ಬಿಗ್ ಬಾಸ್ನಲ್ಲಿ ಹೆಚ್ಚು ಸದ್ದು ಮಾಡಲೇ ಇಲ್ಲ ಬಳೆ ವಿವಾದ; ಮಹಿಳಾ ಸ್ಪರ್ಧಿಗಳಿಗೆ ತರಾಟೆ ಫಿಕ್ಸ್?
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ವಿನಯ್ ಗೌಡ ಬಳೆ ಕುರಿತು ನೀಡಿದ್ದ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿತ್ತು. ಸಂಗೀತಾ ಶೃಂಗೇರಿ ತೀವ್ರವಾಗಿ ವಿರೋಧಿಸಿ, ಬಳೆ ಶಕ್ತಿಯ ಸಂಕೇತ ಎಂದಿದ್ದರು. ಈಗ ಮತ್ತೆ ಬಳೆ ವಿಚಾರ ಬಂದಿದ್ದರೂ ಮಹಿಳಾ ಸ್ಪರ್ಧಿಗಳು ಮೌನ ವಹಿಸಿದ್ದು, ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಮುಖ್ಯಾಂಶಗಳು
- ಬಿಗ್ ಬಾಸ್ ಮನೆಯಲ್ಲಿ ಮತ್ತೆ ‘ಬಳೆ’ ವಿವಾದ
- ಸಂಗೀತಾ ತಳೆದಿದ್ದ ಗಟ್ಟಿಯಾದ ನಿಲುವು
- ಪ್ರಸ್ತುತ ಮಹಿಳಾ ಸ್ಪರ್ಧಿಗಳ ಮೌನವೇಕೆ?
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ‘ಹೋಗಿ ಕೈಗೆ ಬಳೆ ಹಾಕಿಕೋ’ ಎಂದು ವಿನಯ್ ಗೌಡ ಅವರು ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅದು ತುಂಬಾನೇ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿ ಮಾಡಿತ್ತು. ‘ಬಳೆ’ ವಿಷಯ ಅಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಲು ಒಂದು ಕಾರಣವೂ ಇತ್ತು. ಅದುವೇ ಸಂಗೀತಾ ಶೃಂಗೇರಿ. ಈ ಬಾರಿಯೂ ಬಿಗ್ ಬಾಸ್ನಲ್ಲಿ ಬಳೆಯ ವಿಷಯ ಬಂದಿದೆ. ಆದರೆ, ಇದನ್ನು ಯಾರೂ ಅಷ್ಟಾಗಿ ವಿರೋಧಿಸಿಯೇ ಇಲ್ಲ. ಹೀಗಾಗಿ, ಸುದೀಪ್ ಅವರು ಮಹಿಳಾ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ವಿನಯ್ ಗೌಡ ಅವರು ಬಳೆಯ ಬಗ್ಗೆ ಕಮೆಂಟ್ ಮಾಡಿದಾಗ ಸಹ ಸ್ಪರ್ಧಿ ಸಂಗೀತಾ ಶೃಂಗೇರಿ ಅವರು ಇದನ್ನು ತೀವ್ರವಾಗಿ ವಿರೋಧಿಸಿದರು. ಅವರ ಹೇಳಿಕೆ ತಪ್ಪು ಎಂದರು. ‘ಬಳೆ ಹೇಡಿತನದ ಸಂಕೇತವಲ್ಲ, ಶಕ್ತಿಯ ಸೂಚನೆ’ ಎಂದು ನೇರವಾಗಿ ಹೇಳಿದರು. ಪದೇ ಪದೇ ಇದನ್ನು ಮನವರಿಕೆ ಮಾಡುವ ಕೆಲಸ ಮಾಡಿದರು. ಸುದೀಪ್ ಕೂಡ ಈ ಹೇಳಿಕೆಯನ್ನು ಬೆಂಬಲಿಸಿದರು. ಆ ವಾರ ಬಳೆಗೆ ‘ಕಿಚ್ಚನ ಚಪ್ಪಾಳೆ’ ಸಿಕ್ಕಿತು.
ಇದಾಗಿ ಮೂರು ಸೀಸನ್ ಬಳಿಕ ಅಂದರೆ ಸೀಸನ್ 13ರಲ್ಲಿ ಮತ್ತೆ ಬಳೆ ವಿಷಯ ಬಂದಿದೆ. ಕಿರಣ್ ಶಾಸ್ತ್ರಿ ಬಳೆ ಹೇಡಿತನದ ಸಂಕೇತ ಎಂಬಂತೆ ಮಾತನಾಡಿದರು. ‘ಕೈಯಲ್ಲಿ ಆಗಿಲ್ಲ ಎಂದರೆ ಹೋಗಿ ಬಳೆ ತೊಟ್ಟುಕೋ’ ಎಂದು ಹೇಳಿದರು. ಇದನ್ನು ಗಗನ್ ಚಿನ್ನಪ್ಪ ಪ್ರಶ್ನೆ ಮಾಡಿದರು. ‘ಬಳೆ ತೊಟ್ಕೊಂಡ್ರೆ ಏನು’ ಎಂದು ಕೇಳಿ ಸುಮ್ಮನಾದರು.
ಆ ಬಳಿಕ ಬಂದ ವೈಷ್ಣವಿ ಅವರು ಒಮ್ಮೆ ಕಿರಣ್ ಶಾಸ್ತ್ರಿ ಅವರನ್ನು ಪ್ರಶ್ನೆ ಮಾಡಿದರು. ನಂತರ ಈ ಬಗ್ಗೆ ಅಷ್ಟು ದೊಡ್ಡ ಮಟ್ಟದ ಚರ್ಚೆ ನಡೆಯಲೇ ಇಲ್ಲ. ಈ ವಿಷಯದಲ್ಲಿ ಎಲ್ಲರೂ ಸೈಲೆಂಟ್ ಆಗಿ ಬಿಟ್ಟರು. ಈ ವಿಷಯದಲ್ಲಿ ಮಹಿಳಾ ಸ್ಪರ್ಧಿಗಳು ಏಕೆ ಸರಿಯಾದ ಸ್ಟ್ಯಾಂಡ್ ತೆಗೆದುಕೊಂಡಿಲ್ಲ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಾ ಇದೆ.
ಇದನ್ನೂ ಓದಿ: ‘ಬಳೆ ಹಾಕಿಕೊಂಡು ಕುಳಿತುಕೊಳ್ಳಿ’ ಎಂದ ಕಿರಣ್ ಶಾಸ್ತ್ರಿ; ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಳೆ ವಿವಾದ
ಈ ವಿಷಯವಾಗಿ ವೀಕೆಂಡ್ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಸುದೀಪ್ ಅವರು ಈ ಬಗ್ಗೆ ಮಹಿಳಾ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




