ಬ್ಯಾಟರೂ ಅಲ್ಲ, ಬೌಲರೂ ಅಲ್ಲ… ಸೋಲಿಗೆ ಧೋನಿ ದೂರಿದ್ದು ಯಾರನ್ನ ಗೊತ್ತೇ..!

IPL 2025 CSK vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ 49ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.2 ಓವರ್​ಗಳಲ್ಲಿ 190 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ 19.4 ಓವರ್​ಗಳಲ್ಲಿ 194 ರನ್​ ಬಾರಿಸಿ 6 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಬ್ಯಾಟರೂ ಅಲ್ಲ, ಬೌಲರೂ ಅಲ್ಲ... ಸೋಲಿಗೆ ಧೋನಿ ದೂರಿದ್ದು ಯಾರನ್ನ ಗೊತ್ತೇ..!
Ms Dhoni

Updated on: May 01, 2025 | 9:57 AM

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2025) 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಸಿಎಸ್​ಕೆ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಯಾಮ್ ಕರನ್ 47 ಎಸೆತಗಳಲ್ಲಿ 88 ರನ್ ಬಾರಿಸಿದ್ದರು. ಈ ಸ್ಪೋಟಕ ಬ್ಯಾಟಿಂಗ್ ನೆರವಿನೊಂದಿಗೆ ಸಿಎಸ್​ಕೆ ತಂಡವು 190 ರನ್ ಕಲೆಹಾಕಿತು.

191 ರನ್​ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ತಂಡದ ಪರ ಪ್ರಭ್​ಸಿಮ್ರಾನ್ ಸಿಂಗ್ 54 ರನ್ ಬಾರಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 72 ರನ್​ ಚಚ್ಚಿದರು. ಈ ಮೂಲಕ ಪಂಜಾಬ್ ಪಡೆ 19.4 ಓವರ್​ಗಳಲ್ಲಿ 190 ರನ್ ಬಾರಿಸಿ 6 ವಿಕೆಟ್​ಗಳ ಗೆಲುವು ದಾಖಲಿಸಿತು. ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ.

ಈ ಸೋಲಿನ ಬಳಿಕ ಮಾತನಾಡಿದ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಿದ್ದೆವು. ಅದರಲ್ಲೂ ನಮ್ಮ ಬ್ಯಾಟಿಂಗ್ ಉತ್ತಮವಾಗಿತ್ತು. ಇದೇ ಮೊದಲ ಬಾರಿಗೆ ನಾವು ಸಾಕಷ್ಟು ರನ್​ಗಳಿಸಲು ಯಶಸ್ವಿಯಾದೆವು.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಆದರೆ ಇದು ಉತ್ತಮ ಸ್ಕೋರ್ ಆಗಿತ್ತೇ ಎಂದು ಕೇಳಿದರೆ, ಖಂಡಿತವಾಗಿಯೂ ಅಲ್ಲ. ಅಂತಿಮ ಹಂತದಲ್ಲಿ ಸ್ಕೋರ್​ಗಳಿಸುವಲ್ಲಿ ನಾವು ಎಡವಿದೆವು. ಕೊನೆಯ ಓವರ್​ಗಳ ವೇಳೆ ಮತ್ತಷ್ಟು ರನ್​ಗಳಿಸಿದ್ದರೆ ಉತ್ತಮ ಪೈಪೋಟಿ ನೀಡಬಹುದಿತ್ತು ಎಂದು ಧೋನಿ ಹೇಳಿದ್ದಾರೆ.

ನಮ್ಮ ಪರ ಡೆವಾಲ್ಡ್ ಬ್ರೆವಿಸ್ ಮತ್ತು ಸ್ಯಾಮ್ ಕರನ್ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದರು. ಆದರೆ ಕೊನೆಯ 4 ಎಸೆತಗಳಿರುವಾಗಲೇ ನಾವು ಆಲೌಟ್ ಆಗಿದ್ದು ದುಬಾರಿಯಾಯಿತು. ಅಂತಿಮ ಹಂತದಲ್ಲಿ ನಾಲ್ವರು ಬ್ಯಾಟರ್​ಗಳು ವಿಕೆಟ್ ಒಪ್ಪಿಸಿದ್ದು ಸ್ಕೋರ್ ಕಡಿಮೆಯಾಗುವಂತೆ ಮಾಡಿತು.

ಇದಾಗ್ಯೂ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದ್ದವು. ಹೀಗಾಗಿ ಬೌಲರ್​ಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಿದ್ದೆವು. ಆದರೆ ನಮ್ಮ ಫೀಲ್ಡರ್​ಗಳು ಮಾಡಿದ ತಪ್ಪಿನಿಂದಾಗಿ ಸೋಲನುಭವಿಸಬೇಕಾಯಿತು. ನಾವು ಕೈ ಬಿಟ್ಟ ಕೆಲ ಕ್ಯಾಚ್​ಗಳು ಇಡೀ ಪಂದ್ಯದ ಮೇಲೆ ಪರಿಣಾಮ ಬೀರಿತು. ಕೈಚೆಲ್ಲಿದ ಕ್ಯಾಚ್​ಗಳಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಸೋಲನುಭವಿಸಬೇಕಾಯಿತು ಎಂದು ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್​ವೆಲ್

ಒಟ್ಟಿನಲ್ಲಿ ಈವರೆಗೆ 10 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು 8 ಮ್ಯಾಚ್​ಗಳಲ್ಲಿ ಸೋಲನುಭವಿಸುವ ಮೂಲಕ ಐಪಿಎಲ್ ಸೀಸನ್-18ರ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಇದರೊಂದಿಗೆ ಈ ಬಾರಿ ಟ್ರೋಫಿ ಗೆಲ್ಲಬೇಕೆಂಬ ಸಿಎಸ್​ಕೆ ತಂಡದ ಕನಸು ಕೂಡ ಕಮರಿದೆ.