ಕನ್ನಡಿಗರ ಕೆಣಕಿದ ಸೋನು ನಿಗಮ್ ಸ್ಯಾಂಡಲ್ವುಡ್ನಿಂದ ಬ್ಯಾನ್, ಒಂದೇ ದಿನ ಡಬಲ್ ಶಾಕ್
ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆಯಿಂದ ಕನ್ನಡ ಚಿತ್ರರಂಗ ಆಕ್ರೋಶಗೊಂಡಿದೆ. ಅವರ ವಿರುದ್ಧ ಪೊಲೀಸ್ ನೋಟಿಸ್ ಜಾರಿಯಾಗಿದೆ ಮತ್ತು ಚಿತ್ರರಂಗ ಅವರನ್ನು ಬಹಿಷ್ಕರಿಸಿದೆ. ಇದು ಅವರ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಕ್ಷಮೆಯಾಚನೆ ಮಾಡದಿರುವುದು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಕನ್ನಡಿಗರ ಬಗ್ಗೆ ಸೋನು ನಿಗಮ್ (Sonu Nigam) ಕೊಟ್ಟ ಹೇಳಿಕೆ ಅವರಿಗೆ ತುಂಬಾನೇ ದುಬಾರಿ ಆಗಿದೆ. ಒಂದು ಕಡೆ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವಾಗಲೇ ಸೋನು ನಿಗಮ್ಗೆ ಡಬಲ್ ಶಾಕ್ ಸಿಕ್ಕಿದೆ. ಒಂದು ಕಡೆ ಅವರಿಗೆ ನೋಟಿಸ್ ಜಾರಿ ಆಗಿದೆ. ಮತ್ತೊಂದು ಕಡೆ ಅವರಿಂದ ಕನ್ನಡ ಹಾಡುಗಳನ್ನು ಹಾಡಿಸದಿರುವ ನಿರ್ಧಾರ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆ ಸೋನು ನಿಗಮ್ ವೃತ್ತಿ ಜೀವನದ ಮೇಲೆ ನೇರ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇದೆ.
ಸೋನು ನಿಗಮ್ಗೆ ಕನ್ನಡದ ಮೇಲೆ ವಿಶೇಷ ಪ್ರೀತಿ-ಗೌರವ ಇದ್ದಿದ್ದು ನಿಜ. ಆದರೆ, ಅವರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ಕನ್ನಡ ಕನ್ನಡ.. ಹೀಗೆ ಹೇಳಿದ್ದರಿಂದಲೇ ಪಹಲ್ಗಾಮ್ ದಾಳಿ ಆಯಿತು’ ಎನ್ನುವ ಮೂಲಕ ಸೋನು ನಿಗಮ್ ಸುಖಾ ಸುಮ್ಮನೆ ತಮ್ಮ ಮೇಲೆ ವಿವಾದವನ್ನು ಎಳೆದುಕೊಂಡರು. ಆ ಬಳಿಕ ಅವರು ಹೇಳಿಕೆಗೆ ಸ್ಪಷ್ಟನೆ ಕೊಟ್ಟರೇ ಹೊರತು ಕ್ಷಮೆ ಕೇಳಿಲ್ಲ. ಈಗ ಇದನ್ನು ಗಂಭೀರವಾಗಿ ಪರಿಗಣಿಸಿರೋ ಕರ್ನಾಟಕ ಫಿಲ್ಮ್ ಚೇಂಬರ್ ಅವರಿಗೆ ಅವಕಾಶ ನೀಡದಿರಲು ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ಮಾತನಾಡಿರೋ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ‘ಘಟನೆ ಬಳಿಕ ಈವರೆಗೂ ಸೋನು ನಿಗಮ್ ಕನ್ನಡಿಗರ ಬಳಿ ಕ್ಷಮೆ ಕೇಳಿಲ್ಲ. ಇನ್ನು ಮುಂದೆ ಸೋನು ನಿಗಮ್ ಅವರಿಂದ ಚಿತ್ರರಂಗದವರು ಮ್ಯೂಸಿಕಲ್ ನೈಟ್ಸ್ ಮಾಡುವುದಿಲ್ಲ. ಅವರ ಬಳಿ ಹಾಡನ್ನು ಹಾಡಿಸೋದಿಲ್ಲ. ಈ ಕ್ಷಣದಿಂದಲೇ ಸೋನುಗೆ ಅಸಹಕಾರ ತೋರಬೇಕೆಂದು ನಿರ್ಧಾರ ಮಾಡಲಾಗಿದೆ’ ಎಂದಿದ್ದಾರೆ.
ಸೋನು ನಿಗಮ್ ಅವರು ಸಂಗೀತವನ್ನೇ ನಂಬಿಕೊಂಡು ಇದ್ದವರು. ಮ್ಯೂಸಿಕಲ್ ನೈಟ್ಸ್ ಹಾಗೂ ಹಾಡು ಹೇಳುವುದರಿಂದ ಅವರಿಗೆ ಗಳಿಕೆ ಆಗುತ್ತಿದೆ. ಆದರೆ, ಈಗ ಅವರು ಕನ್ನಡ ಸಿನಿಮಾಗಳಿಗೆ ಹಾಡನ್ನು ಹೇಳಲು ಸಾಧ್ಯವಾಗದೇ ಇರೋದು ಅವರಿಗೆ ಒಂದು ರೀತಿಯಲ್ಲಿ ನಷ್ಟವೇ. ಈ ನಿರ್ಧಾರದ ಬಗ್ಗೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ: ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್ಐಆರ್
ಗಾಯಕನಿಗೆ ನೋಟಿಸ್
ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಆವಲಹಳ್ಳಿ ಠಾಣೆ ಪೊಲೀಸರಿಂದ ಸೋನು ನಿಗಮ್ಗೆ ನೋಟಿಸ್ ನೀಡಲಾಗಿದೆ. ಈ ಮೇಲ್ ಹಾಗೂ ಪೋಸ್ಟ್ ಮೂಲಕ ಸೋನುಗೆ ನೋಟಿಸ್ ಹೋಗಿದೆ. ನೋಟಿಸ್ ತಲುಪಿದ 1 ವಾರದೊಳಗಡೆ ವಿವರಣೆ ನೀಡಲು ಸೂಚನೆ ನೀಡಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:51 pm, Mon, 5 May 25