Aquarius Ugadi Horoscope 2025: ಕುಂಭ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ವಿಶ್ವಾವಸು ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ನೀಡಲಾಗಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.

ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿಗೆ ಪ್ರವೇಶ ಮಾಡಿದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ಕುಂಭ ರಾಶಿಯವರ ಯುಗಾದಿ ವರ್ಷ ಭವಿಷ್ಯ:
ಶನಿ (ಎರಡನೇ ಮನೆ ಸಂಚಾರ):
ಸಾಡೇ ಸಾತ್ ಶನಿಯ ಕೊನೆಯ ಎರಡೂವರೆ ವರ್ಷಗಳು ಆರಂಭವಾಗಲಿದೆ. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ವಿವಾಹಿತರು ಸಂಗಾತಿ ಜೊತೆಗೆ ಮಾತನಾಡುವಾಗ ಬಹಳ ಜಾಗ್ರತೆಯಿಂದ ಇರಬೇಕು. ಆದಾಯ ಸ್ವಲ್ಪ ಸರಾಗವಾಗಿ ಆಯಿತು ಎಂಬ ಕಾರಣಕ್ಕಾಗಿ ದೊಡ್ಡ ಸಾಹಸಗಳಿಗೆ ಕೈ ಹಾಕುವುದಕ್ಕೆ ಹೋಗಬೇಡಿ. ಖರ್ಚು- ವೆಚ್ಚದ ಪ್ರಮಾಣವನ್ನು ಶತಾಯಗತಾಯ ಕಡಿಮೆ ಮಾಡಲೇಬೇಕು. ಉದ್ಯೋಗ- ವೃತ್ತಿ- ವ್ಯವಹಾರ ಏನೇ ಮಾಡುತ್ತಿದ್ದರೂ ಆದಾಯದಲ್ಲಿ ಏರಿಳಿತ ಎಂಬುದು ನಿರಂತರವಾಗಿ ಇರಲಿದೆ. ಆದಾಯದಲ್ಲಿ ಸ್ಥಿರತೆ ಇರುವುದಿಲ್ಲ ಎಂಬುದು ಗೊತ್ತಿರಲೇಬೇಕಾದ ವಿಷಯ. ಕ್ರೆಡಿಟ್ ಕಾರ್ಡ್ ಬಳಸಿ ಸಾಲ ಮಾಡುವುದು, ಪರ್ಸನಲ್ ಲೋನ್ ತೆಗೆದುಕೊಳ್ಳೋಣ ಎಂದುಕೊಳ್ಳುವವರು ಇಂಥದ್ದರಿಂದ ದೂರ ಇರಿ.
ಗುರು (ಐದನೇ ಮನೆ- ಆರನೇ ಮನೆ):
ನಿಮ್ಮಲ್ಲಿ ಯಾರು ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂಥವರು ಯಶಸ್ವಿ ಆಗುತ್ತೀರಿ. ಈ ಹಿಂದೆ ಯಾವಾಗಲೋ ಇಂಟರ್ ವ್ಯೂ ನೀಡಿದ್ದ ಕೆಲಸವು ಈಗ ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಹೂಡಿಕೆಗಳು ಲಾಭದಾಯಕವಾಗಿ ಪರಿವರ್ತನೆ ಆಗಲಿದೆ. ಮಕ್ಕಳ ಶಿಕ್ಷಣ, ಮದುವೆ ಇತ್ಯಾದಿಗಳಿಗೆ ನಿಮ್ಮ ಸಲಹೆ- ಸೂಚನೆಗಳು ನೆರವು ಮಾಡಲಿವೆ. ನಿಮ್ಮ ಶಿಫಾರಸು ಮಕ್ಕಳಿಗೆ ಅನುಕೂಲವಾಗಿ ಮಾರ್ಪಡಲಿದೆ. ಅಲ್ಪಾವಧಿಯ ಅಥವಾ ಆಯಾ ಕಾಲಕ್ಕೆ ತಕ್ಕಂತೆ ವ್ಯಾಪಾರ- ವ್ಯವಹಾರ ಮಾಡುವಂಥವರಿಗೆ ಅನಿರೀಕ್ಷಿತವಾಗಿ ಲಾಭ ದೊರೆಯಲಿದೆ. ಅಕ್ಟೋಬರ್ ನಿಂದ ಡಿಸೆಂಬರ್ ಮಧ್ಯೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲೇಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಒಂದಲ್ಲಾ ಒಂದು ಕಾರಣಕ್ಕೆ ಸರ್ಕಾರಕ್ಕೆ ದಂಡ ಪಾವತಿ ಮಾಡಬೇಕಾಗುತ್ತದೆ.
ಇದನ್ನೂ ಓದಿ: ವೃಶ್ಚಿಕ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ರಾಹು (ಒಂದನೇ ಮನೆ), ಕೇತು (ಏಳನೇ ಮನೆ):
ಆತುರವಾದ ತೀರ್ಮಾನಗಳನ್ನು ಮಾಡದಿರುವುದು ಬಹಳ ಮುಖ್ಯವಾಗಲಿದೆ. ಆಹಾರ ಪಥ್ಯವನ್ನು ಸರಿಯಾಗಿ ಪಾಲಿಸುವುದು ಮುಖ್ಯವಾಗುತ್ತದೆ. ವಿಟಮಿನ್ ಗಳ ಕೊರತೆ, ನೀರಿನ ಅಂಶ ದೇಹದಲ್ಲಿ ಕಡಿಮೆ ಆಗಿ, ಅನಾರೋಗ್ಯ ಎದುರಾಗುವುದು ಇಂಥ ಸಮಸ್ಯೆಗಳನ್ನು ಎದುರಿಸುತ್ತೀರಿ. ಪ್ರೀತಿ- ಪ್ರೇಮದಲ್ಲಿ ಇರುವಂಥವರು ಹಾಗೂ ವಿವಾಹಿತರು ಸಂಗಾತಿ ಮೇಲಿನ ಅನುಮಾನದಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತೀರಿ. ನಿಮ್ಮಲ್ಲಿ ಕೆಲವರಿಗೆ ದೃಷ್ಟಿ ದೋಷವು ತಗುಲಲಿದ್ದು, ಈ ಸಮಸ್ಯೆಗೆ ಸೂಕ್ತ ಎಚ್ಚರಿಕೆಯನ್ನು ತೆಗೆದುಕೊಳ್ಳಿ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Tue, 1 April 25