ಅಗ್ನಿ ಅವಘಡದ ಬಳಿಕ ಪವನ್ ಕಲ್ಯಾಣ್ ಮಗನ ಸ್ಥಿತಿ ಹೇಗಿದೆ? ಮಾಹಿತಿ ನೀಡಿದ ಚಿರಂಜೀವಿ
ಸುಟ್ಟಗಾಯಗಳಿಂದ ಬಳಲುತ್ತಿರುವ ಮಾರ್ಕ್ ಶಂಕರ್ ಆರೋಗ್ಯದ ಬಗ್ಗೆ ಚಿರಂಜೀವಿ ಅವರು ಅಪ್ಡೇಟ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮಾರ್ಕ್ ಶಂಕರ್ನನ್ನು ಡಿಸ್ಚಾರ್ಜ ಮಾಡಲಾಗಿದೆ. ಪವನ್ ಕಲ್ಯಾಣ್ ಪರವಾಗಿ ಅಭಿಮಾನಿಗಳಿಗೆ ಚಿರಂಜೀವಿ ಅವರು ಧನ್ಯವಾದ ತಿಳಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ..

ಟಾಲಿವುಡ್ ನಟ, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಕುಟುಂಬದಲ್ಲಿ ಸದ್ಯಕ್ಕೆ ಬೇಸರದ ವಾತಾವರಣ ಇದೆ. ಪವನ್ ಕಲ್ಯಾಣ್ ಮಗ ಮಾರ್ಕ್ ಶಂಕರ್ (Mark Shankar) ಸುಟ್ಟ ಗಾಯಗಳಿಂದ ಬಳಲುತ್ತಿದ್ದಾನೆ. 8 ವರ್ಷದ ಆತನ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಚಿಂತೆ ಆಗಿದೆ. ಶಾಲೆಯಲ್ಲಿ ಇದ್ದಾಗ ಅಗ್ನಿ ಅವಘಡ ಸಂಭವಿಸಿತ್ತು. ಆತನ ಆರೋಗ್ಯ ಬಗ್ಗೆ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದರು. ಈಗ ಪವನ್ ಕಲ್ಯಾಣ್ ಅವರ ಸಹೋದರ, ಹಿರಿಯ ನಟ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಚಿರಂಜೀವಿ ಅವರು ಹೆಲ್ತ್ ಅಪ್ಡೇಟ್ ಕೊಟ್ಟಿದ್ದಾರೆ.
ಇಷ್ಟು ದಿನ ಮಾರ್ಕ್ ಶಂಕರ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಡಿಸ್ಚಾರ್ಜ್ ಮಾಡಲಾಗಿದೆ. ‘ನಮ್ಮ ಮಗು ಮಾರ್ಕ್ ಶಂಕರ್ ಮನೆಗೆ ಬಂದಿದ್ದಾನೆ. ಆದರೆ ಇನ್ನೂ ಗುಣಮುಖ ಆಗುವುದು ಬಾಕಿ ಇದೆ. ನಮ್ಮ ಮನೆ ದೇವರು ಆಂಜನೇಯ ಸ್ವಾಮಿ ಕೃಪೆಯಿಂದ ಆತ ಬೇಗ ಆರೋಗ್ಯವಂತನಾಗುತ್ತಾನೆ. ನಾಳೆ ಹನುಮಾನ್ ಜಯಂತಿ. ದೇವರು ನಮ್ಮ ಜೊತೆ ಇದ್ದಾನೆ. ದೊಡ್ಡ ಅಪಾಯ ಮತ್ತು ದುರಂತದಿಂದ ಮಗುವನ್ನು ದೇವರು ಕಾಪಾಡಿದ್ದಾನೆ’ ಎಂದು ಚಿರಂಜೀವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಗ್ನಿ ಅವಘಡ ನಡೆದ ಬಳಿಕ ಬೇರೆ ಬೇರೆ ಹಳ್ಳಿ ಮತ್ತು ಪ್ರದೇಶದ ಜನರು ಒಟ್ಟಾಗಿ ನಮ್ಮ ಕುಟುಂಬಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಮಾರ್ಕ್ ಶಂಕರ್ ಚೇತರಿಸಿಕೊಳ್ಳಲಿ ಎಂದು ಆಶೀರ್ವಾದ ಮಾಡಿದರು. ನನ್ನ ಸಹೋದರ ಪವನ್ ಕಲ್ಯಾಣ್ ಪರವಾಗಿ ಹಾಗೂ ನಮ್ಮ ಕುಟುಂಬದ ಪರವಾಗಿ ನಾನು ಹೃತ್ಪೂರ್ವಕವಾಗಿ ನಿಮ್ಮಲ್ಲರ ಬೆಂಬಲಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.
మా బిడ్డ మార్క్ శంకర్ ఇంటికొచ్చేసాడు. అయితే ఇంకా కోలుకోవాలి. మా కులదైవమైన ఆంజనేయ స్వామి దయతో, కృపతో త్వరలోనే పూర్తి ఆరోగ్యంతో, మళ్ళీ మామూలుగా ఎప్పటిలానే వుంటాడు.
రేపు హనుమత్ జయంతి, ఆ స్వామి ఓ పెద్ద ప్రమాదం నుంచి, ఓ విషాదం నుంచి ఆ పసి బిడ్డని కాపాడి మాకు అండగా… pic.twitter.com/nEcWQEj92v
— Chiranjeevi Konidela (@KChiruTweets) April 10, 2025
ಏಪ್ರಿಲ್ 8ರಂದು ಮಾರ್ಕ್ ಶಂಕರ್ ಓದುತ್ತಿದ್ದ ಸಿಂಗಾಪುರದ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಮಾರ್ಕ್ ಶಂಕರ್ ಸೇರಿದಂತೆ ಅನೇಕ ಮಕ್ಕಳು ಹಾಗು ಇತರರಿಗೆ ಸುಟ್ಟ ಗಾಯಗಳು ಆದವು. ಈ ಘಟನೆಯನ್ನು ಪವನ್ ಕಲ್ಯಾಣ್ ಅವರು ಖಚಿತಪಡಿಸಿದರು. ‘ನನ್ನ ಕಿರಿಯ ಮಗನಿಗೆ ಸುಟ್ಟ ಗಾಯಗಳಾಗಿವೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಧಾನಕ್ಕೆ ಆತ ಚೇತರಿಸಿಕೊಳ್ಳುತ್ತಿದ್ದಾನೆ’ ಎಂದು ಪವನ್ ಕಲ್ಯಾಣ್ ಅವರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಸಮಸ್ಯೆ ಗಂಭೀರ: ಮಗನ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಮಾತು
ಈ ಘಟನೆ ನಡೆದಾಗ ಪವನ್ ಕಲ್ಯಾಣ್ ಅವರು ರಾಜ್ಯ ಪ್ರವಾಸದಲ್ಲಿ ಇದ್ದರು. ವಿಷಯ ತಿಳಿದ ಕೂಡಲೇ ಪವನ್ ಕಲ್ಯಾಣ್, ಚಿರಂಜೀವಿ, ಸುರೇಕಾ ಅವರು ಸಿಂಗಾಪುರಕ್ಕೆ ತೆರಳಿದರು. ಮಾರ್ಕ್ ಶಂಕರ್ ಡಿಸ್ಚಾರ್ಜ್ ಆಗಿ ಚೇತರಿಸಿಕೊಳ್ಳುತ್ತಿರುವ ವಿಷಯ ತಿಳಿದು ಫ್ಯಾನ್ಸ್ ನಿಟ್ಟುಸಿರುಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.