ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಹಂದಿ ಜ್ವರ; ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ!
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅನೇಕ ಜನರು ಜ್ವರದ ರೋಗಲಕ್ಷಣಗಳು ಕಾಣಿಸಿಕೊಂಡಾಗ ಮನೆಮದ್ದುಗಳ ಮೊರೆ ಹೋಗುತ್ತಾರೆ ಆದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಏಕೆಂದರೆ ಸಮಸ್ಯೆಯು ಗಂಭೀರವಾಗಬಹುದು, ಕೆಲವರಲ್ಲಿ ರೋಗಲಕ್ಷಣಗಳು ಕಾಲಕ್ರಮೇಣ ಕಡಿಮೆಯಾಗಬಹುದು. ಹಂದಿಜ್ವರದ ಲಕ್ಷಣಗಳು ಯಾವುವು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 10: ವಾತಾವರಣ ವೈಪರೀತ್ಯ ಉಂಟಾದಾಗ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಈ ಪೈಕಿ ಹಂದಿ ಜ್ವರ (Swine Flu) ಪ್ರಕರಣಗಳು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಬೆಂಗಳೂರಿನಲ್ಲಿ ಕೇವಲ H1N1 ಅಲ್ಲದೆ, H3N2 ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಹಂದಿಜ್ವರ ಲಕ್ಷಣಗಳು, ತಡೆಗಟ್ಟುವ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕಳೆದ ಒಂದೂವರೆ ತಿಂಗಳಲ್ಲಿ ಬೆಂಗಳೂರಲ್ಲಿ ಮಳೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಭಾರಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿಲ್ಲ, ಆದರೆ H1N1 ಮತ್ತು H3N2 ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಈ ಸಮಸ್ಯೆಯು ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಯಾವುದೇ ವಯಸ್ಸಿನವರ ಮೇಲೂ ಪರಿಣಾಮ ಬೀರಬಹುದು. ಮಕ್ಕಳಿಗೆ ಫ್ಲೂ ಸಂಬಂಧಿತ ಲಸಿಕೆಗಳನ್ನು ನೀಡುವುದರಿಂದ ಅವರಲ್ಲಿ ಗಂಭೀರ ಪ್ರಕರಣಗಳು ಅಷ್ಟಾಗಿ ಕಂಡುಬರುತ್ತಿಲ್ಲ. ವಯಸ್ಕರು ಮತ್ತು ಹಿರಿಯರಲ್ಲಿ ಮಾತ್ರ ಈ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತಿದ್ದು, ಮೊದಲ ಮೂರು ದಿನಗಳಲ್ಲಿ ಶೀತ, ಒಣ ಕೆಮ್ಮು, ಕೀಲು ನೋವು ಮತ್ತು ಭೇದಿಯಂತಹ ಲಕ್ಷಣಗಳು ಕಂಡುಬರುತ್ತದೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆರೋಗ್ಯ ತಜ್ಞರಾದ ಡಾ. ವಿನಯ್ ಹೊಸದುರ್ಗ ವಿವರಿಸಿದ್ದಾರೆ.
ಅನೇಕರು ಈ ರೋಗಲಕ್ಷಣಗಳು ಕಾಣಿಸಿಕೊಂಡಾಗ ಮನೆಮದ್ದುಗಳ ಮೊರೆ ಹೋಗುತ್ತಾರೆ ಆದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಏಕೆಂದರೆ ಸಮಸ್ಯೆಯು ಗಂಭೀರವಾಗಬಹುದು, ಕೆಲವರಲ್ಲಿ ರೋಗಲಕ್ಷಣಗಳು ಕಾಲಕ್ರಮೇಣ ಕಡಿಮೆಯಾಗಬಹುದು. ಉಸಿರಾಟದ ತೊಂದರೆ, ಕಡಿಮೆ ಆಮ್ಲಜನಕದ ಮಟ್ಟ ಮತ್ತು ಉಬ್ಬಸ (wheezing) ಗಂಭೀರವಾದ ಸಮಸ್ಯೆಯ ಲಕ್ಷಣಗಳಾಗಿವೆ. ಒಣ ಕೆಮ್ಮು ಕಾಣಿಸಿಕೊಳ್ಳುವುದರಿಂದ ರೋಗಿಯಲ್ಲಿ ಹೆಚ್ಚು ಆಯಾಸ ಉಂಟು ಮಾಡುತ್ತದೆ ಹಾಗಾಗಿ ಅನೇಕರು ಆಹಾರ ಸೇವಿಸುವುದನ್ನು ನಿಲ್ಲಿಸುತ್ತಾರೆ, ವಯಸ್ಕರಲ್ಲಿ ಈ ರೀತಿಯ ತೀವ್ರ ರೋಗಲಕ್ಷಣಗಳು ಕಂಡುಬರುತ್ತವೆ. 70 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಜ್ವರ ಕಾಣಿಸಿಕೊಳ್ಳಬಹುದು ಜೊತೆಗೆ ದೀರ್ಘಕಾಲದ ಆಯಾಸ ಕಂಡುಬರುವುದರಿಂದ ಆಹಾರ ತಿನ್ನುವುದನ್ನು ನಿಲ್ಲಿಸುತ್ತಾರೆ. ಒಂದು ವೇಳೆ ಅವರಿಗೆ ಕೆಮ್ಮು ಮತ್ತು ಶೀತದಂತಹ ಲಕ್ಷಣಗಳು ಇಲ್ಲದಿದ್ದರೂ ಸಹ ಹಂದಿ ಜ್ವರ (swine flu) ಲಕ್ಷಣವನ್ನು ಹೋಲುತ್ತದೆ. ಇಂತಹ ಸಂದರ್ಭಗಳಲ್ಲಿ ಮನೆ ಮದ್ದು ಬಳಸುವುದಕ್ಕಿಂತ ಆಸ್ಪತ್ರೆಗೆ ಭೇಟಿ ನೀಡುವುದು ಉತ್ತಮ.
ಹಂದಿ ಜ್ವರ ಇದ್ದವರಿಗೆ ಆರಂಭಿಕ ಚಿಕಿತ್ಸೆ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಇದು ಗಂಭೀರಗೊಂಡ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಉಂಟಾದಾಗ ಕೆಲವು ರೋಗಿಗಳಿಗೆ ವೆಂಟಿಲೇಟರ್ ನೆರವಿನ ಅಗತ್ಯವಿರುತ್ತದೆ. ಆರಂಭಿಕ ಚಿಕಿತ್ಸೆಯ ಜೊತೆಗೆ ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ನೀಡುವುದರಿಂದಲೂ ಚೇತರಿಕೆಯ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಲ್ಲಿ ಈ ಸಮಸ್ಯೆಯು ಕಂಡುಬಂದಾಗ ಅಪಾಯ ಮಟ್ಟ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: Swine Flu: ಹಂದಿ ಜ್ವರ ಸೇರಿ ಒಟ್ಟು 4 ಬಗೆಯ ಜ್ವರದಿಂದ ರಕ್ಷಣೆ ನೀಡುತ್ತೆ ಈ 4 in1 ಲಸಿಕೆ
ಈ ಸಮಸ್ಯೆಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿದ್ದು, ರೋಗ ಪತ್ತೆಹಚ್ಚುವಿಕೆ ಸುಲಭವಾಗಿರುವುದಿಲ್ಲ. ಏಕೆಂದರೆ ರಕ್ತ ಪರೀಕ್ಷೆಯಲ್ಲಿ ಈ ಆರೋಗ್ಯ ಸಮಸ್ಯೆಯು ಪತ್ತೆಯಾಗುವುದಿಲ್ಲ, ಬದಲಿಗೆ ಗಂಟಲು ಸ್ವಾಬ್ (throat swab) ಪರೀಕ್ಷೆಯಲ್ಲಿ ಪತ್ತೆ ಮಾಡಬಹುದು. ರೋಗ ಪತ್ತೆ ಹಚ್ಚಿದ ಬಳಿಕ ನಿರ್ದಿಷ್ಟ ಚಿಕಿತ್ಸೆ ಜೊತೆಗೆ ಉತ್ತಮ ಆರೈಕೆ ಮತ್ತು ಕೆಲವೊಮ್ಮೆ ವೈದ್ಯರ ಸಲಹೆಯಂತೆ ಸ್ಟೀರಾಯ್ಡ್ಗಳನ್ನು ನೀಡಲಾಗುವುದು. ಪ್ರಸ್ತುತ ಸನ್ನಿವೇಶಗಳಲ್ಲಿ ಮರಣ ಪ್ರಮಾಣಕ್ಕಿಂತ ಚೇತರಿಕೆ ಪ್ರಮಾಣವು ಹೆಚ್ಚಾಗಿದೆ ಹಾಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಡಾ. ವಿನಯ್ ಹೊಸದುರ್ಗ ತಿಳಿಸಿದ್ದಾರೆ.
ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ವೈದ್ಯರ ಸಲಹೆ:
ಸಾರ್ವಜನಿಕವಾಗಿ ಪ್ರಯಾಣಿಸುವಾಗ ಅಥವಾ ಜನಸಂದಣಿಯ ಸ್ಥಳಗಳಲ್ಲಿ ಸೇರುವುದು, ಧೂಮಪಾನಿಗಳು, 55 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ದೀರ್ಘಕಾಲದ ಮಧುಮೇಹ ಹೊಂದಿರುವವರು ಮತ್ತು ಡಯಾಲಿಸಿಸ್ನಲ್ಲಿರುವ ವ್ಯಕ್ತಿಗಳು ಹೆಚ್ಚಿನ ಅಪಾಯವನ್ನು ಎದುರಿಸಲಿದ್ದಾರೆ. ಇದಕ್ಕೆ ಚುಚ್ಚುಮದ್ದು ಲಭ್ಯವಿದ್ದು, ಹೆಚ್ಚಿನ ಅಪಾಯದಲ್ಲಿರುವವರು ಸಹ ಈ ಚುಚ್ಚುಮದ್ದನ್ನು ಪಡೆಯಬಹುದು. ಅದಲ್ಲದೆ ಇದು ವೈರಲ್ ಸ್ಟ್ರೈನ್ನಲ್ಲಿನ ಬದಲಾವಣೆಗಳನ್ನು ಆಧರಿಸಿರುತ್ತದೆ. ವಾರ್ಷಿಕವಾಗಿ ನೀಡಲಾಗುವ ಲಸಿಕೆ ಇದಾಗಿದ್ದು, ಸಾಮಾನ್ಯವಾಗಿ ಇದನ್ನು ಮಳೆಗಾಲಕ್ಕೂ ಮುನ್ನ ಅಂದರೆ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನೀಡಲಾಗುತ್ತದೆ.
ಇದನ್ನೂ ಓದಿ: African Swine Fever: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ, ಕರ್ನಾಟಕಕ್ಕೂ ಆತಂಕ
ಈ ಲಸಿಕೆಯು ಕಾರ್ಯನಿರ್ವಹಿಸಲು ಮೂರರಿಂದ ನಾಲ್ಕು ವಾರಗಳು ಬೇಕಾಗುತ್ತದೆ, ಆದ್ದರಿಂದ ಜನರು ಮಳೆಗಾಲದ ಹೊತ್ತಿಗೆ ಆರೋಗ್ಯದ ಕಾಳಜಿ ಮಾಡಲು ನೆರವಾಗುತ್ತದೆ. ಲಸಿಕೆಯ ಮೂಲಕ ಸೋಂಕಿನ ಗಂಭೀರತೆಯನ್ನು ಕಡಿಮೆ ಮಾಡಬಹುದು. ಹಂದಿ ಜ್ವರ ಹರಡುವಿಕೆಯನ್ನು ತಡೆಗಟ್ಟುವ ಪ್ರಮುಖ ವಿಧಾನಗಳೆಂದರೆ ನೈರ್ಮಲ್ಯ ಕಾಪಾಡುವುದು, ಮಾಸ್ಕ್ ಮತ್ತು ಸ್ಯಾನಿಟೈಜರ್ ಬಳಕೆ, ಆಗ್ಗಾಗ್ಗೆ ಮುಖವನ್ನು ಮುಟ್ಟುವುದನ್ನು ತಪ್ಪಿಸುವುದು, ಕರವಸ್ತ್ರದ ಬದಲು ಟಿಶ್ಯೂ ಪೇಪರ್ ಬಳಸುವುದು ಮತ್ತು ಆಗಾಗ ನೀರಿನಲ್ಲಿ ಕೈಗಳನ್ನು ತೊಳೆಯುವುದು. ಮನೆಗೆ ಬಂದ ತಕ್ಷಣ ನಿಮ್ಮ ಮುಖವನ್ನು ಸ್ವಚ್ಛಗೊಳಿಸುವುದು. ಯಾರಿಗಾದರೂ ಕೆಮ್ಮು ಅಥವಾ ಶೀತವಿದ್ದರೆ ಕ್ವಾರಂಟೈನ್ ಆಗುವುದು ಒಳಿತು ಮತ್ತು ಮಾಸ್ಕ್ ಧರಿಸಬೇಕು. ಜೊತೆಗೆ ಉತ್ತಮ ಪ್ರಮಾಣದ ಪೋಷಣೆಯುಳ್ಳ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಸಹಾಯವಾಗುತ್ತದೆ. ಈ ರೋಗದ ಕುರಿತು ಹೆಚ್ಚು ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




