ಮಾಧ್ಯಮಗಳ ಎದುರು ನಟ ಪ್ರಥಮ್ ಈ ರೀತಿ ಕಾಣಿಸಿಕೊಂಡಿದ್ದು ಯಾಕೆ?
‘ನೋ ಕೊಕೇನ್’ ಸಿನಿಮಾದಲ್ಲಿ ಪ್ರಥಮ್ ಅವರು ನಟಿಸುತ್ತಿದ್ದಾರೆ. ಈವರೆಗೂ 25 ದಿನಗಳ ಶೂಟಿಂಗ್ ಮಾಡಲಾಗಿದೆ. ಆರನಾ ಮೂಳೇರ್, ಮಿಮಿಕ್ರಿ ಗೋಪಿ, ರವಿಕಾಳೆ, ಶೋಭರಾಜ್, ಜಗದೀಶ್ ಕೊಪ್ಪ, ಸಿದ್ಲಿಂಗು ಶ್ರೀಧರ್ ಮುಂತಾದವರು ನಟಿಸುತ್ತಿದ್ದಾರೆ. ಡಿ.ಆರ್. ಕಲ್ಕಿ ಅಭಿಷೇಕ್ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಾಮ್ರಾಟ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ನಟ ಪ್ರಥಮ್ (Actor Pratham) ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ಮಾಧ್ಯಮಗಳ ಎದುರು ಬಂದರು. ಆಗ ಅವರ ಮೈಯೆಲ್ಲ ರಕ್ತಸಿಕ್ತವಾಗಿತ್ತು. ಅದಕ್ಕೆ ಕಾರಣ ಇದೆ. ಅಂದಹಾಗೆ, ಪ್ರಥಮ್ ಅವರು ಈ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು ಶೂಟಿಂಗ್ ನಡುವೆ! ಹೌದು, ಇದು ‘ನೋ ಕೊಕೇನ್’ (No Cocaine) ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಪ್ರಥಮ್ ಅವರು ಕಾಣಿಸಿಕೊಂಡ ರೀತಿ. ಬಳಿಕ ಚಿತ್ರತಂಡದವರು ಸಿನಿಮಾದ ದೃಶ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಿನಿಮಾಗೆ ಹಿರಿಯ ಸಾಹಸ ಸಂಯೋಜಕ ಕೌರವ ವೆಂಕಟೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಕೌರವ ವೆಂಕಟೇಶ್ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದು. ಬನ್ನೇರುಘಟ್ಟ ರಸ್ತೆಯಲ್ಲಿರುವ ವೈಟ್ ಹೌಸ್ ಬಿಲ್ಡಿಂಗ್ನಲ್ಲಿ ಸಿನಿಮಾದ ಶೂಟಿಂಗ್ ವೇಳೆ ‘ನೋ ಕೊಕೇನ್’ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು. ‘ದಿ ಡೆಫಿನಿಷನ್ ಆಫ್ ಪೇಟ್ರಿಯಾಟಿಸಮ್’ ಎಂಬ ಅಡಿಬರಹ ಈ ಚಿತ್ರಕ್ಕೆ. ಅಯೋಧ್ಯರಾಮ್ ಪ್ರೊಡಕ್ಷನ್ಸ್ ಮೂಲಕ ಪುನೀತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸುದ್ದಿಗೋಷ್ಠಿ ನಡೆದ ದಿನ ‘ನೋ ಕೊಕೇನ್’ ಚಿತ್ರದ ಶೂಟಿಂಗ್ನಲ್ಲಿ ಶೋಭರಾಜ್, ಜಗದೀಶ್ ಕೊಪ್ಪ, ಸಿದ್ಲಿಂಗು ಶ್ರೀಧರ್, ತೆಲುಗು ಚಿತ್ರರಂಗದ ಖ್ಯಾತ ನಟ ಸೂರ್ಯ ಭಗವಾನ್ ದಾಸ್, ಪ್ರಥಮ್ ಮುಂತಾದವರು ಭಾಗಿಯಾಗಿದ್ದರು. ಮೈ ತುಂಬಾ ರಕ್ತದ ಕಲೆ ಅಂಟಿಸಿಕೊಂಡ ಗೆಟಪ್ನಲ್ಲಿ ಪ್ರಥಮ್ ಅವರು ಕಾಣಿಸಿಕೊಂಡರು. ‘ಇಂದು ನಡೆಯತ್ತಿರುವ ಸನ್ನಿವೇಶವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಿಕ್ಕಾಟದ ಪ್ರಸಂಗ’ ಎಂದು ಹೇಳಿದರು.

No Cocaine Movie Team
‘ಟಾಲಿವುಡ್ನ ಸೂರ್ಯಭಗವಾನ್ ದಾಸ್ ಅವರು ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಇಷ್ಟು ವರ್ಷದ ಅನುಭವಗಳನ್ನು ಸೇರಿಸಿ ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಪ್ರಥಮ್. ಈ ಸಿನಿಮಾದಲ್ಲಿ ಕೇಂದ್ರ ರಕ್ಷಣಾ ಸಚಿವರಾಗಿ ಸಿದ್ಲಿಂಗು ಶ್ರೀಧರ್ ನಟಿಸಿದ್ದಾರೆ. ‘ಒಬ್ಬ ಪೊಲೀಸ್ ಆಯುಕ್ತ ಎಷ್ಟು ಒಳ್ಳೆಯವನು ಎಂಬುದನ್ನು ಇದರಲ್ಲಿ ತೋರಿಸಲಾಗಿದೆ. ಪ್ರಥಮ್ ಇದ್ದರೆ ಶೂಟಿಂಗ್ ಸುಲಭ’ ಎಂದು ಶೋಭರಾಜ್ ಹೇಳಿದರು.
ಇದನ್ನೂ ಓದಿ: ‘ನನ್ನ ಹೇರ್ ಕಟಿಂಗ್ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಆ ದಿನದ ಶೂಟಿಂಗ್ ದೃಶ್ಯದ ಬಗ್ಗೆ ನಿರ್ದೇಶಕರು ವಿವರ ನೀಡಿದರು. ‘ಗೃಹ ಸಚಿವ ಹಾಗೂ ಪೊಲೀಸ್ ಆಯುಕ್ತರೊಂದಿಗೆ ಕೊಕೇನ್ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿರುವಾಗ ನಾಯಕನ ಆಗಮನವಾಗುತ್ತದೆ. ಸೆಕ್ಯೂರಿಟಿಯವರನ್ನು ಭೇದಿಸಿ ಆತ ಬಂದಿದ್ದರಿಂದ ಅವನ ಮೇಲೆ ಅನುಮಾನ ಬಂದು ಗುಂಡು ಹಾರಿಸಲಾಗುತ್ತದೆ. ಇದು ಇಂಟರ್ವಲ್ ದೃಶ್ಯ’ ಎಂದು ನಿರ್ದೇಶಕರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








