ಮೆದುಳಿನ ಎರಡೆರಡು ಶಸ್ತ್ರಚಿಕಿತ್ಸೆಗೊಳಗಾಗಿದ್ದರೂ ಬೈಕ್ನಲ್ಲಿ ಕೈಲಾಸ ಯಾತ್ರೆ ಪೂರ್ಣಗೊಳಿಸಿದ ಸದ್ಗುರು!
ಸದ್ಗುರು ಅವರು ಮೆದುಳಿನ ಎರಡೆರಡು ಶಸ್ತ್ರಚಿಕಿತ್ಸೆ ಮತ್ತು ವೃದ್ಧಾಪ್ಯದ ಹೊರತಾಗಿಯೂ ಬೈಕ್ನಲ್ಲಿ ಕೈಲಾಸ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ಯಾತ್ರೆ ಮುಗಿಸಿ ಕೊಯಮತ್ತೂರಿಗೆ ಆಗಮಿಸಿದ ಅವರನ್ನು ಭಕ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಯೋಗದಿಂದ ಈ ಯಾತ್ರೆಯನ್ನು ಪೂರ್ಣಗೊಳಿಸಿದ್ದಾಗಿ ಅವರು ಹೇಳಿದ್ದಾರೆ.

ಕೊಯಮತ್ತೂರು, ಆಗಸ್ಟ್ 31: ಸಾಲು ಸಾಲು ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರೂ ಒಂದೂವರೆ ವರ್ಷದ ಬಳಿಕ ಸದ್ಗುರು ಜಗ್ಗಿ ವಾಸುದೇವ್ (Sadhguru) ಅವರು ಬೈಕ್ನಲ್ಲಿ ಕೈಲಾಸ ಯಾತ್ರೆಯನ್ನು (Kailash Yatra) ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶನಿವಾರ ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಆಗಮಿಸಿದ ಅವರನ್ನು ಭಕ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಯಾತ್ರೆಗಳಲ್ಲಿ ಕೈಲಾಸ ಯಾತ್ರೆ ಕೂಡ ಒಂದೆಂದು ಪರಿಗಣಿಸಲಾಗುತ್ತದೆ. ಈ ಯಾತ್ರೆಯನ್ನು ಪೂರ್ಣಗೊಳಿಸುವವರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಅದರಂತೆ ನಿನ್ನೆ ಆಗಮಿಸಿದ ಸದ್ಗುರು ಅವರನ್ನು ಸ್ವಾಗತಿಸಲು ಸಾವಿರಾರು ಜನರು ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು.
ಇದು ಯೋಗಕ್ಕಿರುವ ಶಕ್ತಿ: ಸದ್ಗುರು
ಮೆದುಳಿನ ಎರಡೆರಡು ಶಸ್ತ್ರಚಿಕಿತ್ಸೆ ಮತ್ತು ವೃದ್ಧಾಪ್ಯದ ಹೊರತಾಗಿಯೂ ಬೈಕ್ನಲ್ಲಿ ಕೈಲಾಸ ಯಾತ್ರೆಯನ್ನು ಮಾಡುವ ಮೂಲಕ ಸದ್ಗುರು ಅವರು ಮಹತ್ವದ ಸಾಧನೆ ಮಾಡಿದ್ದಾರೆ. ಈ ವಿಚಾರವಾಗಿ ಅವರು ಕೊಯಮತ್ತೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘ವೈದ್ಯರ ಪ್ರಕಾರ, ನಾನು ಬೈಕ್ ಸವಾರಿ ಮಾಡಬಾರದಿತ್ತು, ಆದರೂ ನಾನು ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರಕ್ಕೆ ಹೋಗಿದ್ದೇನೆ. ಇದು ಯೋಗಕ್ಕಿರುವ ಶಕ್ತಿ’ ಎಂದು ಅವರು ಹೇಳಿದ್ದಾರೆ.
View this post on Instagram
‘ಯೋಗ ಎಂದರೆ ನಮ್ಮೆಲ್ಲರೊಳಗಿರುವ ಸೃಷ್ಟಿಯ ಮೂಲದೊಂದಿಗೆ ಒಂದಾಗುವುದು. ಅದು ಪ್ರತಿಯೊಬ್ಬರೊಳಗಿರುತ್ತದೆ. ಆದ್ದರಿಂದ ನೀವು ಸೃಷ್ಟಿಯ ಮೂಲದೊಂದಿಗೆ ಸಂಪರ್ಕದಲ್ಲಿರುವಾಗ, ಇದು ಒಂದು ಸವಾಲಲ್ಲ. ಈ ಯಾತ್ರೆಯನ್ನು ನಾನು ಸಲೀಸಾಗಿ ಮಾಡಿದ್ದೇನೆ’ ಎಂದಿದ್ದಾರೆ.
ಇದನ್ನೂ ಓದಿ: 79ನೇ ವರ್ಷದ ಸ್ವತಂತ್ರ ಭಾರತ; ಉದಾರೀಕರಣ ಮಾತ್ರವಲ್ಲ, ಮುಕ್ತಗೊಳಿಸುವ ಸಮಯ ಇದು: ಸದ್ಗುರು
ಆಗಸ್ಟ್ 9 ರಂದು ಉತ್ತರ ಪ್ರದೇಶದ ಗೋರಖ್ಪುರದಿಂದ ಸದ್ಗುರು ಬೈಕ್ನಲ್ಲಿ ತಮ್ಮ ಯಾತ್ರೆಯನ್ನು ಪ್ರಾರಂಭಿಸಿದರು. ಅಲ್ಲಿಂದ ಅವರು ಕಠ್ಮಂಡು, ಭಕ್ತಪುರ ಮತ್ತು ನೇಪಾಳದ ತುಲಿಕೇಲ್ ಮೂಲಕ ಪ್ರಯಾಣಿಸಿ ಟಿಬೆಟ್ ಗಡಿಯನ್ನು ತಲುಪಿದರು.
ನಂತರ ಅವರು ಟಿಬೆಟ್ನ ಜಾಂಗ್ಮು, ನ್ಯಾಲಂ ಮತ್ತು ಸಾಗಾ ಮೂಲಕ ಮಾನಸ ಸರೋವರವನ್ನು ತಲುಪಿದರು. ಅಲ್ಲಿಂದ ಅವರು ಕೈಲಾಸ ಪರ್ವತದ ದರ್ಶನ ಪಡೆಯಲು ಪಾದಯಾತ್ರೆ ಕೈಗೊಂಡಿದ್ದರು. 15 ರಿಂದ 20 ಸಾವಿರ ಅಡಿ ಎತ್ತರದ ಪ್ರದೇಶವಾಗಿದ್ದು, ಈ ಮಾರ್ಗದಲ್ಲಿ ಭೂಕುಸಿತ, ನಿರಂತರ ಮಳೆ, ಒರಟಾದ ಭೂಪ್ರದೇಶವಾಗಿತ್ತು. ಇನ್ನು ಈ ಯಾತ್ರೆ ವೇಳೆ ಸದ್ಗುರುಗಳನ್ನು ಸ್ವಾಗತಿಸಲು ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




