IND vs SL: 2ನೇ ದಿನದ ಮೊದಲ ಸೆಷನ್ ಸಂಪೂರ್ಣ ಮಳೆಗೆ ಆಹುತಿ
Sri Lanka vs India, 1st Test: ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದೆ.

ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆರಾಯ ಭಾರಿ ಅಡ್ಡಿಪಡಿಸಿದ್ದಾನೆ. ಇಂದು (ಆಗಸ್ಟ್ 16, ಭಾನುವಾರ) ಬೆಳಿಗ್ಗೆಯಿಂದಲೇ ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ, ಪಂದ್ಯದ ಎರಡನೇ ದಿನದ ಮೊದಲ ಸೆಷನ್ ಆಟವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಶನಿವಾರ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತ್ತು. ಆದರೆ, ಎರಡನೇ ದಿನದಂದು ಭಾರತ ತಂಡ ಬೃಹತ್ ಮೊತ್ತ ಪೇರಿಸುವ ಯೋಜನೆಗೆ ಮಳೆ ತಣ್ಣೀರು ಎರಚಿದೆ.
ಗಾಲೆಯಲ್ಲಿ ಸದ್ಯ ಪಿಚ್ ಮತ್ತು ಇನ್ಫೀಲ್ಡ್ ಅನ್ನು ಸಂಪೂರ್ಣವಾಗಿ ಕವರ್ಗಳಿಂದ ಮುಚ್ಚಲಾಗಿದ್ದು, ಅಂಪೈರ್ಗಳು ಮೈದಾನದ ಪರಿಶೀಲನೆಗಾಗಿ ಕಾಯುತ್ತಿದ್ದಾರೆ. ಇನ್ನು ಪಂದ್ಯ ಶುರುವಾದರೂ ಎರಡನೇ ಸೆಷನ್ನಿಂದ ಆರಂಭವಾಗಲಿದೆ.
ಮೊದಲ ದಿನವೂ ಕಾಡಿದ್ದ ವರುಣ:
ಪಂದ್ಯದ ಮೊದಲ ದಿನದ ಆಟದಲ್ಲೂ ಮಳೆ ತನ್ನ ಪ್ರಭಾವ ಬೀರಿತು. ಲಂಚ್ ವಿರಾಮದ ವೇಳೆ ಹಾಗೂ ಟೀ ವಿರಾಮದ ಬಳಿಕ ಸುರಿದ ಮಳೆಯಿಂದಾಗಿ ಮೊದಲ ದಿನ ಕೇವಲ 73 ಓವರ್ಗಳ ಆಟ ಮಾತ್ರ ಸಾಧ್ಯವಾಗಿತ್ತು. ಆದರೂ ಭಾರತೀಯ ಬ್ಯಾಟರ್ಗಳು ಲಂಕಾ ಬೌಲರ್ಗಳನ್ನು ದಂಡಿಸುವಲ್ಲಿ ಯಶಸ್ವಿಯಾಗಿದ್ದರು.
ಪಡಿಕ್ಕಲ್ ಭರ್ಜರಿ ಶತಕದ ವೈಭವ:
ಮೊದಲ ದಿನದಾಟದ ಪ್ರಮುಖ ಆಕರ್ಷಣೆಯಾಗಿದ್ದು ಕನ್ನಡಿಗ ದೇವದತ್ ಪಡಿಕ್ಕಲ್ ಅವರ ಆಕರ್ಷಕ ಶತಕ. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಪಡಿಕ್ಕಲ್ 131 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಅವರಿಗೆ ಉತ್ತಮ ಸಾಥ್ ನೀಡುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 27 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (32) ಅರ್ಧಶತಕ ಗಳಿಸಿ ಔಟಾಗಿದ್ದರೆ, ಶುಭ್ಮನ್ ಗಿಲ್ 16 ರನ್ ಕೊಡುಗೆ ನೀಡಿದ್ದಾರೆ. ಇನ್ನು ಕೆಎಲ್ ರಾಹುಲ್ 77 ರನ್ ಗಳಿಸಿ ರಿಟೈರ್ಡ್ ಹರ್ಟ್ ಆಗಿದ್ದು, ಎರಡನೇ ದಿನದಾಟದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ಮೂರೇ 3 ಪಂದ್ಯಗಳಲ್ಲಿ ಭಾರತ, ಪಾಕ್ ದಾಖಲೆ ಮುರಿದ ಬಾಂಗ್ಲಾದೇಶ್!
ಶ್ರೀಲಂಕಾ ಪ್ಲೇಯಿಂಗ್ XI: ಲಹಿರು ಉದಾರ, ನಿಶಾನ್ ಮಧುಶಂಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶಾ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.




