ರಜತ್ ನನ್ನ ತಮ್ಮ, ನಾನು ಎಂದಿಗೂ ಬಿಟ್ಟುಕೊಡಲ್ಲ: ವಿನಯ್ ಗೌಡ ನೇರ ಮಾತು
ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮತ್ತು ರಜತ್ ಅವರು ರೀಲ್ಸ್ ಮಾಡಿ ಕಾನೂನಿನ ಸಂಕಷ್ಟಕ್ಕೆ ಸಿಲುಕಿಕೊಂಡರು. ಈ ಘಟನೆ ಬಳಿಕ ರಜತ್ ಕಿಶನ್ ಮತ್ತು ವಿನಯ್ ಗೌಡ ನಡುವೆ ಮನಸ್ತಾಪ ಮೂಡಿದೆ ಎಂಬ ಮಾತು ಕೇಳಿಬಂತು. ಆದರೆ ಈ ಬಗ್ಗೆ ಈಗ ವಿನಯ್ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಚ್ಚು ಹಿಡಿದ ರೀಲ್ಸ್ ಮಾಡಿದ ರಜತ್ ಕಿಶನ್ ಅವರಿಗೆ ಈ ಮೊದಲು ಜಾಮೀನು ಸಿಕ್ಕಿತ್ತು. ಆದರೆ ಕೆಲವು ಷರತ್ತುಗಳನ್ನು ಪಾಲಿಸದ ಕಾರಣ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇದೇ ಪ್ರಕರಣದಲ್ಲಿ ಸಿಲುಕಿರುವ ವಿನಯ್ ಗೌಡ ಅವರು ದಂಡ ಕಟ್ಟಿದ್ದಾರೆ. ಜೈಲು ವಾಸದಿಂದ ಸದ್ಯಕ್ಕೆ ಅವರು ಬಚಾವ್ ಆಗಿದ್ದಾರೆ. ಈ ಬಗ್ಗೆ ವಿನಯ್ ಗೌಡ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ರಜತ್ ಬಗ್ಗೆಯೂ ಅವರು ಮಾತನಾಡಿದ್ದಾರೆ. ತಮ್ಮ ಮತ್ತು ರಜತ್ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ವಿನಯ್ ಗೌಡ ಹೇಳಿದ್ದಾರೆ.
‘ಯಾರೇ ಆದರೂ ಕೂಡ ಜೈಲಿಗೆ ಹೋದರೆ ನೋವು ಆಗುತ್ತದೆ. ನನ್ನ ಪ್ರಕ್ರಿಯೆ ಮುಗಿಸಿಕೊಂಡು ಹೋಗುತ್ತಿದ್ದೇನೆ. ರಜತ್ ನನ್ನ ಸ್ನೇಹಿತ, ಸಹೋದರ. ನಾನು ಅಣ್ಣನ ಥರ ಎಂದು ಅವನೇ ಹೇಳಿದ್ದಾನೆ. ಹಾಗಾಗಿ ನಾನು ನನ್ನ ತಮ್ಮನನ್ನು ಹೇಗೆ ಬಿಟ್ಟುಕೊಡಲಿ? ರೀಲ್ಸ್ ವಿಷಯವೇ ಬೇರೆ, ನಮ್ಮ ಸಂಬಂಧವೇ ಬೇರೆ. ಅವನು ಏನೇ ಆಗಿರಲಿ ಅವನು ನನ್ನ ತಮ್ಮನೇ’ ಎಂದು ವಿನಯ್ ಗೌಡ ಅವರು ಹೇಳಿದ್ದಾರೆ.
‘ಕೋಟಿ ಕೊಟ್ಟರೂ ರಜತ್ ಜೊತೆ ರೀಲ್ಸ್ ಮಾಡಲ್ಲ ಎಂಬುದಾಗಿ ನಾನು ಹೇಳಿದ್ದೇನೆ ಎಂಬುದು ತಪ್ಪು ಹೇಳಿಕೆ. ತಮಾಷೆಗೆ ಕೇಳಿದಾಗ ಹಾಗೆ ಹೇಳಿರಬಹುದು. ಅದು ಗಂಭೀರವಾದ ಮಾತಲ್ಲ. ನನಗೆ ಏನು ಅನಿಸಿದೆಯೋ ಅದನ್ನು ನಾನು ಮಾಡಿದ್ದೇನೆ. ರಜತ್ ಬಗ್ಗೆ ನನಗೆ ಬೇಜಾರು ಇಲ್ಲ. ಕೇವಲ ಕೋಪ ಇದೆ. ಅದು ಸರಿ ಹೋಗುತ್ತದೆ. ಸ್ನೇಹದಲ್ಲಿ ಇದೆಲ್ಲ ಸಹಜ’ ಎಂದಿದ್ದಾರೆ ವಿನಯ್ ಗೌಡ.
ಇದನ್ನೂ ಓದಿ: ಮಚ್ಚು ಹಿಡಿದು ರೀಲ್ಸ್ ಪ್ರಕರಣ, ರಜತ್ ಮತ್ತೆ ಜೈಲಿಗೆ
ಸದ್ಯಕ್ಕೆ ವಿನಯ್ ಗೌಡ ಅವರು ಕಿಚ್ಚ ಸುದೀಪ್ ಅಭಿನಯದ ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಆರಂಭವಾದ ದಿನವೇ ವಿನಯ್ ಗೌಡ ಅವರು ಕೋರ್ಟ್ಗೆ ಬರುವಂತಾಗಿದೆ. ಆ ಕುರಿತು ಅವರು ಮಾತನಾಡಿದ್ದಾರೆ. ‘ಹಿಂದೆ ಗುರು, ಮುಂದೆ ಗುರಿ ಇದ್ದಾಗ ಯಾವುದೇ ವಿಘ್ನ ಎದುರಾಗಲ್ಲ. ಇಂದು ಮೊದಲ ದಿನದ ಶೂಟಿಂಗ್. ಅದನ್ನು ಬಿಟ್ಟು ಬೇರೆ ಏನೂ ನನ್ನ ತಲೆಯಲ್ಲಿ ಇಲ್ಲ. ಬಿಲ್ಲ ರಂಗ ಭಾಷಾ ಸಿನಿಮಾವನ್ನು ಯಾರೂ ತಡೆಯೋಕೆ ಆಗಲ್ಲ’ ಎಂದು ವಿನಯ್ ಗೌಡ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.