ಇದುವೇ ನನ್ನ ಏಕೈಕ ಗುರಿ: ಮನದಿಂಗಿತ ಬಿಟ್ಟಿಟ್ಟ ಕೃನಾಲ್ ಪಾಂಡ್ಯ
Krunal Pandya: ವಯಸ್ಸು ಕೇವಲ ಸಂಖ್ಯೆ, ಸಾಧಿಸುವ ಹಠವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಆರ್ಸಿಬಿ ತಂಡದ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಸಾಬೀತುಪಡಿಸುತ್ತಿದ್ದಾರೆ. ಮೈದಾನದಲ್ಲಿನ ತಮ್ಮ ಆಕ್ರಮಣಕಾರಿ ಆಟ ಮತ್ತು ಸಮಯೋಚಿತ ಪ್ರದರ್ಶನದ ಮೂಲಕ ಮತ್ತೆ ಸುದ್ದಿಯಲ್ಲಿರುವ ಕೃನಾಲ್, ಈಗ ಎಲ್ಲರ ಗಮನವನ್ನು 2027ರ ಏಕದಿನ ವಿಶ್ವಕಪ್ನತ್ತ ಸೆಳೆದಿದ್ದಾರೆ.

ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮ್ಯಾಚ್-ವಿನ್ನರ್ ಆಗಿ ಹೊರಹೊಮ್ಮುತ್ತಿರುವ ಕೃನಾಲ್ ಪಾಂಡ್ಯ, ರಾಷ್ಟ್ರೀಯ ತಂಡಕ್ಕೆ ಮರಳುವ ಇಚ್ಛೆಯನ್ನು ಬಹಿರಂಗಪಡಿಸಿದ್ದಾರೆ. 2027ರಲ್ಲಿ ಆಫ್ರಿಕಾ ಮಣ್ಣಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸುವುದೇ ನನ್ನ ಪರಮ ಗುರಿ ಎಂದು ಘೋಷಿಸಿರುವ ಅವರ ಈ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿದ ಕೃನಾಲ್ ಪಾಂಡ್ಯ, ನನಗೆ 6-7 ವಯಸ್ಸಿದ್ದಾಗಿನಿಂದಲೂ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ಆ ಕನಸು ಇಂದಿಗೂ ಬದಲಾಗಿಲ್ಲ. ದೇಶಕ್ಕಾಗಿ ಆಡುವುದು ನನ್ನ ಏಕೈಕ ಗುರಿ. ಅದರಂತೆ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ಕೃನಾಲ್ ಪಾಂಡ್ಯ 2021ರ ಜುಲೈನಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದರೂ, ರಾಷ್ಟ್ರೀಯ ತಂಡಕ್ಕೆ ಮರಳುವ ಹಂಬಲ ಅವರಲ್ಲಿ ಇನ್ನೂ ಬಲವಾಗಿದೆ. ಈ ಹಂಬಲಕ್ಕೆ ಬೆಂಬಲವಾಗಿ ಅವರ ಐಪಿಎಲ್ ಪ್ರದರ್ಶನ ನಿಂತಿದೆ.
ಕೃನಾಲ್ ಭರ್ಜರಿ ಪ್ರದರ್ಶನ:
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರಲ್ಲಿ ಕೃಣಾಲ್ ಪಾಂಡ್ಯ ಆರ್ಸಿಬಿ ಪರ ಅದ್ಭುತ ಫಾರ್ಮ್ನಲ್ಲಿದ್ದಾರೆ. ಈ ಫಾರ್ಮ್ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
- ಬ್ಯಾಟಿಂಗ್: ಮುಂಬೈ ಇಂಡಿಯನ್ಸ್ ವಿರುದ್ಧದ ಕಠಿಣ ಪರಿಸ್ಥಿತಿಯಲ್ಲಿ ಕೇವಲ 46 ಎಸೆತಗಳಲ್ಲಿ 73 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಈ ಮೂಲಕ ಆರ್ಸಿಬಿ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
- ಬೌಲಿಂಗ್: ಈ ಸೀಸನ್ನಲ್ಲಿ 10 ವಿಕೆಟ್ಗಳನ್ನು ಕಬಳಿಸಿರುವ ಕೃನಾಲ್, ಸ್ಪಿನ್ ವಿಭಾಗದಲ್ಲಿ ಆರ್ಸಿಬಿಗೆ ಸಮತೋಲನ ನೀಡುತ್ತಿದ್ದಾರೆ.
- ದಾಖಲೆ: ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಫೈನಲ್ನಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಅವರು ಹೊಂದಿದ್ದಾರೆ (2017 ಮತ್ತು 2025).
ಇದನ್ನೂ ಓದಿ: ಕೃನಾಲ್ ಪಾಂಡ್ಯ ಅಲ್ಲೇ ಸಾಯಬೇಕಿತ್ತು… ಇದೆಂತಹ ನೀಚತನ..!
ಸವಾಲುಗಳು ಮತ್ತು ಸಾಧ್ಯತೆಗಳು:
2027ರ ವಿಶ್ವಕಪ್ ವೇಳೆಗೆ ಕೃನಾಲ್ ಪಾಂಡ್ಯ ಅವರಿಗೆ 36-37 ವರ್ಷ ವಯಸ್ಸಾಗಲಿದ್ದು, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರಂತಹ ಅನುಭವಿಗಳ ಜೊತೆ ಸ್ಪರ್ಧಿಸಬೇಕಾಗುತ್ತದೆ. ಆದಾಗ್ಯೂ, ಆರ್ಸಿಬಿ 2025ರಲ್ಲಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೃನಾಲ್, ಒತ್ತಡದ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
“ಮುಂದಿನ ವರ್ಷ ವಿಶ್ವಕಪ್ ಬರುತ್ತಿದೆ. ನಾನು ಉತ್ತಮ ಪ್ರದರ್ಶನ ಮುಂದುವರಿಸುತ್ತೇನೆ ಎಂದು ನಂಬಿದ್ದೇನೆ. ಅವಕಾಶ ಸಿಕ್ಕರೆ ಅದು ನನಗೆ ಮತ್ತು ನನ್ನ ಕುಟುಂಬಕ್ಕೆ ವಿಶೇಷ ಕ್ಷಣವಾಗಿರಲಿದೆ” ಎಂದು ಕೃನಾಲ್ ಪಾಂಡ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




