ವಿಜಯ್ ಜೊತೆ ಹೋಲಿಕೆ, ‘ನೀವು ಮಾಡಿದ್ದೇನು?’ ಎಂದ ಪವನ್ ಕಲ್ಯಾಣ್
Pawan Kalyan about CM Vijay: ತಮಿಳುನಾಡಿನಲ್ಲಿ ವಿಜಯ್ ಅವರಿಗೆ ಇರುವಂತೆಯೇ ನಟ ಪವನ್ ಕಲ್ಯಾಣ್ ಅವರಿಗೂ ಆಂಧ್ರ ಮತ್ತು ತೆಲಂಗಾಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ವಿಜಯ್ ಸಿಎಂ ಆದ ಬಳಿಕ ಪವನ್ ಕಲ್ಯಾಣ್ ಅವರೂ ಸಿಎಂ ಆಗಬೇಕು, ಆಗಬಹುದು ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಇದೀಗ ಖುದ್ದು ಪವನ್ ಕಲ್ಯಾಣ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ.

ತಮಿಳು ಚಿತ್ರರಂಗದ ಸೂಪರ್ಸ್ಟಾರ್ ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಿದ್ದಾರೆ. ವಿಜಯ್ ಅವರಿಗಿದ್ದ ಭಾರಿ ಜನಪ್ರಿಯತೆ ಮತಗಳಾಗಿ ಪರಿವರ್ತನೆ ಆಗಿದೆ. ತಮಿಳುನಾಡಿನಲ್ಲಿ ವಿಜಯ್ ಅವರಿಗೆ ಇರುವಂತೆಯೇ ನಟ ಪವನ್ ಕಲ್ಯಾಣ್ ಅವರಿಗೂ ಆಂಧ್ರ ಮತ್ತು ತೆಲಂಗಾಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ವಿಜಯ್ ಸಿಎಂ ಆದ ಬಳಿಕ ಪವನ್ ಕಲ್ಯಾಣ್ ಅವರೂ ಸಿಎಂ ಆಗಬೇಕು, ಆಗಬಹುದು ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಇದೀಗ ಖುದ್ದು ಪವನ್ ಕಲ್ಯಾಣ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ.
ಮಂಗಳಗಿರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ವಿಜಯ್, ತಮಿಳುನಾಡಿನ ಸಿಎಂ ಆದ ಬಗ್ಗೆ ಹಾಗೂ ಅದಾದ ಬಳಿಕ ತಮ್ಮ ಮೇಲೆ ಬರುತ್ತಿರುವ ಒತ್ತಡದ ಬಗ್ಗೆಯೂ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಅವರ ಸಹೋದರ ಚಿರಂಜೀವಿ ಅವರು ದಳಪತಿ ವಿಜಯ್ ಅವರೊಟ್ಟಿಗೆ ಇತ್ತೀಚೆಗಷ್ಟೆ ದೂರವಾಣಿ ಮೂಲಕ ಮಾತನಾಡಿದ್ದರು. ಅದರ ಬೆನ್ನಲ್ಲೆ ಇದೀಗ ಪವನ್ ಕಲ್ಯಾಣ್ ಅವರು ವಿಜಯ್ ಬಗ್ಗೆ ಮಾತನಾಡಿದ್ದಾರೆ.
ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವನ್, ವಿಜಯ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, “ತಮಿಳುನಾಡು ಚುನಾವಣೆ ನಡೆದು ಅವರು (ವಿಜಯ್) ಮುಖ್ಯಮಂತ್ರಿಯಾದಾಗಿನಿಂದ ಜನರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದರು. ಮುಂದುವರಿದು, ‘ನಮ್ಮ ನೆರೆಯ ರಾಜ್ಯದಲ್ಲಿ ನಟರೊಬ್ಬರು ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿಯಾಗಿದ್ದಾರೆ. ನಾನು ಕೂಡ ಆಂಧ್ರಪ್ರದೇಶದಲ್ಲಿ ಇದೇ ರೀತಿ ಮಾಡಬೇಕಿತ್ತು ಎಂದು ಅನೇಕರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ’ ಎಂದು ಹೇಳಿದರು.
ಇದನ್ನೂ ಓದಿ:ಪವನ್ ಕಲ್ಯಾಣ್ ಜನಸೇನಾ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಪ್ರಾದೇಶಿಕ ಪಕ್ಷದ ಮಾನ್ಯತೆ
ತೆಲುಗಿನ ಗಾದೆಯೊಂದನ್ನು ಹೇಳಿದ ಪವನ್ ಕಲ್ಯಾಣ್ ‘ಊರವರ ಮದುವೆಗೆ, ಇನ್ನಿಲ್ಲದ ಸಡಗರ’ ಎನ್ನುತ್ತಾರಲ್ಲ ಹಾಗೆ. ಇದು ಸಣ್ಣ ಮಕ್ಕಳು ತಮ್ಮ ಕುಟುಂಬದ ಮದುವೆ ಅಲ್ಲದಿದ್ದರೂ ಸುತ್ತಲೂ ಓಡಾಡುವ ಸಡಗರದಂತಿದೆ. ಆಂಧ್ರಪ್ರದೇಶದ ಪರಿಸ್ಥಿತಿಯೇ ಬೇರೆ. ಅವರು ಹೇಳಿದಂತೆ ನಾನು 2019 ರ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಆಗ ಅವರು (ಜನ) ಏನು ಮಾಡಿದರು? ಮಂತ್ರಿಗಳು ಕೂಡ ನನ್ನ ಜೊತೆ ನಿಲ್ಲಲಿಲ್ಲ. ಆದ್ದರಿಂದ ದಯವಿಟ್ಟು ಹೋಲಿಕೆ ಮಾಡಬೇಡಿ’ ಎಂದು ವಿನಂತಿಸಿದರು.
ಪವನ್ ಕಲ್ಯಾಣ್ ಅವರು 2014 ರಲ್ಲಿ ‘ಜನಸೇನಾ’ ಪಕ್ಷವನ್ನು ಸ್ಥಾಪಿಸಿದರು. ಬಳಿಕ 2019 ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಸ್ವತಃ ಪವನ್ ಕಲ್ಯಾಣ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಎರಡೂ ಕಡೆ ಸೋತರು. ಅವರ ಪಕ್ಷಕ್ಕೆ ತೀವ್ರ ನಿರಾಸೆ ಆಗಿತ್ತು. ಆದರೆ 6% ಮತಗಳನ್ನು ಅವರ ಪಕ್ಷ ತೆಗೆದುಕೊಂಡಿತು. ಆದರೆ 2024 ರಲ್ಲಿ ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿ ಖುದ್ದು ಪೀಠಾಪುರಂ ಕ್ಷೇತ್ರದಿಂದ ಗೆದ್ದಿದ್ದು ಮಾತ್ರವಲ್ಲದೆ ಅವರ ಪಕ್ಷದ ಇನ್ನೂ ಹಲವು ಅಭ್ಯರ್ಥಿಗಳು ಗೆದ್ದು ಶಾಸಕರಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:55 am, Sat, 16 May 26





