ಅಮ್ಮ-ಅಪ್ಪ ಕಾಡಿಗೆ ಹೋಗಿದ್ದಾರೆ: ಜಲಪ್ರಳಯದಲ್ಲಿ ಎಲ್ಲರನ್ನೂ ಕಳೆದುಕೊಂಡು ಅನಾಥನಾದ ಬಾಲಕನಿಂದ ಸತ್ಯ ಮುಚ್ಚಿಟ್ಟ ಕುಟುಂಬ
ನೇಪಾಳದ ಭೀಕರ ಪ್ರವಾಹದಿಂದ 12 ವರ್ಷದ ತ್ಸೆರಿಂಗ್ ಅನಾಥನಾಗಿದ್ದಾನೆ. ತನ್ನ ಹೆತ್ತವರನ್ನು ಕಳೆದುಕೊಂಡಿದ್ದರೂ, ಅವರು ಕಾಡಿನ ಕೆಲಸಕ್ಕೆ ಹೋಗಿದ್ದಾರೆ ಎಂದು ಕುಟುಂಬ ಸತ್ಯ ಮುಚ್ಚಿಟ್ಟಿದೆ. ಕಠ್ಮಂಡುವಿನ ಮಠದಲ್ಲಿ ಆಶ್ರಯ ಪಡೆದಿರುವ ತ್ಸೆರಿಂಗ್ ಇಂದಿಗೂ ಅವರ ಮರಳಿ ಬರುವಿಕೆಗಾಗಿ ಕಾದು ಕುಳಿತಿದ್ದಾನೆ. ಈ ದುರಂತ ಸಾವಿರಾರು ಬದುಕುಗಳನ್ನು ನಿರ್ಗತಿಕರನ್ನಾಗಿಸಿದ್ದು, ಸಂತ್ರಸ್ತರು ಕಠ್ಮಂಡು ಮಠದಲ್ಲಿ ಹೊಸ ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಕಠ್ಮಂಡು, ಸೆಪ್ಟೆಂಬರ್ 08: ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಹಿಮನದಿ ಒಡೆದು ಸಂಭವಿಸಿದ ಭೀಕರ ಜಲಪ್ರಳಯವು ಕೇವಲ ಊರು-ಕೇರಿಗಳನ್ನಷ್ಟೇ ಕೊಚ್ಚಿ ಹಾಕಿಲ್ಲ, ನೂರಾರು ಕುಟುಂಬಗಳ ಕನಸುಗಳನ್ನೂ ನುಚ್ಚುನೂರು ಮಾಡಿದೆ. ಈ ಭೀಕರ ದುರಂತದಲ್ಲಿ ತಂದೆ-ತಾಯಿಯಿಬ್ಬರನ್ನೂ ಕಳೆದುಕೊಂಡ 12 ವರ್ಷದ ಬಾಲಕ ತ್ಸೆರಿಂಗ್ ಕಠ್ಮಂಡುವಿನ ಬೌದ್ಧ ಮಠವೊಂದರಲ್ಲಿ ಆಶ್ರಯ ಪಡೆದಿದ್ದಾನೆ. ಆದರೆ, ತನ್ನ ಹೆತ್ತವರು ಇನ್ನಿಲ್ಲ ಎಂಬ ಕಹಿ ಸತ್ಯ ಆ ಮುಗ್ಧ ಬಾಲಕನಿಗೆ ತಿಳಿದಿಲ್ಲ. “ಅಪ್ಪ-ಅಮ್ಮ ಕಾಡಿನಲ್ಲಿದ್ದಾರೆ, ರಸ್ತೆ ಸರಿಹೋದ ಮೇಲೆ ಬರುತ್ತಾರೆ” ಎಂಬ ಆಪ್ತರ ಸುಳ್ಳನ್ನೇ ನಂಬಿ, ಆತ ಇಂದಿಗೂ ಅವರ ಮರಳಿ ಬರುವಿಕೆಗಾಗಿ ಕಾದು ಕುಳಿತಿದ್ದಾನೆ. ಈ ಕುರಿತು ಎನ್ಡಿಟಿವಿ ವರದಿ ಮಾಡಿದೆ.
ಆಗಸ್ಟ್ 26 ರಂದು ರಸುವಾ ಜಿಲ್ಲೆಯಲ್ಲಿ ನದಿಯ ಪ್ರವಾಹ ಉಕ್ಕಿ ಹರಿದಾಗ ತ್ಸೆರಿಂಗ್ನ ತಾಯಿ ಕಮ್ಮಿ ಹಾಗೂ ತಂದೆ ಫರ್ಸಾಂಗ್ ಕೊಚ್ಚಿಹೋಗಿ ಮೃತಪಟ್ಟರು. ಆದರೆ ಈ ಆಘಾತವನ್ನು ಆ ಬಾಲಕನಿಗೆ ತಡೆಯಲು ಸಾಧ್ಯವಿಲ್ಲವೆಂದು ಭಾವಿಸಿದ ಆತನ ಅಜ್ಜಿ ಮತ್ತು ಚಿಕ್ಕಮ್ಮ, “ಅಪ್ಪ-ಅಮ್ಮ ಕಾಡಿನ ಕೆಲಸಕ್ಕೆ ಹೋಗಿದ್ದಾರೆ, ರಸ್ತೆ ಸರಿಹೋದ ಮೇಲೆ ಒಂದು-ಎರಡು ವರ್ಷದಲ್ಲಿ ವಾಪಸ್ ಬರುತ್ತಾರೆ” ಎಂದು ಸಮಾಧಾನಪಡಿಸಿದ್ದಾರೆ. ಸುತ್ತಮುತ್ತಲಿನವರು ಅಳುವುದನ್ನು ಕಂಡಾಗ ಆತ ಬೆರಗಾಗಿ ನೋಡುತ್ತಾನೆ.
520 ಸಂತ್ರಸ್ತರಿಗೆ ಆಸರೆಯಾದ ಕಠ್ಮಂಡು ಮಠ: ರಸುವಾ ಕಣಿವೆಯ ಮನೆ, ಮಠ, ರಸ್ತೆ ಹಾಗೂ ಸೇತುವೆಗಳು ಪ್ರವಾಹಕ್ಕೆ ಆಹುತಿಯಾದ ಬಳಿಕ ಸುಮಾರು 520 ಸಂತ್ರಸ್ತರು ಕಠ್ಮಂಡುವಿನ ಬೌದ್ಧ ಮಠವೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಸಾಮೂಹಿಕ ಅಡುಗೆಮನೆ, ತಾತ್ಕಾಲಿಕ ಆಸ್ಪತ್ರೆ ಮತ್ತು ಬಂಕ್ ಹಾಸಿಗೆಗಳ ಹಾಲ್ನಲ್ಲಿ ಅವರೆಲ್ಲ ಬದುಕನ್ನು ಶೂನ್ಯದಿಂದ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಮತ್ತಷ್ಟು ಓದಿ: ನೇಪಾಳದ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,259ಕ್ಕೆ ಏರಿಕೆ, 5 ಸಾವಿರ ಜನರಿಗಾಗಿ ಹುಡುಕಾಟ
ಶೂನ್ಯಕ್ಕೆ ಇಳಿದ ಬದುಕು: 35 ವರ್ಷಗಳಿಂದ ಅದೇ ಕಣಿವೆಯಲ್ಲಿ ಬದುಕಿದ್ದ 40 ವರ್ಷದ ಶ್ಯಾಮ್ ಬಹದ್ದೂರ್ ತಮಾಂಗ್ ಎಂಬುವವರು ಪ್ರವಾಹಕ್ಕೆ ತಾಯಿ ಮತ್ತು ಸಹೋದರನನ್ನು ಕಳೆದುಕೊಂಡಿದ್ದಾರೆ. “ಮನೆಯೂ ಹೋಯಿತು, ಬದುಕಿನ ಸಂಪಾದನೆಯೂ ಹೋಯಿತು. ನಾವು ಸಂಪೂರ್ಣವಾಗಿ ಶೂನ್ಯಕ್ಕೆ ಬಂದು ನಿಂತಿದ್ದೇವೆ” ಎಂದು ಕಣ್ಣೀರಿಡುತ್ತಾರೆ.
ನೆನಪಿನ ಛಾಯಾಚಿತ್ರಗಳು: ಮಠದಲ್ಲಿ ಸ್ವಯಂಸೇವಕರಾಗಿರುವ ಬುಜುಂಗ್ ತಮ್ಮ ಸ್ವಂತ ಗ್ರಾಮ ಮತ್ತು ಕುಟುಂಬದ50ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿದ್ದಾರೆ. ಮೇಜಿನ ಮೇಲೆ ಮೃತರ ಮತ್ತು ನಾಪತ್ತೆಯಾದವರ ಛಾಯಾಚಿತ್ರಗಳನ್ನು ಜೋಡಿಸಿದರೆ ಮೇಜಿನ ಜಾಗವೇ ಸಾಲದಷ್ಟು ಸಾವು-ನೋವು ಸಂಭವಿಸಿದೆ.
ಹಿಮನದಿ ಸರೋವರ ಸ್ಫೋಟ : ಹಿಮಾಲಯದ ತಪ್ಪಲಿನಲ್ಲಿ ತಾಪಮಾನ ಏರಿಕೆ ಮತ್ತು ಮಳೆಯ ಕಾರಣದಿಂದ ನೈಸರ್ಗಿಕ ಹಿಮನದಿ ಅಣೆಕಟ್ಟು ಒಡೆದು ದಿಢೀರ್ ಪ್ರವಾಹ ಸಂಭವಿಸಿದೆ. ಇದರಿಂದಾಗಿ ಕೆಸರು, ಬಂಡೆಗಳು ಮತ್ತು ಬೃಹತ್ ನೀರು ರಸುವಾ ಕಣಿವೆಯನ್ನು ಕ್ಷಣಾರ್ಧದಲ್ಲಿ ನುಂಗಿಹಾಕಿತು.
1,300 ಕ್ಕೂ ಹೆಚ್ಚು ಸಾವು: ಈ ದುರಂತದಲ್ಲಿ ಕೇವಲ ನೇಪಾಳದಲ್ಲೇ 1,300ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ನೂರಾರು ಮಂದಿ ಇಂದಿಗೂ ನಾಪತ್ತೆಯಾಗಿದ್ದಾರೆ. ಸಂಪೂರ್ಣ ಗ್ರಾಮಗಳೇ ಭೂಪಟದಿಂದ ಅಳಿಸಿಹೋಗಿವೆ.
ದುರಂತದಿಂದ ಮಕ್ಕಳ ಮನಸ್ಸಿನ ಮೇಲಾಗಿರುವ ಆಘಾತವನ್ನು ಕಡಿಮೆ ಮಾಡಲು ಮಠದಲ್ಲಿ ಸಣ್ಣ ಆಟಿಕೆಗಳು, ಬ್ಲಾಕ್ಗಳು ಹಾಗೂ ಟ್ರಾಂಪೊಲೈನ್ಗಳನ್ನು ಅಳವಡಿಸಲಾಗಿದೆ. ಮಕ್ಕಳು ಆಟವಾಡುತ್ತಾ ಕೆಲ ಕ್ಷಣ ನೋವನ್ನು ಮರೆತರೂ, ಹಿರಿಯರ ಮುಖದಲ್ಲಿ ಕಳೆದುಕೊಂಡ ಬದುಕಿನ ಅತಂತ್ರತೆ ಎದ್ದು ಕಾಣುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




