬಹು ಬೆಳೆ ಆಧಾರಿತ ಕೃಷಿ ಮಾಡುವ ಕುರಿತು ಕೃಷಿ ತಜ್ಞ ಬಾಲಮೋಹನ್ ಮಹತ್ವದ ಮಾಹಿತಿ ನೀಡಿದರು. ಒಂದು ಎಕರೆ ತೆಂಗಿನ ತೋಟದಲ್ಲಿ ಹೆಚ್ಚಿನ ಜಾಗ ಬಳಕೆಯಾಗದೆ ಉಳಿಯುತ್ತದೆ. ಬಹು ಬೆಳೆಗಳನ್ನು ಬೆಳೆಯಬಹುದು. ಇದು ಸೂರ್ಯನ ಬೆಳಕನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನೆರವಾಗುತ್ತದೆ. ಎಲೆಗಳ ತ್ಯಾಜ್ಯಗಳು ಮಣ್ಣಿನಲ್ಲಿ ತೇವಾಂಶವನ್ನು ಕಾಯ್ದಿಟ್ಟುಕೊಳ್ಳುತ್ತವೆ ಮತ್ತು ಮಣ್ಣಿನ ಜೈವಿಕ ಇಂಗಾಲದ ಮಟ್ಟವನ್ನು ಹೆಚ್ಚಿಸಿ, ಪ್ರಯೋಜನಕಾರಿ ಸೂಕ್ಷ್ಮಜೀವಿಗಳನ್ನು ಸೃಷ್ಟಿಸುತ್ತವೆ ಎಂದರು.
ವಿಶ್ವಸಂಸ್ಥೆಯ (UN) ಪ್ರಶಸ್ತಿ ವಿಜೇತ ಕೊಯಮತ್ತೂರಿನ ಪ್ರಗತಿಪರ ರೈತ ವಲ್ಲುವನ್ ಮಾತನಾಡಿ,ನಾನು ಕೇವಲ ತೆಂಗು ಬೆಳೆಯುತ್ತಿದ್ದೆ. ಸದ್ಗುರು ಮಾರ್ಗದರ್ಶನದ ನಂತರ, ಈಗ ನನ್ನ ತೋಟದಲ್ಲಿ ಮಾವು, ಹಲಸು, ಬಾಳೆ, ಸಪೋಟ, ಜಾಜಿಕಾಯಿ, ಕಾಳುಮೆಣಸು ಸೇರಿದಂತೆ 14 ವಿಭಿನ್ನ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದೇನೆ. ಸಾಮಾನ್ಯ ರೈತನಾಗಿದ್ದ ನನ್ನನ್ನು ವಿಶ್ವಸಂಸ್ಥೆಯ ವೇದಿಕೆಯವರೆಗೆ ಕರೆದೊಯ್ದ ಈಶಾ ಮತ್ತು ಸದ್ಗುರುಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.
ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ಪದ್ಮಶ್ರೀ ಪುರಸ್ಕೃತ ಕಲೀಮ್ ಉಲ್ಲಾ ಖಾನ್ (ಭಾರತದ ಹೆಮ್ಮೆಯ ‘ಮ್ಯಾಂಗೋ ಮ್ಯಾನ್’) ಭಾಗವಹಿಸಿದ್ದರು. ಒಂದೇ ಮರದಲ್ಲಿ 300 ವಿವಿಧ ತಳಿಯ ಮಾವಿನಹಣ್ಣುಗಳನ್ನು ಬೆಳೆದು ಜಾಗತಿಕ ದಾಖಲೆ ಬರೆದಿರುವ ಅವರು, ಮಾವು ಕೃಷಿಯಲ್ಲಿ ಯಶಸ್ಸು ಗಳಿಸುವ ತಂತ್ರಗಳನ್ನು ರೈತರೊಂದಿಗೆ ಹಂಚಿಕೊಂಡರು.
ಬರೋಬ್ಬರಿ 60ಕ್ಕೂ ಹೆಚ್ಚು ತಳಿಯ ಬಾಳೆಹಣ್ಣುಗಳ ಪ್ರದರ್ಶನ, ತಲಾ 100ಕ್ಕೂ ಹೆಚ್ಚು ತಳಿಯ ವೈವಿಧ್ಯಮಯ ಮಾವು ಮತ್ತು ಹಲಸಿನ ಹಣ್ಣುಗಳ ಅನಾವರಣ. ಮಾವು, ಹಲಸು, ಆವಕಾಡೊ (ಬೆಣ್ಣೆಹಣ್ಣು), ಆಪಲ್ ಮತ್ತು ವಿವಿಧ ಹಣ್ಣುಗಳ ಸಸಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ನಡೆಯಿತು.

ಐಸಿಎಆರ್ (ICAR) ಮತ್ತು ತಂಜಾವೂರಿನ ನಿಫ್ಟೆಮ್ (NIFTEM) ಸೇರಿದಂತೆ ದೇಶದ 4 ಪ್ರಮುಖ ಕೃಷಿ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಹಣ್ಣುಗಳ ಕೃಷಿ, ಮಾರುಕಟ್ಟೆ ಅವಕಾಶ ಮತ್ತು ತಾಂತ್ರಿಕ ಮೌಲ್ಯವರ್ಧನೆಯ ಕುರಿತು ರೈತರಿಗೆ ನೇರ ತರಬೇತಿ ನೀಡಿದರು. ಸದ್ಗುರುಗಳ ಈ ಕ್ರಾಂತಿಕಾರಿ ಆಂದೋಲನವು ದಕ್ಷಿಣ ಭಾರತದ ಕೃಷಿ ವಲಯವನ್ನು ಪರಿಸರ ಸ್ನೇಹಿ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಮೈಲಿಗಲ್ಲಾಗಿದೆ.
ಆಂದೋಲನದ ಮೂಲಕ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಗಳಲ್ಲಿರುವ ಕಾವೇರಿ ನದಿ ಪಾತ್ರದ ರೈತರು 242 ಕೋಟಿ ಮರಗಳನ್ನು ಬೆಳೆಸಲು ಸಸಿಗಳನ್ನು ನೆಡಲು ಸಾಧ್ಯವಾಗಿಸುತ್ತದೆ. ಈ ರೀತಿಯ ಸಮಗ್ರ ಅರಣ್ಯೀಕರಣ ಪ್ರಯತ್ನವು ಬತ್ತಿ ಹೋಗುತ್ತಿರುವ ಕಾವೇರಿ ನದಿಯಲ್ಲಿ ಮುಂದಿನ ಒಂದು ದಶಕದಲ್ಲಿ ಪುನಃ ನೀರು ತುಂಬಿ ಹರಿಯುವಂತೆ ಮಾಡುತ್ತದೆ ಎನ್ನುವ ನಿರೀಕ್ಷೆಯಿದೆ.
ಕೃಷಿಯು ವಾಣಿಜ್ಯವಾಗಿ ಲಾಭದಾಯಕ ಎಂದು ಸಾಬೀತಾಗಿದ್ದು, ಕಾವೇರಿ ಕೂಗು ಅಭಿಯಾನವು ಅಂತಹ ನಾವಿನ್ಯತೆಯನ್ನು ಒದಗಿಸುತ್ತದೆ. ಇಂತಹ ಕೃಷಿ ಮಾದರಿಯು ಮಣ್ಣಿನ ಫಲವತ್ತತೆ ಹೆಚ್ಚಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸಿರುವುದಲ್ಲದೇ ಐದರಿಂದ ಎಂಟು ವರ್ಷಗಳ ಅವಧಿಯಲ್ಲಿ ಕೃಷಿಕರ ಆರ್ಥಿಕ ಸಮೃದ್ಧಿಯ ಹೆಚ್ಚಳಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:12 am, Mon, 15 June 26




