ಮೈದಾನದಲ್ಲೇ ಕೊನೆಯುಸಿರೆಳೆದ ಕರ್ನಾಟಕದ ಕ್ರಿಕೆಟಿಗ!
SL Akshay: ಮೈದಾನದಲ್ಲಿ ಕೊನೆಯ ಎಸೆತದವರೆಗೂ ಹೋರಾಡುವ ಕ್ರೀಡಾಪಟುವಿನ ಬದುಕು, ಹೀಗೆ ದಿಢೀರನೆ ಮೈದಾನದಲ್ಲೇ ಕೊನೆಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕರ್ನಾಟಕ ಕ್ರಿಕೆಟ್ ಇತಿಹಾಸದ ಸುವರ್ಣ ಪುಟಗಳಲ್ಲಿ ಒಂದಾಗಿದ್ದ 2014-2015 ರ ರಣಜಿ ಟ್ರೋಫಿ ಚಾಂಪಿಯನ್ ತಂಡದ ಹೆಮ್ಮೆಯ ವೇಗಿ ಎಸ್.ಎಲ್. ಅಕ್ಷಯ್ ಕೇವಲ 39ನೇ ವಯಸ್ಸಿಗೆ ನಮ್ಮನ್ನಗಲಿದ್ದಾರೆ.

ಕರ್ನಾಟಕ ಕ್ರಿಕೆಟ್ ಲೋಕ ಇಂದು ಅತ್ಯಂತ ಆಘಾತಕಾರಿ ಮತ್ತು ದುಃಖದ ಸುದ್ದಿಯೊಂದಕ್ಕೆ ಸಾಕ್ಷಿಯಾಗಿದೆ. ತನ್ನ ಸ್ವಿಂಗ್ ಬೌಲಿಂಗ್ ಮತ್ತು ಸೌಮ್ಯ ಸ್ವಭಾವದಿಂದ ಎಲ್ಲರ ಮನಗೆದ್ದಿದ್ದ ಕರ್ನಾಟಕದ ಮಾಜಿ ವೇಗದ ಬೌಲರ್ ಎಸ್.ಎಲ್. ಅಕ್ಷಯ್ (39) ಅವರು ಕೆ.ಎಸ್.ಸಿ.ಎ ಡಿವಿಷನ್ ಪಂದ್ಯವೊಂದನ್ನು ಆಡುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಸಿರು ಮೈದಾನವನ್ನೇ ದೇವರೆಂದು ನಂಬಿದ್ದ ಆಟಗಾರ, ಅದೇ ಮೈದಾನದಲ್ಲೇ ಕೊನೆಯುಸಿರೆಳೆದಿರುವುದು ಇಡೀ ಕ್ರೀಡಾಲೋಕವನ್ನು ದಿಗ್ಭ್ರಮೆಗೊಳಿಸಿದೆ.
ಮೈದಾನದಲ್ಲಿ ನಡೆದಿದ್ದೇನು?
ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಎಸ್ಎಲ್ಎಸ್ ಕ್ರೀಡಾಂಗಣದಲ್ಲಿ ಸಫೈರ್ ಸಿಸಿ ಮತ್ತು ಭರತ್ ಸಿಸಿ ತಂಡಗಳ ನಡುವೆ ಡಿವಿಷನ್ 3 ಪಂದ್ಯ ನಡೆಯುತ್ತಿತ್ತು. ಸಫೈರ್ ಸಿಸಿ ಪರ ಆಡುತ್ತಿದ್ದ ಅಕ್ಷಯ್, ಆರಂಭದಲ್ಲಿ ಅತ್ಯಂತ ಉತ್ಸಾಹದಿಂದ 4 ಓವರ್ಗಳ ಬೌಲಿಂಗ್ ದಾಳಿ ನಡೆಸಿದ್ದರು. ಆ ಬಳಿಕ ಅವರಿಗೆ ಎದೆಯಲ್ಲಿ ತೀವ್ರ ಅಸ್ವಸ್ಥತೆ ಮತ್ತು ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಮೈದಾನದಿಂದ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ಘೋಷಿಸಿದರು.
ಅಕ್ಷಯ್ ಕ್ರಿಕೆಟ್ ಪಯಣ ಮತ್ತು ಸಾಧನೆ:
- ಪ್ರಥಮ ದರ್ಜೆ ಕ್ರಿಕೆಟ್ ಪಾದಾರ್ಪಣೆ: ನವೆಂಬರ್ 29, 2011 ರಂದು ಬೆಂಗಳೂರಿನಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ತಮ್ಮ ಮೊದಲ ರಂಜಿ ಪಂದ್ಯ ಆಡಿದರು.
- ಕೊನೆಯ ಪಂದ್ಯ: ಡಿಸೆಂಬರ್ 22, 2012 ರಂದು ಹುಬ್ಬಳ್ಳಿಯಲ್ಲಿ ಹರಿಯಾಣ ತಂಡದ ವಿರುದ್ಧ ಆಡಿದ್ದರು.ಸಾಧನೆ: ಆಡಿದ 6 ಪಂದ್ಯಗಳಿಂದ 18 ವಿಕೆಟ್ಗಳನ್ನು ಕಬಳಿಸಿದ್ದರು.
- ಉತ್ತಮ ಬೌಲಿಂಗ್ ಪ್ರದರ್ಶನ: ಒಂದು ಇನ್ನಿಂಗ್ಸ್ನಲ್ಲಿ 40 ರನ್ಗಳಿಗೆ 4 ವಿಕೆಟ್ (4/40) ಪಡೆದಿದ್ದು ಇವರ ಅತ್ಯುತ್ತಮ ಸಾಧನೆಯಾಗಿದೆ.
- ಐತಿಹಾಸಿಕ ಸಾಧನೆ: ಅಕ್ಷಯ್ ಅವರು 2014-15ರ ಸಾಲಿನಲ್ಲಿ ರಂಜಿ ಟ್ರೋಫಿ ಮುಕುಟ ಮುಡಿಗೇರಿಸಿಕೊಂಡ ಐತಿಹಾಸಿಕ ಕರ್ನಾಟಕ ತಂಡದ ಪ್ರಮುಖ ಸದಸ್ಯರಾಗಿದ್ದರು.
- ಲಿಸ್ಟ್ ಎ ಕ್ರಿಕೆಟ್ ಪಾದಾರ್ಪಣೆ: ಫೆಬ್ರವರಿ 16, 2010 ರಂದು ಚೆನ್ನೈನಲ್ಲಿ ಹೈದರಾಬಾದ್ ವಿರುದ್ಧ ಆಡುವ ಮೂಲಕ ಹಿರಿಯರ ರಾಜ್ಯ ತಂಡಕ್ಕೆ ಮೊದಲ ಕ್ಯಾಪ್ ಧರಿಸಿದರು.
- ಲಿಸ್ಟ್ ಎ ಸಾಧನೆ: ಆಡಿದ 3 ಪಂದ್ಯಗಳಿಂದ 6 ವಿಕೆಟ್ಗಳನ್ನು ಪಡೆದಿದ್ದರು. ಹಾಗೆಯೇ 50 ರನ್ಗಳಿಗೆ 4 ವಿಕೆಟ್ (4/50) ಇವರ ಅತ್ಯುತ್ತಮ ಲಿಸ್ಟ್-ಎ ಪ್ರದರ್ಶನವಾಗಿದೆ.
- ಟಿ20 ಕ್ರಿಕೆಟ್ ಪಾದಾರ್ಪಣೆ: ಅಕ್ಟೋಬರ್ 21, 2011 ರಂದು ಆಂಧ್ರಪ್ರದೇಶ ವಿರುದ್ಧ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
- ಟಿ20 ಸಾಧನೆ: ಆಡಿದ 9 ಪಂದ್ಯಗಳಿಂದ 8 ವಿಕೆಟ್ಗಳನ್ನು ಪಡೆದಿದ್ದರು. 18 ರನ್ಗಳಿಗೆ 2 ವಿಕೆಟ್ (2/18) ಇವರ ಬೆಸ್ಟ್ ಬೌಲಿಂಗ್ ಸ್ಪೆಲ್ ಆಗಿದೆ.
- ಕೆಪಿಎಲ್ ಮತ್ತು ಇತರೆ ತಂಡಗಳು: ಕರ್ನಾಟಕ ಪ್ರೀಮಿಯರ್ ಲೀಗ್ (KPL) ಟೂರ್ನಿಯಲ್ಲಿ ಅವರು ಬಿಜಾಪುರ್ ಬುಲ್ಸ್, ಬಳ್ಳಾರಿ ಟಸ್ಕರ್ಸ್, ಮೈಸೂರು ವಾರಿಯರ್ಸ್ ಮತ್ತು ಮಂಗಳೂರು ಯುನೈಟೆಡ್ ಸೇರಿದಂತೆ ಹಲವು ಪ್ರಮುಖ ಫ್ರಾಂಚೈಸಿಗಳ ಪರ ಆಡಿದ್ದರು. ಇತ್ತೀಚಿನವರೆಗೂ ಅವರು ಬ್ಯಾಂಕ್ ಆಫ್ ಬರೋಡಾ (Bank of Baroda) ತಂಡದ ಪರವಾಗಿ ಹಾಗೂ ಕೆ.ಎಸ್.ಸಿ.ಎ ಲೀಗ್ಗಳಲ್ಲಿ ಸಫೈರ್ ಸಿಸಿ ಪರ ಅತ್ಯಂತ ಸಕ್ರಿಯವಾಗಿ ಆಡುತ್ತಿದ್ದರು.
ದೊಡ್ಡ ಗಣೇಶ್ ಸಂತಾಪ:
ಎಸ್.ಎಲ್ ಅಕ್ಷಯ್ ಅವರ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿರುವ ಟೀಮ್ ಇಂಡಿಯಾದ ಮಾಜಿ ವೇಗಿ, ಕನ್ನಡಿಗ ದೊಡ್ಡ ಗಣೇಶ್ ಅವರು, ಕ್ರಿಕೆಟ್ ಸಮುದಾಯಕ್ಕೆ ಅತ್ಯಂತ ಆಘಾತಕಾರಿ ಸುದ್ದಿ. ಅಂಡರ್-19 ಕ್ರಿಕೆಟ್ ದಿನಗಳಿಂದಲೂ ನಾನು ಹತ್ತಿರದಿಂದ ನೋಡಿದ್ದ 39 ವರ್ಷದ ವೇಗದ ಬೌಲರ್ ಎಸ್.ಎಲ್. ಅಕ್ಷಯ್, ಇಂದು ಡಿವಿಷನ್ ಪಂದ್ಯವನ್ನಾಡುವಾಗ ನಿಧನರಾಗಿದ್ದಾರೆ.
ಈ ಬಗ್ಗೆ ನನಗೆ ದುಃಖವನ್ನು ವ್ಯಕ್ತಪಡಿಸಲು ಮಾತುಗಳೇ ಸಿಗುತ್ತಿಲ್ಲ. 2011/12 ರಲ್ಲಿ ಕರ್ನಾಟಕ ತಂಡದ ಪರವಾಗಿ ಆಡಿ ಉತ್ತಮ ಯಶಸ್ಸು ಕಂಡಿದ್ದ, ಮೃದು ಸ್ವಭಾವದ ವ್ಯಕ್ತಿ ಅಕ್ಷಯ್ ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲಾಗುತ್ತಿಲ್ಲ. RIP Akshay… ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ಈ ನೋವನ್ನ ಸಹಿಸಿಕೊಳ್ಳೋ ಶಕ್ತಿ ಆ ಭಗವಂತ ನೀಡಲಿ ಎಂದಷ್ಟೇ ಕೇಳಿಕೊಳ್ಳಬಲ್ಲೆ ಎಂದು ದೊಡ್ಡ ಗಣೇಶ್ ಸೋಷಿಯಲ್ ಮೀಡಿಯಾ ಮೂಲಕ ಸಂತಾಸ ಸೂಚಿಸಿದ್ದಾರೆ.
ಯುವ ಪ್ರತಿಭೆಗಳಿಗೆ ಮಾರ್ಗದರ್ಶಕ:
ಕ್ರಿಕೆಟ್ ಆಟದಿಂದ ನಿವೃತ್ತರಾದ ಮೇಲೆಯೂ ಅಕ್ಷಯ್ ಅವರ ಕ್ರೀಡಾ ಪ್ರೇಮ ಕಡಿಮೆಯಾಗಲಿಲ್ಲ. ಎನ್.ಸಿ.ಎ (NCA) ಪ್ರಮಾಣೀಕೃತ ಕೋಚ್ ಆಗಿ ಬದಲಾದ ಅವರು, ಕರ್ನಾಟಕದ ಅಂಡರ್-19 ಮತ್ತು ಜೂನಿಯರ್ ತಂಡಗಳ ಯುವ ಆಟಗಾರರನ್ನು ತರಬೇತುಗೊಳಿಸುವಲ್ಲಿ ನಿರತರಾಗಿದ್ದರು. ಅವರ ಗರಡಿಯಲ್ಲಿ ಬೆಳೆದ ಹಲವು ಯುವ ಆಟಗಾರರು ಇಂದು ಅಕ್ಷಯ್ ಅವರ ಕೋಚಿಂಗ್ ಶೈಲಿ ಮತ್ತು ಪ್ರೀತಿಯ ಸ್ವಭಾವವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಮುಗಿಯದ ಶೋಕ:
ಅಕ್ಷಯ್ ಕೇವಲ ಒಬ್ಬ ಉತ್ತಮ ಕ್ರಿಕೆಟಿಗನಷ್ಟೇ ಅಲ್ಲದೆ, ವೈಯಕ್ತಿಕ ಜೀವನದಲ್ಲಿ ಅತ್ಯಂತ ಸೌಮ್ಯ, ಶಿಸ್ತುಬದ್ಧ ಮತ್ತು ಸ್ನೇಹಪರ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ಮರಣದಿಂದಾಗಿ ಅವರ ಪತ್ನಿ ಹಾಗೂ ಇಬ್ಬರು ಸಣ್ಣ ಹೆಣ್ಣುಮಕ್ಕಳು ಅನಾಥರಾಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ಅಕ್ಷಯ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: IPL 2026: ಡೆಡ್ ಬಾಲ್ನಲ್ಲಿ ಔಟ್ ನೀಡಿದ ಅಂಪೈರ್..!
ಮೈದಾನದಲ್ಲಿ ಸದಾ ಹಸನ್ಮುಖಿಯಾಗಿರುತ್ತಿದ್ದ ಈ ಪ್ರತಿಭಾನ್ವಿತ ವೇಗಿಯ ನೆನಪು ಕರ್ನಾಟಕ ಕ್ರಿಕೆಟ್ ಇತಿಹಾಸದಲ್ಲಿ ಸದಾ ಜೀವಂತವಾಗಿರುತ್ತದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ, ಹಾಗೂ ಅವರ ಕುಟುಂಬಕ್ಕೆ ಈ ಅಪಾರ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
Published On - 10:30 am, Mon, 25 May 26





