
IPL 2025: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಗೆದ್ದಾಗ ಸಂಪೂರ್ಣ ಕ್ರೆಡಿಟ್ ತಗೋಂಡಿದ್ದೀರಿ, ಇದೀಗ ಹೀನಾಯ ಪ್ರದರ್ಶನಕ್ಕೂ ಅವರೇ ಹೊಣೆ. ಹೀಗಂದಿದ್ದು ಮಾತ್ಯಾರೂ ಅಲ್ಲ. ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ . ಇಂತಹದೊಂದು ಹೇಳಿಕೆ ನೀಡಲು ಮುಖ್ಯ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ಹೀನಾಯ ಪ್ರದರ್ಶನ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವು ಸಾಧಿಸಿದಾಗ ಸಂಪೂರ್ಣ ಶ್ರೇಯಸ್ಸು ನಾಯಕನಿಗೆ ಸಲ್ಲುತ್ತಿತ್ತು. ಇದೀಗ ತಂಡವು ಅತ್ಯಂತ ಹೀನಾಯ ಪ್ರದರ್ಶನ ನೀಡುತ್ತಿದೆ. ಈಗ ಅದರ ಹೊಣೆಯನ್ನು ನಾಯಕ ಎನಿಸಿಕೊಂಡವರು ವಹಿಸಿಕೊಳ್ಳಬೇಕು. ಏಕೆಂದರೆ ಗೆದ್ದಾಗ ಕ್ರೆಡಿಟ್ ತಗೋಂಡವರು, ಸೋತಾಗಲೂ ಜವಾಬ್ದಾರರು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಸಿಎಸ್ಕೆ ಪ್ರದರ್ಶನದ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರಾ, ನೀವು ಗೆದ್ದಾಗ ಯಾರಿಗಾದರೂ ಕ್ರೆಡಿಟ್ ನೀಡಿದರೆ, ಸೋತಾಗ ಬೆರಳುಗಳು ಅವರ ಕಡೆಗೆ ತೋರಿಸುತ್ತವೆ. ಸಿಎಸ್ಕೆ ಒಂದು ತಂಡವಲ್ಲ, ಅದು ಒಂದು ಫಿಲಾಸಫಿ. ಅವರು ಟಿ20 ಕ್ರಿಕೆಟ್ ಅನ್ನು ವಿಭಿನ್ನವಾಗಿ ಆಡಿ ಪ್ರಶಸ್ತಿಗಳನ್ನು ಗೆದ್ದವರು.
ಡ್ಯಾಡ್ ಆರ್ಮಿಯು ಈ ಬಾರಿ ಬದಲಾಗಿದೆ. 43 ವರ್ಷದ ಆಟಗಾರರೊಬ್ಬರು ಶ್ರೀಮಂತ ಲೀಗ್ನಲ್ಲಿ ಎರವಲು ಪಡೆದ ಸಮಯದ ಮೇಲೆ ಬದುಕುತ್ತಿದ್ದಾರೆ. ಫಿಟ್ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅದನ್ನು ತೋರಿಸುತ್ತಿಲ್ಲ. ಅವರ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಮೇಲೆ ಪರಿಣಾಮ ಬೀರಿದೆ. ಈ ಆಟಗಾರನು ತನ್ನ ಶೇ.100 ರಷ್ಟು ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಇವೆಲ್ಲವೂ ಸೋಲಿಗೆ ಕಾರಣ ಎಂದು ಆಕಾಶ್ ಚೋಪ್ರಾ ಮಹೇಂದ್ರ ಸಿಂಗ್ ಧೋನಿಯ ಹೆಸರನ್ನು ಪ್ರಸ್ತಾಪಿಸದೇ ದೂರಿದ್ದಾರೆ.
ಪ್ರತಿ ಬಾರಿಯೂ ಗೆದ್ದಾಗ ಸಂಪೂರ್ಣ ಕ್ರೆಡಿಟ್ ಪಡೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ತಂಡವು ಸೋತು ಸುಣ್ಣವಾಗಿದೆ. ಇದರ ಹೊಣೆ ಕೂಡ ಅವರಿಗೆ ಸಲ್ಲುತ್ತದೆ. ಏಕೆಂದರೆ ಗೆಲುವಿನ ಶ್ರೇಯಸ್ಸು ಪಡೆದವರೇ ಸೋಲಿನ ಹೊಣೆಗಾರರು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: IPL 2025: ಅಣ್ಣಾ ಬಿಟ್ ಬಿಡಣ್ಣ… RCB ತಂಡದಲ್ಲಿ ಎಲ್ಲವೂ ಸರಿಯಿಲ್ವಾ?
ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈವರೆಗೆ 9 ಪಂದ್ಯಗಳನ್ನಾಡಿದೆ. ಈ ವೇಳೆ ಸಿಎಸ್ಕೆ ಗೆದ್ದಿರುವುದು ಕೇವಲ 2 ಮ್ಯಾಚ್ಗಳಲ್ಲಿ ಮಾತ್ರ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಕಳೆದ 4 ಪಂದ್ಯಗಳಲ್ಲಿ ಸಿಎಸ್ಕೆ ಮೂರರಲ್ಲಿ ಸೋಲನುಭವಿಸಿದೆ. ಹೀಗಾಗಿ ಸೋಲಿನ ಹೊಣೆಯನ್ನು ಸಹ ಧೋನಿ ಹೊತ್ತುಕೊಳ್ಳಬೇಕೆಂದು ಆಕಾಶ್ ಚೋಪ್ರಾ ಹೇಳಿದ್ದಾರೆ.