IND vs PAK, Asia Cup: ಓಡಿ ಹೋದ ಪಾಕಿಸ್ತಾನ ನಾಯಕ: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ಗೂ ಬರಲಿಲ್ಲ
Salman Agha Post Match Presentation: ಏಷ್ಯಾ ಕಪ್ 2025 ರಲ್ಲಿ, ಭಾರತ ತಂಡವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸುವ ಮೂಲಕ ಅವಮಾನಿಸಿತು. ಈ ಪಂದ್ಯದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡರು. ಅವರು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ಗೆ ಹಾಜರಾಗದೆ ನೇರವಾಗಿ ಮೈದಾನ ತೊರೆದರು.

ಬೆಂಗಳೂರು (ಸೆ. 15): 2025 ರ ಏಷ್ಯಾ ಕಪ್ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ತಂಡವನ್ನು 7 ವಿಕೆಟ್ಗಳಿಂದ ಹೀನಾಯವಾಗಿ ಸೋಲಿಸಿತು. ಈ ಪಂದ್ಯಕ್ಕೂ ಮೊದಲು ಮತ್ತು ನಂತರ ಸಾಕಷ್ಟು ವಿವಾದಗಳಾದವು. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಹಸ್ತಲಾಘವ ಮಾಡಲಿಲ್ಲ. ಇದು ಟಾಸ್ ನಂತರ ಅಥವಾ ಪಂದ್ಯ ಮುಗಿದ ನಂತರವೂ ಆಗಲಿಲ್ಲ. ಈ ಎಲ್ಲ ಘಟನೆಯಿಂದ ಮನನೊಂದು ಪಂದ್ಯವನ್ನು ಸೋತ ನಂತರ, ಪಾಕಿಸ್ತಾನಿ ನಾಯಕ ಸಲ್ಮಾನ್ ಆಘಾ ಕೂಡ ದೊಡ್ಡ ಹೆಜ್ಜೆ ಇಟ್ಟರು.
ಸಲ್ಮಾನ್ ಅಲಿ ಆಘಾ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ಗೆ ಗೈರು
ಈ ಸೋಲಿನ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಪಂದ್ಯದ ನಂತರದ ಪ್ರಸ್ತುತಿಗೆ ಬರಲಿಲ್ಲ. ಭಾರತೀಯ ಬೌಲರ್ಗಳು, ವಿಶೇಷವಾಗಿ ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಸೂರ್ಯಕುಮಾರ್ ಯಾದವ್ ನಾಯಕತ್ವದ ಇನ್ನಿಂಗ್ಸ್ ಆಡಿದರು ಮತ್ತು ಭಾರತಕ್ಕೆ ಏಳು ವಿಕೆಟ್ಗಳ ದೊಡ್ಡ ಗೆಲುವು ತಂದುಕೊಟ್ಟರು. ಸೋಲಿನಿಂದ ನಿರಾಶೆಗೊಂಡ ಸಲ್ಮಾನ್ ಅಲಿ ಆಘಾ ಪ್ರಸಾರಕರೊಂದಿಗಿನ ಸಂಭಾಷಣೆಗೂ ಬರಲಿಲ್ಲ.
ಪಾಕಿಸ್ತಾನ ಕೋಚ್ನ ಅಚ್ಚರಿ ಹೇಳಿಕೆ
ಭಾರತದ ಹೀನಾಯ ಸೋಲಿನ ನಂತರ, ಪಾಕಿಸ್ತಾನದ ಮುಖ್ಯ ಕೋಚ್ ಮೈಕ್ ಹೆಸ್ಸನ್ ಪತ್ರಿಕಾಗೋಷ್ಠಿ ನಡೆಸಲು ಬಂದರು. ಅಲ್ಲಿ ಅವರು, ‘ಪಂದ್ಯದ ಕೊನೆಯಲ್ಲಿ, ನಾವು ಕೈಕುಲುಕಲು ಸಿದ್ಧರಿದ್ದೆವು. ನಮ್ಮ ಎದುರಾಳಿಗಳು ಹಾಗೆ ಮಾಡದಿದ್ದಕ್ಕೆ ನಮಗೆ ನಿರಾಶೆಯಾಯಿತು. ನಾವು ಅವರೊಂದಿಗೆ ಕೈಕುಲುಕಲು ಹೋದೆವು, ಆದರೆ ಅವರು ಮೊದಲೇ ಡ್ರೆಸ್ಸಿಂಗ್ ಕೋಣೆಗೆ ಹೋಗಿದ್ದರು. ಪಂದ್ಯ ಈ ರೀತಿ ಕೊನೆಗೊಂಡಿರುವುದು ನಿರಾಶಾದಾಯಕವಾಗಿತ್ತು. ನಮ್ಮ ಪ್ರದರ್ಶನದಿಂದ ನಾವು ನಿರಾಶೆಗೊಂಡಿದ್ದೇವೆ, ಆದರೆ ನಾವು ಇನ್ನೂ ಕೈಕುಲುಕಲು ಸಿದ್ಧರಿದ್ದೇವೆ’ ಎಂದು ಹೇಳಿದರು.
IND vs PAK: ಈ ಗೆಲುವು ಸೇನೆಗೆ ಅರ್ಪಣೆ, ಪಹಲ್ಗಾಮ್ ಸಂತ್ರಸ್ತರೊಂದಿಗೆ ನಾವಿದ್ದೇವೆ: ಸೂರ್ಯಕುಮಾರ್ ಯಾದವ್
ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸುತ್ತೇನೆ
ಏತನ್ಮಧ್ಯೆ, ಪ್ರಸ್ತುತಿಯಲ್ಲಿ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಸೂರ್ಯಕುಮಾರ್ ಯಾದವ್ ಈ ವಿಜಯವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದರು. ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದರು.
ಕುಲದೀಪ್ ಯಾದವ್ ಗೆಲುವಿನ ನಾಯಕ
ತಮ್ಮ ಬೌಲಿಂಗ್ ಬಗ್ಗೆ ಮಾತನಾಡಿದ ಕುಲದೀಪ್ ಯಾದವ್, ‘ನನ್ನ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸುವತ್ತ ನಾನು ಗಮನಹರಿಸುತ್ತೇನೆ. ಯಾರು ಬ್ಯಾಟಿಂಗ್ ಮಾಡುತ್ತಿದ್ದಾರೆಂದು ನಾನು ನೋಡುತ್ತೇನೆ ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತೇನೆ. ನನಗೆ ನನ್ನದೇ ಆದ ಯೋಜನೆಗಳಿವೆ ಮತ್ತು ನಾನು ಅವುಗಳನ್ನು ಕಾರ್ಯಗತಗೊಳಿಸುತ್ತೇನೆ. ಮೊದಲ ಚೆಂಡು ಯಾವಾಗಲೂ ವಿಕೆಟ್ ತೆಗೆದುಕೊಳ್ಳುವ ಚೆಂಡು. ನೀವು ಅದೇ ಮನಸ್ಥಿತಿಯೊಂದಿಗೆ ಬೌಲಿಂಗ್ ಮಾಡಬೇಕು. ಬ್ಯಾಟ್ಸ್ಮನ್ ಸೆಟ್ ಆಗಿರಬಹುದು, ಆದರೆ ಅವನು ಮೊದಲ ಬಾರಿಗೆ ನನ್ನನ್ನು ಎದುರಿಸುತ್ತಿದ್ದಾನೆ. ನಾನು ಇನ್ನೂ ನನ್ನ ಬೌಲಿಂಗ್ನಲ್ಲಿ ಕೆಲಸ ಮಾಡಬೇಕಾಗಿದೆ.’ ಎಂದು ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




