ಪೆಟ್ರೋಲ್ ಪಡೆಯಲು ಮುಗಿಬಿದ್ದ ಜನರು; ಗಾಬರಿ ಬೇಡ… ಭಾರತದಲ್ಲಿ ಇಂಧನ ಸಾಕಷ್ಟಿದೆ: ಇಂಡಿಯನ್ ಆಯಿಲ್ ಸ್ಪಷ್ಟನೆ
IOCL says fuel available at all outlets: ಪೆಟ್ರೋಲ್, ಎಲ್ಪಿಜಿ ಹಾಗೂ ಇತರ ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಜನರು ಮುಂದಾಗಿರುವುದು ವರದಿಯಾಗಿದೆ. ಅದರಲ್ಲೂ ಪಂಜಾಬ್ನ ಗಡಿಭಾಗದ ಪ್ರದೇಶಗಳಲ್ಲಿ ಪೆಟ್ರೋಲ್ ಮುಂದೆ ಜನರು ಉದ್ದುದ್ದ ಕ್ಯೂ ಇರುವ ಚಿತ್ರಗಳು ವೈರಲ್ ಆಗುತ್ತಿವೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದು, ಭಾರತದಲ್ಲಿ ಇಂಧನ ಕೊರತೆ ಇಲ್ಲ. ಎಲ್ಲಾ ಕಡೆ ದೊರಕುತ್ತದೆ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ, ಮೇ 9: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಘರ್ಷ ತೀವ್ರಗೊಳ್ಳುತ್ತಿರುವಂತೆಯೇ ದೇಶಾದ್ಯಂತ, ಅದರಲ್ಲೂ ಉತ್ತರ ಭಾರತದಲ್ಲಿ ಜನರು ಪೆಟ್ರೋಲ್ ಖರೀದಿಗೆ (petrol) ಮುಗಿಬಿದ್ದಿದ್ದಾರೆ. ಪೆಟ್ರೋಲ್ ಬಂಕ್ಗಳಲ್ಲಿ ಉದ್ದುದ್ದ ಕ್ಯೂ ಇರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆ (IOCL) ಪ್ರಕಟಣೆ ನೀಡಿದ್ದು, ದೇಶದಲ್ಲಿ ಇಂಧನ ಸಂಗ್ರಹ ಸಾಕಷ್ಟಿದೆ ಎಂದು ತಿಳಿಸಿದೆ.
‘ಇಂಡಿಯನ್ ಅಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ಸಂಗ್ರಹ ಇಟ್ಟುಕೊಂಡಿದೆ. ನಮ್ಮ ಸಪ್ಲೈ ಲೈನ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಂಧನ ಖರೀದಿಸುವ ದಾವಂತ ಬೇಡ. ನಮ್ಮ ಎಲ್ಲಾ ಬಂಕ್ಗಳಲ್ಲಿ ಇಂಧನ ಮತ್ತು ಎಲ್ಪಿಜಿ ಸಿಗುತ್ತವೆ’ ಎಂದು ಎಕ್ಸ್ ಪೋಸ್ಟ್ನಲ್ಲಿ ಐಒಸಿಎಲ್ ಹೇಳಿದೆ.
ಇದನ್ನೂ ಓದಿ: ಟರ್ಕಿ ಏರ್ಲೈನ್ಸ್ ಜೊತೆ ಪಾರ್ಟ್ನರ್ಶಿಪ್ ಮುರಿದುಕೊಂಡಿದ್ದೇವೆ: ಭಾರತದ ಗೋ ಹೋಮ್ಸ್ಟೇಸ್ ಘೋಷಣೆ
ಮೊನ್ನೆಯಿಂದ ಪಾಕಿಸ್ತಾನವು ಭಾರತದ ಗಡಿಭಾಗದ ಪ್ರದೇಶಗಳ ಮೇಲೆ ಯಥೇಚ್ಛವಾಗಿ ಕ್ಷಿಪಣಿ, ಡ್ರೋನ್, ಬಾಂಬ್, ಮದ್ದುಗುಂಡುಗಳ ದಾಳಿ ಮಾಡುತ್ತಿದೆ. ಕಾಶ್ಮೀರ, ಪಂಜಾಬ್, ರಾಜಸ್ಥಾನ ರಾಜ್ಯಗಳಲ್ಲಿ ಪಾಕ್ ಗಡಿ ಬಳಿ ಇರುವ ಪ್ರದೇಶಗಳಲ್ಲಿ ಪಾಕಿಸ್ತಾನದ ಶೆಲ್ಗಳು ಬಿದ್ದಿವೆ. ಈ ಭಾಗದ ಜನರು ಸಾಕಷ್ಟು ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸತೊಡಗಿದ್ದಾರೆ. ಅದರಲ್ಲಿ ಪೆಟ್ರೋಲ್, ಡೀಸಲ್, ಗ್ಯಾಸ್ ಇತ್ಯಾದಿಯನ್ನೂ ಖರೀದಿಸುತ್ತಿದ್ದಾರೆ.
Indian Oil Corp Ltd says, “Indian Oil has ample fuel stocks across the country and our supply lines are operating smoothly. There is no need for panic buying -fuel and LPG are readily available at all our outlets.” pic.twitter.com/hvWymHBMB1
— ANI (@ANI) May 9, 2025
ಪಂಜಾಬ್ನ ಹಲವು ಭಾಗಗಳಲ್ಲಿ ಜನರು ಪೆಟ್ರೋಲ್ ಖರೀದಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಆಯಿಲ್ ಸಂಸ್ಥೆ, ದೇಶದೆಲ್ಲೆಡೆ ಇಂಧನ ಲಭ್ಯತೆ ಇರುತ್ತದೆ ಎಂದು ಸ್ಪಷ್ಟಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದೆ.
ಇದನ್ನೂ ಓದಿ: ಯುದ್ಧದ ಹೊಡೆತದ ಮಧ್ಯೆಯೂ ಪಾಕಿಸ್ತಾನದ ಷೇರುಪೇಟೆ ಏರಿಕೆ; ಭಾರತದ ಮಾರುಕಟ್ಟೆ ಇಳಿಕೆ; ಏನು ಕಾರಣ?
ಭಾರತ ಪಾಕಿಸ್ತಾನ ಮಧ್ಯೆ ತಾರಕಕ್ಕೇರುತ್ತಿರುವ ಸಂಘರ್ಷ
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್ ಪ್ರೇರಿತ ಉಗ್ರರು 26 ಮಂದಿ ಪ್ರವಾಸಿಗರನ್ನು ಬಲಿಪಡೆದ ಘಟನೆಯು ಈಗ ಯುದ್ಧ ಸ್ಥಿತಿಗೆ ಎಡೆ ಮಾಡಿಕೊಟ್ಟಿದೆ. ಪಹಲ್ಗಾಂ ಘಟನೆಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ವಿವಿಧ ಉಗ್ರ ನೆಲೆಗಳನ್ನು ಗುರಿ ಮಾಡಿ ಕ್ಷಿಪಣಿ ದಾಳಿ ಮಾಡಿತ್ತು. ಇದಾದ ಬಳಿಕ ಪಾಕಿಸ್ತಾನವು ಭಾರತೀಯ ಗಡಿಭಾಗದಲ್ಲಿ ಜನಸಾಮಾನ್ಯರ ವಾಸಸ್ಥಳಗಳ ಮೇಲೆಯೇ ದಾಳಿ ಮಾಡುತ್ತಿದೆ. ಕ್ಷಿಪಣಿ, ಡ್ರೋನ್, ಶೆಲ್ಗಳ ಸುರಿಮಳೆಯೇ ಎರಡೂ ಕಡೆಯಿಂದ ಆಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Fri, 9 May 25