ತನ್ನ ಹೆಂಡತಿಗೆ ವಿಧವೆ ಪಟ್ಟ ಬೇಡವೆನ್ನುವವನು, ತಾನು ವಿಧವೆಯರನ್ನಾಗಿಸಿದ ಹೆಣ್ಣುಮಕ್ಕಳಿಗೆ ಏನು ಹೇಳ್ತಾನೆ, ಯಾಸಿನ್ ಅಫಿಡವಿಟ್ಗೆ ಸಂತ್ರಸ್ತರ ಆಕ್ರೋಶ
ವಿಧವೆಯರಾಗದಂತೆ ಪತ್ನಿಗೆ ವಿಚ್ಛೇದನ ನೀಡುವುದಾಗಿ ಮತ್ತು ಗಲ್ಲು ಶಿಕ್ಷೆಗೆ ಸಿದ್ಧನೆಂದು ಉಗ್ರ ಯಾಸಿನ್ ಮಲಿಕ್ ನೀಡಿದ ಅಫಿಡವಿಟ್ಗೆ ಸಂತ್ರಸ್ತರ ಕುಟುಂಬಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ತಾನು ನೂರಾರು ಮಹಿಳೆಯರನ್ನು ವಿಧವೆಯರನ್ನಾಗಿಸಿದಾಗ ಇವನ ಕರುಣೆ ಎಲ್ಲಿ ಹೋಯಿತು? ಅಮಾಯಕರ ರಕ್ತ ಮೆತ್ತಿಕೊಂಡಿರುವ ಈತನಿಗೆ ಗಲ್ಲು ಶಿಕ್ಷೆಯೇ ತಕ್ಕ ಪ್ರಾಯಶ್ಚಿತ್ತ ಎಂದು ಹುತಾತ್ಮರ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿ, ನ್ಯಾಯಕ್ಕಾಗಿ ಛಲದಿಂದ ಹೋರಾಡುತ್ತಿವೆ.

ಶ್ರೀನಗರ, ಸೆಪ್ಟೆಂಬರ್ 04: 1990ರ ದಶಕದ ನರ್ಸ್ ಸರಳಾ ಭಟ್ ಹತ್ಯೆ ಪ್ರಕರಣದಲ್ಲಿ ತನಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹಾಗೂ ಪತ್ನಿ ವಿಧವೆಯಾಗಿ ಉಳಿಯುವುದು ಬೇಡವೆಂದು ಆಕೆಗೆ ವಿಚ್ಛೇದನ ನೀಡುವುದಾಗಿ ಜೆಕೆಎಲ್ಎಫ್ ಉಗ್ರ ಯಾಸಿನ್ ಮಲಿಕ್ ಸಲ್ಲಿಸಿರುವ ಅಫಿಡವಿಟ್ಗೆ ಸಂತ್ರಸ್ತರ ಕುಟುಂಬಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. “ತನ್ನ ಹೆಂಡತಿಗೆ ವಿಧವೆ ಪಟ್ಟ ಬೇಡವೆನ್ನುವ ಈ ಕೊಲೆಗಡುಕ, ತಾನು ನೂರಾರು ಹೆಣ್ಣುಮಕ್ಕಳ ಕುಂಕುಮ ಅಳಿಸಿ ವಿಧವೆಯರನ್ನಾಗಿಸಿದಾಗ ಇವನ ಕರುಣೆ ಎಲ್ಲಿ ಹೋಗಿತ್ತು?” ಎಂದು ಜೆಕೆಎಲ್ಎಫ್ನಿಂದ ಹತರಾದ ವೀರ ಯೋಧರು ಹಾಗೂ ಪೊಲೀಸ್ ಅಧಿಕಾರಿಗಳ ಕುಟುಂಬಸ್ಥರು ಕಣ್ಣೀರಿಡುತ್ತಲೇ ಆತನ ನಾಟಕೀಯ ಪ್ರಚಾರ ತಂತ್ರವನ್ನು ಛೀಮಾರಿ ಹಾಕಿದ್ದಾರೆ.
1990ರ ಜನವರಿ 25 ರಂದು ರಾವಲ್ಪೋರಾದಲ್ಲಿ ನಿರಾಯುಧರಾಗಿದ್ದ ವಾಯುಪಡೆಯ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಮತ್ತು ಮೂವರು ಸಿಬ್ಬಂದಿಯನ್ನು ಯಾಸಿನ್ ಮಲಿಕ್ ನೇತೃತ್ವದ ಜೆಕೆಎಲ್ಎಫ್ ಉಗ್ರರು ಕೊಂದಿದ್ದರು. ರವಿ ಖನ್ನಾ ಅವರ ದೇಹಕ್ಕೆ ಮಲಿಕ್ ಬರೋಬ್ಬರಿ 28ಗುಂಡುಗಳನ್ನು ಹಾರಿಸಲಾಗಿತ್ತು.
ತನ್ನ 20 ವರ್ಷ ಕಿರಿಯ ಹೆಂಡತಿ ಮುಷಾಲ್ ವಿಧವೆಯಾಗಿ ಕಷ್ಟಪಡಬಾರದು ಎಂದು ಈಗ ನಾಟಕವಾಡುತ್ತಿದ್ದಾನೆ. ಆದರೆ ಈ ಕೊಲೆಗಡುಕ ನೂರಾರು ಮಹಿಳೆಯರನ್ನು ಅನಾಥರನ್ನಾಗಿ ಮಾಡಿ ವಿಧವೆಯರನ್ನಾಗಿಸಿದಾಗ ಇವನ ಸಂವೇದನೆ ಎಲ್ಲಿ ಹೋಗಿತ್ತು? ಆ ಹೆಣ್ಣುಮಕ್ಕಳ ನರಳಾಟಕ್ಕೆ ಇವನ ಬಳಿ ಉತ್ತರವಿದೆಯೇ? ಎಂದು ಹುತಾತ್ಮ ರವಿ ಖನ್ನಾ ಅವರ ಪತ್ನಿ ನಿರ್ಮಲ್ ಖನ್ನಾ ಪ್ರಶ್ನಿಸಿದ್ದಾರೆ. ಎನ್ಡಿಟಿವಿ ಈ ಕುರಿತು ವರದಿ ಮಾಡಿದೆ.
ಕೈಯಲ್ಲಿ ಅಮಾಯಕರ ರಕ್ತ ಮೆತ್ತಿಕೊಂಡಿರುವ ಈತನಿಗೆ ಗಲ್ಲು ಶಿಕ್ಷೆಯೊಂದೇ ತಕ್ಕ ಪ್ರಾಯಶ್ಚಿತ್ತ. 36 ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿದ್ದೇನೆ, ಕರ್ಮವು ಕೊನೆಗೂ ಆತನನ್ನು ಬೆನ್ನಟ್ಟಿದೆ ಎಂದು ಅವರು ಹೇಳಿದ್ದಾರೆ.
ತಂದೆಯ ಕ್ರೂರ ಹತ್ಯೆ: ಮೇ 1, 1990 ರಂದು ಉತ್ತರ ಕಾಶ್ಮೀರದಲ್ಲಿ ಜೆಕೆಎಲ್ಎಫ್ ಉಗ್ರರಿಂದ ಚಿತ್ರಹಿಂಸೆಗೆ ಒಳಗಾಗಿ ಹತ್ಯೆಯಾದ ಪೊಲೀಸ್ ಇನ್ಸ್ಪೆಕ್ಟರ್ ಚುನಿ ಲಾಲ್ ಶಲ್ಲಾ ಅವರ ಪುತ್ರಿ ಡಾ. ಸುಷ್ಮಾ ಶಲ್ಲಾ ಅವರು ಮಲಿಕ್ನ ಈ ಅಫಿಡವಿಟ್ ಅನ್ನು ಸಹಾನುಭೂತಿ ಗಿಟ್ಟಿಸುವ ಗಿಮಿಕ್ ಎಂದು ಕರೆದಿದ್ದಾರೆ.
ವಿಧವೆಯ ನೋವು ನಮಗೊಬ್ಬರಿಗೇ ಗೊತ್ತು: ಇವನ ದುಷ್ಕೃತ್ಯದಿಂದಾಗಿ ನನ್ನ ತಾಯಿ ಇಡೀ ಬದುಕನ್ನು ವಿಧವೆಯಾಗಿ ನರಳಿ ಕಳೆದರು. ನಮ್ಮ ತಂದೆಯನ್ನು ಕಸಿದುಕೊಂಡ ಇವನಿಗೆ ಈಗ ಜೈಲಿನಲ್ಲಿ ಹೆಂಡತಿ ಮತ್ತು ಮಗಳ ನೆನಪಾಗುತ್ತಿದೆಯೇ? ಮಾಡಿದ ಪಾಪಕ್ಕೆ ಇವನು ಗಲ್ಲುಗಂಬ ಏರಲೇಬೇಕು ಎಂದಿದ್ದಾರೆ.
ಸರಳಾ ಭಟ್ ಹತ್ಯೆ ಪ್ರಕರಣ: ಸೌರಾ ವೈದ್ಯಕೀಯ ಸಂಸ್ಥೆಯಲ್ಲಿ (SKIMS) ನರ್ಸ್ ಆಗಿದ್ದ ಕಾಶ್ಮೀರಿ ಪಂಡಿತ ಸಮುದಾಯದ ಸರಳಾ ಭಟ್ ಅವರನ್ನು 1990ರ ಏಪ್ರಿಲ್ನಲ್ಲಿ ಅಪಹರಿಸಿ, ಕ್ರೂರವಾಗಿ ಹಿಂಸಿಸಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಭಾರತೀಯ ಭದ್ರತಾ ಪಡೆಗಳಿಗೆ ಮಾಹಿತಿ ನೀಡುತ್ತಿದ್ದಾರೆ ಎಂಬ ಸುಳ್ಳು ಶಂಕೆಯ ಮೇಲೆ ಜೆಕೆಎಲ್ಎಫ್ ಈ ಹತ್ಯೆ ನಡೆಸಿತ್ತು.
ಜಮ್ಮು-ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆಯು ಮೂರು ದಶಕಗಳ ಬಳಿಕ 737 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದು, ಇದರಲ್ಲಿ ಯಾಸಿನ್ ಮಲಿಕ್ನನ್ನು ಪ್ರಮುಖ ಸಂಚುಕೋರ ಎಂದು ಹೆಸರಿಸಿದೆ.
ಮಲಿಕ್ನ ಗಿಮಿಕ್: ಈಗಾಗಲೇ ಉಗ್ರ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ತಿಹಾರ್ ಜೈಲಿನಲ್ಲಿರುವ ಮಲಿಕ್, ತಾನು ಆ ಸಮಯದಲ್ಲಿ ಕೋಮಾದಲ್ಲಿದ್ದೆ ಎಂದು ವಾದಿಸುತ್ತಾ, ಮತ್ತೊಂದೆಡೆ ವಿಚಾರಣೆ ಎದುರಿಸದೆ ಗಲ್ಲಿಗೇರಲು ಸಿದ್ಧ ಎಂದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯುವ ಮತ್ತೊಂದು ಕುತಂತ್ರ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




