Pakistan Stock Market: ಭಾರತದ ಆಪರೇಷನ್ ಸಿಂದೂರ; ಪಾಕಿಸ್ತಾನ ಷೇರುಪೇಟೆ ತತ್ತರ; ಕರಾಚಿ ಇಂಡೆಕ್ಸ್ ಸಖತ್ ಕುಸಿತ
Operation Sindoor effect on Pakistan stock market: ಭಾರತದ ಆಪರೇಷನ್ ಸಿಂದೂರದಿಂದ ಪಾಕಿಸ್ತಾನ ಸೇನೆ ಮಾತ್ರವಲ್ಲ, ಮಾರುಕಟ್ಟೆಯೂ ತಲ್ಲಣಗೊಂಡಿದೆ. ಇಲ್ಲಿಯ ಪ್ರಮುಖ ಸೂಚ್ಯಂಕವಾದ ಕರಾಚಿ-100 ಇಂಡೆಕ್ಸ್ ಇಂದು ಬುಧವಾರ ಬೆಳಗಿನ ವಹಿವಾಟಿನಲ್ಲಿ ಶೇ. 5.7ರಷ್ಟು ಕುಸಿತ ಕಂಡಿತ್ತು. ಆರು ಸಾವಿರಕ್ಕೂ ಅಧಿಕ ಅಂಕಗಳು ನಷ್ಟವಾಗಿತ್ತು. ಪಹಲ್ಗಾಂ ಉಗ್ರ ದಾಳಿ ಘಟನೆ ಬಳಿಕ ಪಾಕಿಸ್ತಾನದ ಷೇರು ಮಾರುಕಟ್ಟೆ ಕುಸಿತ ಕಂಡಿದ್ದರೆ, ಇದೇ ವೇಳೆ ಭಾರತದ ಮಾರುಕಟ್ಟೆ ಏರಿಕೆ ಕಂಡಿದೆ.

ಇಸ್ಲಾಮಾಬಾದ್, ಮೇ 7: ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ತಾಣಗಳ ಮೇಲೆ ಭಾರತದ ಸೇನೆಗಳು ಆಪರೇಷನ್ ಸಿಂದೂರದ (Operation Sindoor) ಮೂಲಕ ದಾಳಿ ನಡೆಸಿದ ಘಟನೆಯು ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಗಡಿಭಾಗದಲ್ಲಿ ಭಾರತದ ನಾಗರಿಕರಿರುವ ಜಾಗದ ಮೇಲೆ ದಾಳಿ ಏಳು ಮಂದಿ ಜನಸಾಮಾನ್ಯರನ್ನು ಬಲಿಪಡೆದಿದೆ. ಇದೇ ವೇಳೆ, ಪಾಕಿಸ್ತಾನ ಷೇರು ಮಾರುಕಟ್ಟೆ ಇವತ್ತು ಬೆಳಗ್ಗೆ ತತ್ತರಿಸಿದೆ. ಪಾಕ್ ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ ಕರಾಚಿ-100 ಇಂದು ಬುಧವಾರ ಬೆಳಗ್ಗಿನ ವಹಿವಾಟಿನಲ್ಲಿ 6,272 ಅಂಕಗಳಷ್ಟು ಕುಸಿತ ಕಂಡಿತ್ತು.
ಒಂದು ಹಂತದಲ್ಲಿ ಹೆಚ್ಚೂಕಡಿಮೆ ಶೇ. 6ರಷ್ಟು ಕುಸಿತ ಕಂಡಿದ್ದ ಕರಾಚಿ-100 ಇಂಡೆಕ್ಸ್ ಬಳಿಕ ಅಲ್ಪ ಚೇತರಿಕೆ ಕಂಡಿದೆ. ನಿನ್ನೆ 1,13,568.51 ಅಂಕಗಳಲ್ಲಿ ಅಂತ್ಯಗೊಂಡಿದ್ದ ಇಂಡೆಕ್ಸ್, ಬುಧವಾರ ಒಂದು ಹಂತದಲ್ಲಿ 1,07,296.64 ಅಂಕಗಳಿಗೆ ಕುಸಿದುಹೋಗಿತ್ತು. ಬೆಳಗ್ಗೆ 11 ಗಂಟೆಯ ವೇಳೆಯಲ್ಲಿ 1,12,138 ಅಂಕಗಳ ಮಟ್ಟದಲ್ಲಿತ್ತು. ಒಟ್ಟು, 1,383 ಅಂಕಗಳ ನಷ್ಟದಲ್ಲಿತ್ತು.
ಇದನ್ನೂ ಓದಿ: ಆಪರೇಷನ್ ಸಿಂಧೂರ್: ಷೇರುಮಾರುಕಟ್ಟೆ ಕುಸಿದರೂ ಡಿಫೆನ್ಸ್ ಷೇರುಗಳು ಏರಿಕೆ; ಎಚ್ಎಎಲ್ಗೂ ಬೇಡಿಕೆ
ಇತ್ತ, ಪಾಕಿಸ್ತಾನದಂತೆ ಭಾರತದಲ್ಲೂ ಷೇರು ಮಾರುಕಟ್ಟೆ ಬುಧವಾರ ಏರಿಳಿತಗಳನ್ನು ಕಂಡಿದೆ. ಪಾಕಿಸ್ತಾನದಷ್ಟಲ್ಲವಾದರೂ ಭಾರತದ ಷೇರು ಸೂಚ್ಯಂಕಗಳು ಆರಂಭಿಕ ಇಳಿಕೆ ಕಂಡು ಬಳಿಕ ಚೇತರಿಸಿಕೊಂಡಿವೆ.
ಪಹಲ್ಗಾಂ ದಾಳಿ ಬಳಿಕ ಪಾಕ್ ಮಾರುಕಟ್ಟೆ ನಿರಂತರ ಕುಸಿತ…
ಕಳೆದ ಎರಡು ವರ್ಷದಿಂದ ಸಖತ್ ಏರಿಕೆಯಲ್ಲಿದ್ದ ಕರಾಚಿ-100 ಸೂಚ್ಯಂಕ ಪಹಲ್ಗಾಂ ದಾಳಿ ಬಳಿಕ ಗಡಗಡ ನಡುಗತೊಡಗಿದೆ. ಪಹಲ್ಗಾಂ ಘಟನೆ ನಂತರ ಪಾಕಿಸ್ತಾನದ ಈ ಇಂಡೆಕ್ಸ್ ಶೇ 3.7ರಷ್ಟು ಕುಸಿತ ಕಂಡಿದೆ. ಭಾರತದ ಸೆನ್ಸೆಕ್ಸ್ ಇಂಡೆಕ್ಸ್ ಶೇ. 1.5ರಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ: ಸಿಂಧೂರ ಅಳಿಸಿದವರಿಗೆ ಸಿಂಧೂರ್ ಆಪರೇಷನ್ ಮೂಲಕ ತಕ್ಕ ಶಾಸ್ತಿ: ಪಾಕ್ ಒಳಗೆ ನುಗ್ಗಿ ಹೊಡೆದಿದ್ದೇವೆ ಎಂದ ಸೇನೆ
2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನದಿಂದ ಬಂದವರೆನ್ನಲಾದ ಕೆಲ ಉಗ್ರಗಾಮಿಗಳು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಹಿಂದೂಗಳು ಹಾಗೂ ಗಂಡಸರನ್ನು ಗುರಿ ಮಾಡಿ ನಡೆದ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದರು. ಹೆಣ್ಮಕ್ಕಳ ಸಿಂದೂರ ಅಳಿಸಿಹಾಕಿದ್ದರು. ಅದೇ ಸಿಂದೂರ ಹೆಸರಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜೈಷೆ ಮತ್ತು ಲಷ್ಕರೆ ತೈಯ್ಯಬಾ ಸಂಘಟನೆಗಳ ತರಬೇತಿ ಶಿಬಿರ ಮತ್ತು ಅಡಗುದಾಣಗಳ ಮೇಲೆ ಭಾರತ ಮಿಲಿಟರಿ ಕಾರ್ಯಾಚರಣೆ ನಡೆಸಿದೆ. 9 ಕಡೆ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಉಗ್ರರನ್ನು ಕೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:38 am, Wed, 7 May 25