ಉದ್ಯೋಗ ಬಹಳ ರಿಸ್ಕ್; ಬಿಸಿನೆಸ್ ಮಾಡ್ರಪ್ಪ ಅಂತಿದಾರೆ ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಛೇರ್ಮನ್ ರವಿ ವೆಂಕಟೇಸನ್

Microsoft India Ex Chief Ravi Venkatesan: ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಛೇರ್ಮನ್ ಮತ್ತು ಬ್ಯಾಂಕ್ ಆಫ್ ಬರೋಡಾದ ಮಾಜಿ ಛೇರ್ಮನ್ ರವಿ ವೆಂಕಟೇಶನ್ ಅವರು ಫೋರ್ಬ್ಸ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಉದ್ಯೋಗ ಮತ್ತು ಉದ್ಯಮಶೀಲತೆ ಹಾಗೂ ಮಹಿಳಾ ನೇತೃತ್ವದ ಉದ್ದಿಮೆಗಳ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಮೂಹ ಉದ್ಯಮಶೀಲತೆ (Mass Entrepreneurship) ಇವತ್ತಿನ ಸಂದರ್ಭದಲ್ಲಿ ಎಷ್ಟು ಅಗತ್ಯ ಎಂಬುದನ್ನು ವಿವರಿಸಿದ್ದಾರೆ.

ಉದ್ಯೋಗ ಬಹಳ ರಿಸ್ಕ್; ಬಿಸಿನೆಸ್ ಮಾಡ್ರಪ್ಪ ಅಂತಿದಾರೆ ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಛೇರ್ಮನ್ ರವಿ ವೆಂಕಟೇಸನ್
ರವಿ ವೆಂಕಟೇಸನ್
Follow us
|

Updated on: Oct 24, 2023 | 11:22 AM

ಈಗ್ಗೆ ಕೆಲವಾರು ವರ್ಷಗಳಿಂದ ವಿಶ್ವಾದ್ಯಂತ ಬಹಳಷ್ಟು ಕಂಪನಿಗಳು ಲೇ ಆಫ್ (layoffs) ನಡೆಸುತ್ತಿರುವುದು ಗೊತ್ತೇ ಇದೆ. ಇವತ್ತು ಗ್ಯಾರಂಟಿ ಎನಿಸಿದ್ದ ಕೆಲಸ ಮುಂದಿನ ಕೆಲ ತಿಂಗಳಲ್ಲಿ ಕಳೆದುಹೋಗುತ್ತದೆ. ಅಂಥ ಪರಿಸ್ಥಿತಿ ಇದೆ. ಲಕ್ಷಾಂತರ ಜನರು ಎರಡು ವರ್ಷದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಅಮೇಜಾನ್, ಇಂಟೆಲ್, ಗೂಗಲ್ ಇತ್ಯಾದಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಅತಿಹೆಚ್ಚು ಉದ್ಯೋಗ ನೀಡುವ ಸಣ್ಣ ಕೈಗಾರಿಕೆಗಳಲ್ಲಿ ಲೇ ಆಫ್ ಆಗಿರುವುದು ಲೆಕ್ಕಕ್ಕೆ ಸಿಕ್ಕಿಲ್ಲ. ಇವತ್ತಿನ ಸ್ಪರ್ಧಾತ್ಮಕ ಉದ್ಯಮ ವಾತಾವರಣದಲ್ಲಿ ಕಂಪನಿಗಳಿಗೂ ಅಸ್ತಿತ್ವದ ಪ್ರಶ್ನೆ, ಸ್ಪರ್ಧೆಯಲ್ಲಿ ಉಳಿಯುವ ಅನಿವಾರ್ಯತೆ. ಅಂತೆಯೇ, ಹೊಸ ತಂತ್ರಗಾರಿಕೆಯೊಂದಿಗೆ ಕಂಪನಿಯ ಮರುರಚನೆಯಾಗಿ, ಅದರಲ್ಲಿ ಉದ್ಯೋಗಿಗಳನ್ನು ಲೇ ಆಫ್ ಮಾಡುವದೂ ಅನಿವಾರ್ಯವೇ ಆಗಿಹೋಗಿದೆ. ಖಾಸಗಿ ವಲಯದಲ್ಲಿ ಯಾವ ಕೆಲಸವೂ ಶಾಶ್ವತ ಅಲ್ಲ ಎಂಬುದು ಮತ್ತೆ ಮತ್ತೆ ಮನದಟ್ಟಾಗುತ್ತಿದೆ. ಮೈಕ್ರೋಸಾಫ್ಟ್​ನ ಭಾರತ ವಿಭಾಗದ ಮಾಜಿ ಛೇರ್ಮನ್ ರವಿ ವೆಂಕಟೇಶನ್ (Ravi Venkatesan) ಇದೇ ಮಾತನ್ನು ಪುನರುಚ್ಚರಿಸಿ, ಇವತ್ತಿನ ಸಂದರ್ಭದಲ್ಲಿ ಉದ್ಯೋಗ ಅತಿಹೆಚ್ಚು ರಿಸ್ಕ್ ಎಂಬುದನ್ನು ವಿವರಿಸಿದ್ದಾರೆ. ಉದ್ಯೋಗಬೇಟೆ ಬಿಟ್ಟು ವ್ಯವಹಾರದ ಹಾದಿ ಹಿಡಿಯಬೇಕೆಂದು ಎಲ್ಲಾ ವಯೋಮಾನದವರಿಗೂ ಅವರು ಕರೆ ನೀಡಿದ್ದಾರೆ.

‘ಬಹಳ ಗಂಡಾಂತರದ (risky) ಸಂಗತಿ ಎಂದರೆ ಅದು ಉದ್ಯೋಗ. ನೀವು ಕಿರಿಯರೇ ಆಗಲೀ ಹಿರಿಯರೇ ಆಗಲೀ ಉದ್ಯೋಗ ಮರೆಯಲು ಆರಂಭಿಸಿ. ಸ್ಥಿರ ಉದ್ಯೋಗಗಳು (stable job) ಸಿಗುವುದಿಲ್ಲ. ದೊಡ್ಡ ಕಂಪನಿಗಳು ಮರುರಚನೆ ಮಾಡಿದಾಗ ನಿಮ್ಮ ಕೆಲಸ ಹೋದಂತೆ. ಕಂಪನಿಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತವೆ, ಪರಿಣಾಮವಾಗಿ ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತವೆ. ಸ್ಥಿರ ಕೆಲಸಕ್ಕೆ ಇದ್ದುದರಲ್ಲಿ ಸಮೀಪ ಎಂದರೆ ಸ್ವಂತ ಉದ್ಯೋಗ ನಡೆಸುವುದು ಅಥವಾ ಬಿಸಿನೆಸ್ ಆರಂಭಿಸುವುದು,’ ಎಂದು ಬ್ಯಾಂಕ್ ಆಫ್ ಬರೋಡಾದ ಮಾಜಿ ಛೇರ್ಮನ್ ಕೂಡ ಆದ ರವಿ ವೆಂಕಟೇಶನ್ ಹೇಳುತ್ತಾರೆ.

ರವಿ ವೆಂಕಟೇಶನ್ ಅವರು ಫೋರ್ಬ್ಸ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನು ಆಡಿದ್ದು, ಸಮೂಹ ಉದ್ಯಮಶೀಲತೆಯ (Mass Entrepreneurship) ಮಹತ್ವದ ಬಗ್ಗೆ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜನರನ್ನು ಸಾಲಗಾರರನ್ನಾಗಿ ಮಾಡುತ್ತಿವೆ ಹಬ್ಬದ ಸೀಸನ್​ನ ಆಫರ್​ಗಳು; ಇದು ಹೇಗೆ?

ರವಿ ವೆಂಕಟೇಸನ್ ಅವರು 2018ರಿಂದ ಗೇಮ್ ಎನ್ನುವ ಜಾಗತಿಕ ಸಮೂಹ ಉದ್ಯಮಶೀಲತೆ ಕೂಟ (GAME—Global Alliance for Mass Entrepreneurship) ಯೋಜನೆ ಹಮ್ಮಿಕೊಂಡಿದ್ದಾರೆ. 2030ರಷ್ಟರಲ್ಲಿ ಭಾರತದಲ್ಲಿ 5 ಕೋಟಿ ಹೊಸ ಉದ್ಯೋಗಗಳು ಮತ್ತು 1 ಕೋಟಿ ಮಾಸ್ ಅಂಟ್ರಪ್ರನಿಯೂರ್​​ಗಳನ್ನು ಸೃಷ್ಟಿಸುವುದು ಈ ಗೇಮ್ ಉದ್ದೇಶ. ಅದರಲ್ಲಿ ಮಹಿಳಾ ಅಂಟ್ರಪ್ರನಿಯೂರ್​ಗಳು ಶೇ. 50ರಷ್ಟು ಇರಬೇಕೆಂಬುದು ಗೇಮ್ ಗುರಿ. ನೊಬೆಲ್ ವಿಜೇತ ಆರ್ಥಿಕ ತಜ್ಞ ನೆಡ್ ಫೆಲ್ಪ್ಸ್ ಅವರ ಆರ್ಥಿಕತೆಯ ಪರಿಕಲ್ಪನೆಯು ಗೇಮ್​ಗೆ ಸ್ಫೂರ್ತಿಯಂತೆ. ಒಂದು ಸ್ಥಳ ಶಕ್ತಿಯುತ ಎನಿಸಬೇಕಾದರೆ ಸಾಮಾಜಿಕ ಮೌಲ್ಯಗಳು ಬಹಳ ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ನೆಡ್ ಫೆಲ್ಪ್ಸ್ ಅವರ ಅಭಿಪ್ರಾಯ. ಅದರ ಪ್ರಕಾರವಾಗಿ ರವಿ ವೆಂಕಟೇಶನ್ ಅವರ ಗೇಮ್ ಯೋಜನೆ ಕೂಡ ಮೌಲ್ಯ ಕ್ರಾಂತಿ ಸೃಷ್ಟಿಸುವ ಮೂಲಕ ಪ್ರತಿಯೊಬ್ಬರಿಗೂ ಅವರ ಶಕ್ತಿಯ ಅರಿವಾಗಿಸುವ ಉದ್ದೇಶ ಹೊಂದಿದೆ.

‘ಐಐಟಿ, ಐಐಎಂಗಳಿಂದ ಬಂದವರು ಈ ಮೊದಲೇ ಇದ್ದ ಒಂದು ನೆಟ್ವರ್ಕ್​ನ ಭಾಗಗಳಾಗಿರುತ್ತಾರೆ. ಸಣ್ಣ ಪಟ್ಟಣಗಳ ಜನರಿಗೆ ಇರುವ ಜಾತಿ, ಧರ್ಮದ ತಡೆಗೋಡೆ ದೊಡ್ಡ ನಗರವರಿಗೆ ಇರುವುದಿಲ್ಲ,’ ಎಂದು ಹೇಳುವ ಅವರು, ಉದ್ಯಮಿಶೀಲತೆಗೆ ಲಿಂಗ ತಡೆ ಸಮಸ್ಯೆ ಇರುವುದನ್ನು ವಿವರಿಸುತ್ತಾರೆ. ಅವರ ಪ್ರಕಾರ, ದೊಡ್ಡ ನಗರಗಳಲ್ಲೂ ಒಂದು ಉದ್ದಿಮೆ ಆರಂಭಿಸುವ ವಿಚಾರದಲ್ಲಿ ಗಂಡಸರಿಗಿಂತ ಹೆಂಗಸರಿಗೆ ಹೆಚ್ಚಿನ ಸವಾಲಿನ ಕೆಲಸವಾಗಿರುತ್ತದೆ.

ಇದನ್ನೂ ಓದಿ: Explained: ಕ್ಯಾಷ್​ಬ್ಯಾಕ್, ಡಿಸ್ಕೌಂಟ್ ಆಫರ್​ಗಳಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ಮಾರ್ಕೆಟಿಂಗ್ ರಹಸ್ಯ

GAME ಉದ್ದೇಶವೇನು?

ಸಮೂಹ ಉದ್ಯಮಶೀಲತೆ ಅಥವಾ ಮಾಸ್ ಅಂಟ್ರಪ್ರನ್ಯೂರ್​ಶಿಪ್ ಎಂಬುದು ಪ್ರತಿಯೊಂದು ಸಣ್ಣ ಪಟ್ಟಣ ಮತ್ತು ಜಿಲ್ಲೆಗಳಲ್ಲೂ ಉದ್ಯಮಶೀಲತೆಯನ್ನು ತಲುಪಿಸುವುದಾಗಿದೆ. ಪ್ರಿಂಟ್ ಶಾಪ್, ಹೋಟೆಲ್, ಬ್ಯೂಟಿ ಪಾರ್ಲರ್ ಇತ್ಯಾದಿ ಸಣ್ಣದೇ ಆಗಲೀ ಯಾವುದೇ ವ್ಯವಹಾರ ಮಾಡುವಂತೆ ಯುವಜನರನ್ನು ಉತ್ತೇಜಿಸುವುದು ಗೇಮ್ ಗುರಿ. ದೊಡ್ಡ ಸಂಸ್ಥೆಗಳು ಆರ್ಥಿಕತೆಗೆ ಮುಖ್ಯವಾದರೂ ಅವುಗಳಿಂದ ಕೆಲವಿಷ್ಟು ದೊಡ್ಡ ಸಂಬಳದ ಕೆಲಸ ಸಿಗಬಹುದು ಮತ್ತು ಷೇರುದಾರರಿಗೆ ಲಾಭ ಕೊಡಬಹುದು ಅಷ್ಟೇ. ಈ ಅಸಮಾನತೆ ನೀತಿಸಿ ವ್ಯಾಪಕ ಸಮೃದ್ಧತೆ ಸೃಷ್ಟಿಸಲು ದೇಶಾದ್ಯಂತ ಸಮೂಹ ಉದ್ಯಮಶೀಲತೆ ಪಸರಿಸಬೇಕು. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ವ್ಯವಹಾರ ಆರಂಭಿಸಲು ಇರುವಂತಹ ಸುಲಭ ವಾತಾವರಣ ಎಲ್ಲೆಡೆ ಇರುವಂತೆ ಮಾಡಬೇಕು ಎಂದು ರವಿ ವೆಂಕಟೇಶನ್ ತನ್ನ GAME ಯೋಜನೆ ಬಗ್ಗೆ ವಿವರಣೆ ನೀಡಿದ್ದಾರೆ.

ಉದ್ದಿಮೆಗಳಿಗೆ ಸಾಲದ ಸವಾಲು…

ಭಾರತದದಲ್ಲಿ ಎಂಟು ಕೋಟಿಗೂ ಹೆಚ್ಚು ಎಂಎಸ್​ಎಂಇಗಳಿವೆ. ಆರ್ಥಿಕತೆ ಶೇ. 6ರಿಂದ 6.5ರ ದರದಲ್ಲಿ ಬೆಳೆಯುತ್ತಿದೆ. ಈ ಸನ್ನಿವೇಶದಲ್ಲಿ ಸಾಲ ಬಹಳ ಮುಖ್ಯ. ಅವಶ್ಯಕತೆಗಿಂತ ಅರ್ಧದಷ್ಟು ಮಾತ್ರವೇ ಸಾಲದ ಹಂಚಿಕೆ ಆಗುತ್ತಿದೆ. ಸಣ್ಣ ಉದ್ಯಮಗಳಿಗೆ ಅಪೌಷ್ಟಿಕತೆ ಕಾಡುತ್ತಿದೆ. ಸಣ್ಣ ನಗರಗಳಲ್ಲಿ ಉದ್ಯಮಾವಕಾಶಗಳ ಬಗ್ಗೆ ಅರಿವು ಕಡಿಮೆ ಇರುತ್ತದೆ. ಇನ್​ಫ್ರಾಸ್ಟ್ರಕ್ಚರ್ ಇಲ್ಲದೇ ಇರುವುದು ಪ್ರಮುಖ ಸವಾಲು. ಹಾಗೆಯೇ, ಸಾಂಸ್ಕೃತಿಕ ಮೌಲ್ಯಗಳು ಜನರನ್ನು ಒಂದು ಬಿಸಿನೆಸ್​ನಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಮೈಕ್ರೋಸಾಫ್ಟ್ ಇಂಡಿಯಾದ ಮಾಜಿ ಛೇರ್ಮನ್ ಆದ ಅವರು ಫೋರ್ಬ್ಸ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Inflation Target: ಇನ್ನೂ ಕೆಲ ಕಾಲ ಹಣದುಬ್ಬರ ಇದ್ದರೆ ಚಿಂತೆ ಬೇಡ; ಅಭಿವೃದ್ದಿಗೋಸ್ಕರ ಹಣದುಬ್ಬರ ಇರಲಿಬಿಡಿ: ಎಂಪಿಸಿ ಸದಸ್ಯ ಜಯಂತ್ ವರ್ಮಾ

ಮಹಿಳಾ ಉದ್ಯಮಶೀಲತೆ ಬಗ್ಗೆ…

ರವಿ ವೆಂಕಟೇಶನ್ ಅವರ ಪ್ರಕಾರ, ಭಾರತದಲ್ಲಿ ಶೇ. 16ರಷ್ಟು ಉದ್ಯಮಗಳು ಮಾತ್ರ ಮಹಿಳೆಯರಿಂದ ನಿರ್ವಹಿಸಲಾಗುತ್ತಿದೆ. ಐದಕ್ಕೂ ಹೆಚ್ಚು ಉದ್ಯೋಗಿಗಳು ಇರುವ ಉದ್ಯಮಗಳಲ್ಲಿ ಮಹಿಳಾ ನೇತೃತ್ವದ ಇರುವುದು ಶೇ. 5 ಮಾತ್ರವೇ. ಅಲ್ಲದೇ ಮಹಿಳಾ ಮಾಲಿಕತ್ವದ ಶೇ. 27ರಷ್ಟು ವ್ಯವಹಾರಗಳು ಮಾತ್ರ 10 ಲಕ್ಷ ರೂಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವುದು.

ಮಹಿಳೆಯರನ್ನು ಒಂದು ಸಮಾನ ಗುಂಪಿನಲ್ಲಿ ಇಡುವುದು ಸರಿ. ಸಮಾನ ಗುರಿ ಮತ್ತು ಮನಸ್ಸಿನ 10 ಅಥವಾ 20 ಮಹಿಳೆಯರ ಗುಂಪಿದ್ದು, ಎಲ್ಲರೂ ಕೂಡ ಬಿಸಿನೆಸ್ ಹೇಗೆ ಕಟ್ಟುವುದು ಎಂದು ಕಲಿಯುತ್ತಿದ್ದರೆ, ಅವರ ಆತ್ಮವಿಶ್ವಾಸ, ಕಲಿಕೆ ಇವೆಲ್ಲವೂ ಬಹಳ ಶಕ್ತಿಯುತವಾಗಿರುತ್ತದೆ ಎಂದು ರವಿ ವೆಂಕಟೇಶನ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ