AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ-ವಿರೋಧ ನಡುವೆ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಮುಂದುವರಿಕೆ: ಈವರೆಗೆ ಎಷ್ಟು ಕ್ಲಿಯರ್?

ಕೃಷ್ಣಬೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗುತ್ತಿದ್ದಂತೆಯೇ ಮೊದಲಿಗೆ ಅಕ್ರಮ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಕ್ಕೆ ಕೈಹಾಕಿದರು. ಸಾರ್ವಜನಿಕರ ಸುಗಮ ಓಡಾಟಕ್ಕೆ ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸುವ ಗುರಿಯೊಂದಿಗೆ ಆರಂಭವಾದ ಈ ಕಾರ್ಯಾಚರಣೆಗೆ ಪರ-ವಿರೋಧಗಳು ವ್ಯಕ್ತವಾಗಿದ್ದು, ಬೀದಿಬದಿ ವ್ಯಾಪಾರಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. ಆದರೆ, ಈ ಎಲ್ಲಾ ವಿರೋಧಗಳ ನಡುವೆಯೂ ಕೃಷ್ಣಬೈರೇಗೌಡ ಅವರು ಹಲವೆಡೆ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಿ ಕೊಂಚ ಯಶಸ್ಸು ಕಂಡಿದ್ದಾರೆ.

ಪರ-ವಿರೋಧ ನಡುವೆ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಮುಂದುವರಿಕೆ: ಈವರೆಗೆ ಎಷ್ಟು ಕ್ಲಿಯರ್?
ಪಾದಚಾರಿ ಮಾರ್ಗ ಒತ್ತುವರಿ ತೆರವುImage Credit source: tv9 kannada
ಅರುಣ್ ಕುಮಾರ್​ ಆರ್​.
| Edited By: |

Updated on:Aug 27, 2026 | 8:03 PM

Share

ಬೆಂಗಳೂರು, ಆಗಸ್ಟ್​ 27: ರಾಜಧಾನಿಯ ರಸ್ತೆಗಳಲ್ಲಿ ಪಾದಚಾರಿಗಳಿಗೆ ಮುಕ್ತವಾಗಿ ನಡೆದಾಡಲು ಜಾಗ ಕಲ್ಪಿಸುವ ಮಹತ್ವಾಕಾಂಕ್ಷೆಯ ಫುಟ್​​ಪಾತ್ ಒತ್ತುವರಿ ತೆರವು (footpath encroachment) ಕಾರ್ಯಾಚರಣೆ ನಗರದಲ್ಲಿ ಮುಂದುವರೆದಿದೆ. ಜಿಬಿಎ ಅಧಿಕಾರಿಗಳು ಫುಟ್‌ಪಾತ್‌ಗಳನ್ನ ತೆರವುಗೊಳಿಸಿ, ಪಾದಚಾರಿಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಇಂದು ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಭರ್ಜರಿ ಆಪರೇಷನ್ ಮೂಲಕ ಒಂದೇ ದಿನ 3.05 ಕಿ.ಮೀ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಗಿದೆ.

ಏಲ್ಲೆಲ್ಲಿ ಫುಟ್​​ಪಾತ್ ಒತ್ತುವರಿ ತೆರವು?

ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಿದ್ಯಾರಣ್ಯಪುರ, ಸರ್ವಜ್ಞನಗರ, ಯಲಹಂಕ ಹಾಗೂ ಸರ್ಜಾಪುರ ವಿಭಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದ ಅಕ್ರಮ ಕಟ್ಟಡ ರಚನೆಗಳು ಮತ್ತು ವ್ಯಾಪಾರ ಮಳಿಗೆಗಳನ್ನು ಅಧಿಕಾರಿಗಳು ತೆರವುಗೊಳಿಸಿದರು. ಪಾದಚಾರಿಗಳಿಗೆ ಅಡ್ಡಿಯುಂಟುಮಾಡುತ್ತಿದ್ದ ಮೆಟ್ಟಿಲುಗಳು ಮತ್ತು ಅನಧಿಕೃತ ರ್ಯಾಂಪ್‌ಗಳನ್ನು ನೆಲಸಮ ಮಾಡಲಾಗಿದೆ.

ಒಂದೇ ದಿನ 3.05 ಕಿಮೀ ಮಾರ್ಗ ತೆರವು

ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಭರ್ಜರಿ ಆಪರೇಷನ್​ ನಡೆಸಿದ ಅಧಿಕಾರಿಗಳು ಒಂದೇ ದಿನ ನಗರದ ಪ್ರಮುಖ ರಸ್ತೆಗಳಲ್ಲಿ 3.05 ಕಿ.ಮೀ. ಉದ್ದದ ಫುಟ್‌ಪಾತ್ ಅನ್ನು ಸಂಪೂರ್ಣವಾಗಿ ಒತ್ತುವರಿ ತೆರವುಗೊಳಿಸಿದ್ದಾರೆ. ಇನ್ನು ಈ ಕಾರ್ಯಾಚರಣೆಯಲ್ಲಿ 7 ಅನಧಿಕೃತ ಅಂಗಡಿಗಳು ಹಾಗೂ 5 ತಳ್ಳುವ ಗಾಡಿಗಳು, ಅಂಗಡಿ ಮುಂಭಾಗ ಅಕ್ರಮವಾಗಿ ಹಾಕಲಾಗಿದ್ದ 43 ಕ್ಯಾನೋಪಿಗಳು (ಶೀಟ್‌ಗಳು), ರಸ್ತೆಗೆ ಚಾಚಿಕೊಂಡಿದ್ದ 51 ಮೆಟ್ಟಿಲು ಹಾಗೂ ರ್ಯಾಂಪ್‌ಗಳ ನೆಲಸಮ ಮಾಡಲಾಗಿದೆ. ದಾರಿಗೆ ಅಡ್ಡಲಾಗಿದ್ದ 41 ಜಾಹೀರಾತು ಕಂಬ ಹಾಗೂ ನಾಮಫಲಕಗಳ ಜಪ್ತಿ ಮಾಡಲಾಗಿದ್ದು, ಫುಟ್‌ಪಾತ್ ಮೇಲೆ ಹಾಕಲಾಗಿದ್ದ ಸುಮಾರು 30 ಟನ್ ಕಟ್ಟಡ ತ್ಯಾಜ್ಯ ಮತ್ತು ಮಣ್ಣು ತೆರವುಗೊಳಿಸಲಾಗಿದೆ.

1300 ಕಿಮೀ ಫುಟ್‌ಪಾತ್ ಒತ್ತುವರಿ ತೆರವು

ಇನ್ನು ಕಳೆದ ಜುಲೈ 1 ರಿಂದ ಆಗಸ್ಟ್ 27 ರವರೆಗಿನ ಎರಡು ತಿಂಗಳ ಅವಧಿಯಲ್ಲಿ ಕೇವಲ ಉತ್ತರ ಪಾಲಿಕೆ ವ್ಯಾಪ್ತಿಯಲ್ಲೇ ಬರೋಬ್ಬರಿ 1,300 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ. ಆ ಮೂಲಕ ಫುಟ್‌ಪಾತ್‌ಗಳನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ.

ಇದನ್ನೂ ಓದಿ: ಖುದ್ದು ಖಾಲಿ ನಿವೇಶನದ ಗಿಡಗಂಟೆ ಸ್ವಚ್ಛಗೊಳಿಸಿದ ಸಚಿವ ಕೃಷ್ಣಭೈರೇಗೌಡ: ಖಾಲಿ ಸೈಟ್ ಸ್ವಚ್ಛಗೊಳಿಸುವ ಗಡುವು ಇಂದಿಗೆ ಮುಕ್ತಾಯ

ಜುಲೈ 1 ರಂದು ಆರಂಭವಾಗಿರುವ ಈ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯು, ಜಿಬಿಎ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 964 ಕಿ.ಮೀ. ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:57 pm, Thu, 27 August 26

Follow Us