ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ದಾರುಣ ಅಂತ್ಯಕಂಡ ಯುವಕ
Tragedy Near Nelamangala: ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾನೆ. ಹೆದ್ದಾರಿಯಲ್ಲಿ ಬೆಳ್ಳಂ ಬೆಳಿಗ್ಗೆ 4:30ರ ಸಮಯದಲ್ಲಿ ಲಾರಿ ನಿಂತಿರೋದು ಕಾಣಿಸದೆ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ನಿರ್ಲಕ್ಷ್ಯದ ಹಿನ್ನೆಲೆ ಲಾರಿ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಖ್ಯಾಂಶಗಳು
- ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಅಪಘಾತ
- ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಯುವಕನ ದಾರುಣ ಅಂತ್ಯ
- ನಿರ್ಲಕ್ಷ್ಯದ ಹಿನ್ನೆಲೆ ಲಾರಿ ಚಾಲಕನ ವಿರುದ್ಧ ಕೇಸ್ ದಾಖಲು
ನೆಲಮಂಗಲ, ಆಗಸ್ಟ್ 20: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ದಾರುಣ ಅಂತ್ಯ ಕಂಡಿರುವ ಘಟನೆ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ನಡೆದಿದೆ. ದರ್ಶನ್ (26) ಮೃತ ದುರ್ದೈವಿ. ಯಡಿಯೂರಿನ ನಿವಾಸಿಯಾಗಿದ್ದ ದರ್ಶನ್ಗೆ ತಾಯಿ ಇರಲಿಲ್ಲ. ತಂದೆ ವೆಂಕಟೇಶ್ ಅವರ ಜೊತೆ ವಾಸವಿದ್ದ ಇವರು ರೈತನಾಗಿ ಕೆಲಸ ಮಾಡಿಕೊಂಡಿದ್ದರು. ಹೆಚ್ಚು ದುಡಿಯುವ ಹಂಬಲ ಹೊಂದಿದ್ದ ಕಾರಣ ಡೈರಿಗೆ ಹಾಲು ಹಾಕುವ ಕೆಲಸ ಮಾಡುತ್ತಿದ್ದರು. ಇಂದು ಕೂಡ ಬೆಳಿಗ್ಗೆ ಡೈರಿಗೆ ಹಾಲು ಹಾಕಿ ಅವರು ಹಿಂದಿರುಗುತ್ತಿದ್ದರು. ಆದರೆ ವಿಧಿಯಾಟಕ್ಕೆ ಮಾರ್ಗ ಮಧ್ಯೆಯೇ ಅವರ ಜೀವ ಹೋಗಿದೆ.
ನಡೆದಿತ್ತು ಮದುವೆ ಮಾತುಕತೆ
ನೆಲಮಂಗಲದಲ್ಲಿ ಹಾಲು ಹಾಕಿ ಯಡಿಯೂರಿಗೆ ಓಮಿನಿ ಕಾರಿನಲ್ಲಿ ಹಿಂದುರುಗುವ ವೇಳೆ ಯಂಟಗಾನಹಳ್ಳಿಯಲ್ಲಿ ಹೆದ್ದಾರಿಯಲ್ಲಿ ಬೆಳ್ಳಂ ಬೆಳಿಗ್ಗೆ 4:30ರ ಸಮಯದಲ್ಲಿ ಲಾರಿ ನಿಂತಿರೋದು ದರ್ಶನ್ಗೆ ಕಾಣಿಸಿಲ್ಲ. ಪರಿಣಾಮ ಕಾರು ನಿಂತಿದ್ದ ಲಾರಿಗೆ ಹೋಗಿ ಗುದ್ದಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ದರ್ಶನ್ ಪ್ರಾಣ ಬಿಟ್ಟಿದ್ದಾರೆ. ಇನ್ನು ದರ್ಶನ್ಗೆ ಸಂಬಂಧಿಕರಲ್ಲಿಯೇ ಹುಡುಗಿ ನೋಡಿ ಮದುವೆ ಮಾತುಕತೆಯನ್ನೂ ನಡೆಸಲಾಗಿತ್ತು. ಆದರೆ ದುರ್ದೈವ ಎಂಬಂತೆ ಹಸೆಮಣೆ ಏರುವ ಮುನ್ನವೇ ಅಪಘಾತದಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಘಟನೆ ಸಂಬಂಧ ಸಂಚಾರಿಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮೃತದೇಹವನ್ನು ನೆಲಮಂಗಲ ಶವಾಗಾರಕ್ಕೆ ರವಾನಿಸಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿರುವ ಹಿನ್ನೆಲೆ ಆತನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ರಾತ್ರಿ ಮಲಗಿದ್ದಾಗ ಗಂಡ, ಮಗುವಿನ ಕೊಲೆ: ಪತ್ನಿ ಸೇರಿದಂತೆ ಪ್ರಿಯಕರ ಅರೆಸ್ಟ್
ಕುಟುಂಬಸ್ಥರು ಕಂಗಾಲು
ಕಳೆದ 5-6 ತಿಂಗಳಿನಿಂದ ದರ್ಶನ್ ಡೇರಿಗೆ ಹಾಲು ಹಾಕುವ ಕೆಲಸ ಮಾಡುತ್ತಿದ್ದರು. ತಾಯಿ ಇಲ್ಲದ ಕುಟುಂಬಕ್ಕೆ ಅವರೇ ಆಧಾರ ಸ್ತಂಭವಾಗಿದ್ದರು. ಅವರ ಈ ಅಕಾಲಿಕ ನಿಧನ ಕುಟುಂಬಕ್ಕೆ ಭರಿಸಲಾಗದ ಏಟು ನೀಡಿದೆ. ಮನೆಯ ದೀಪವೇ ಆರಿದೆ ಎಂದು ಕುಟುಂಬಸ್ಥರು ಅಳಲುತೋಡಿಕೊಂಡಿದ್ದಾರೆ. ಹೈವೇ ಪಕ್ಕದಲ್ಲಿಯೇ ರಾತ್ರಿ ವೇಳೆ ಲಾರಿ ಸೇರಿ ವಾಹನಗಳ ಪಾರ್ಕಿಂಗ್ ಮಾಡುವುದರಿಂದ ಇಂತಹ ಅಪಘಾತಗಳು ಹೆಚ್ಚುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:19 pm, Thu, 20 August 26




