‘ಸಿಕಂದರ್’ ಚಿತ್ರದಲ್ಲಿ ಹಳೇ ಕಥೆಗೆ ಹೊಸ ಮಸಾಲೆ ಹಾಕಿದ್ರಾ ಸ್ಟಾರ್ ನಿರ್ದೇಶಕ? ಸಿಕ್ತು ಸ್ಪಷ್ಟನೆ
‘ಘಜಿನಿ’ ಸಿನಿಮಾ ಮೂಲಕ ಬಾಲಿವುಡ್ನಲ್ಲಿ ದೊಡ್ಡ ಸಕ್ಸಸ್ ಕಂಡವರು ನಿರ್ದೇಶಕ ಎ.ಆರ್. ಮುರುಗದಾಸ್. ಈಗ ಅವರು ಹಿಂದಿಯ ‘ಸಿಕಂದರ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಸಲ್ಮಾನ್ ಖಾನ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾದ ಕಥೆ ಬಗ್ಗೆ ಜನರಿಗೆ ಇದ್ದ ಒಂದು ಅನುಮಾನ ಈಗ ಪರಿಹಾರ ಆಗಿದೆ.

ಕಾಲಿವುಡ್ ನಿರ್ದೇಶಕ ಎ.ಆರ್. ಮುರುಗದಾಸ್ ಅವರಿಗೆ ಬಾಲಿವುಡ್ನಲ್ಲೂ ಬೇಡಿಕೆ ಇದೆ. ಈಗ ಅವರು ಸಲ್ಮಾನ್ ಖಾನ್ (Salman Khan) ಜೊತೆ ‘ಸಿಕಂದರ್’ (Sikandar) ಸಿನಿಮಾ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಟೀಸರ್ ಬಿಡುಗಡೆ ಆಯಿತು. ಆ ಟೀಸರ್ ನೋಡಿದ ಬಳಿಕ ಅನೇಕರು ಒಂದು ಅನುಮಾನ ವ್ಯಕ್ತಪಡಿಸಿದರು. ‘ಸಿಕಂದರ್’ ಸಿನಿಮಾದಲ್ಲಿ ಎ.ಆರ್. ಮುರುಗದಾಸ್ ಅವರು ಯಾವುದೋ ಹಳೇ ಕಥೆಯನ್ನೇ ತೋರಿಸಲಿದ್ದಾರೆ ಎಂಬ ಶಂಕೆ ಮೂಡಿತು. ಆದರೆ ಆ ಅನುಮಾನಕ್ಕೆ ಈಗ ಸ್ವತಃ ಎ.ಆರ್. ಮುರುಗದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
2018ರಲ್ಲಿ ಎ.ಆರ್. ಮುರುಗದಾಸ್ ಅವರು ‘ಸರ್ಕಾರ್’ ಸಿನಿಮಾ ಮಾಡಿದ್ದರು. ಆ ಸಿನಿಮಾದಲ್ಲಿ ದಳಪತಿ ವಿಜಯ್ ನಟಿಸಿದ್ದರು. ಬಾಕ್ಸ್ ಆಫೀಸ್ನಲ್ಲಿ ‘ಸರ್ಕಾರ್’ ಚಿತ್ರಕ್ಕೆ ಸಾಧಾರಣ ಗಳಿಕೆ ಆಗಿತ್ತು. ಈಗ ಅದೇ ಸಿನಿಮಾವನ್ನು ಎ.ಆರ್. ಮುರುಗದಾಸ್ ಅವರು ‘ಸಿಕಂದರ್’ ಹೆಸರಿನಲ್ಲಿ ರಿಮೇಕ್ ಮಾಡಿರಬಹುದು ಎಂಬುದು ಕೆಲವರ ಅನುಮಾನ ಆಗಿತ್ತು. ಆದರೆ ಅದನ್ನು ಮುರುಗದಾಸ್ ಅಲ್ಲಗಳೆದಿದ್ದಾರೆ.
ಒಂದುವೇಳೆ ಎ.ಆರ್. ಮುರುಗದಾಸ್ ಅವರು ‘ಸರ್ಕಾರ್’ ಸಿನಿಮಾದ ಕಥೆಗೆ ಹೊಸ ಮಸಾಲೆ ಸೇರಿಸಿ ‘ಸಿಕಂದರ್’ ಸಿನಿಮಾ ಮಾಡಿದ್ದರೆ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಖಂಡಿತಾ ನಿರಾಸೆ ಆಗುತ್ತದೆ. ಆದರೆ ಆ ರೀತಿ ಏನಿಲ್ಲ ಎಂದು ಮುರುಗದಾಸ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸಲುವಾಗಿಯೇ ತಾವು ಹೊಸ ಕಥೆ ಬರೆದಿರುವುದಾಗಿ ಮುರುಗದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ‘ಸಿಕಂದರ್’ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಪಡೆದ ಸಂಭಾವನೆ ಇಷ್ಟೊಂದಾ?
ಈದ್ ಹಬ್ಬದ ಪ್ರಯುಕ್ತ ಮಾರ್ಚ್ ಕೊನೇ ವಾರದಲ್ಲಿ ‘ಸಿಕಂದರ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈಗಾಗಲೇ ‘ಛಾವ’ ಸಿನಿಮಾ ಮೂಲಕ ಭಾರಿ ಸಕ್ಸಸ್ ಕಂಡಿರುವ ರಶ್ಮಿಕಾ ಅವರು ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಸಾಜಿದ್ ನಾಡಿಯದ್ವಾಲ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.