ಬಡತನವನ್ನೇ ಮೆಟ್ಟಿ ನಿಂತು ಮಹತ್ತರ ಸಾಧನೆ: ಛಲಬಿಡದೆ ಓದಿ ಜಡ್ಜ್ ಆದ ಆಟೋ ಚಾಲಕನ ಮಗಳು!
ಬಡತನದ ಸವಾಲುಗಳನ್ನೆಲ್ಲ ಮೆಟ್ಟಿನಿಂತು, ಆನೇಕಲ್ನ ಆಟೋ ಚಾಲಕ ಲಕ್ಷ್ಮಣ್ ಎಂಬವರ ಮಗಳು ನಾಗಿಣಿ ಎಲ್ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ತಂದೆ-ತಾಯಿಯ ಕಷ್ಟಕ್ಕೆ ಬೆಲೆ ಕೊಟ್ಟು, ಹೂವಿನ ವ್ಯಾಪಾರದಲ್ಲಿ ತೊಡಗಿಸಿಕೊಂಡು ಶಾಲಾ-ಕಾಲೇಜು ಶಿಕ್ಷಣ ಪೂರೈಸಿದ ಇವರು, ಮೂರನೇ ಪ್ರಯತ್ನದಲ್ಲಿ ಜಡ್ಜ್ ಪರೀಕ್ಷೆ ಪಾಸ್ ಮಾಡಿ 48ನೇ ರ್ಯಾಂಕ್ ಗಳಿಸಿದ್ದಾರೆ.

ಆನೇಕಲ್, ಫೆಬ್ರವರಿ 24: ಆಟೋ ಚಾಲಕರೊಬ್ಬರ ಮಗಳು ಬಡತನವನ್ನೇ ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರಿ ಇದೀಗ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಈ ಮೂಲಕ, ಕುಟುಂಬದವರಿಗಷ್ಟೇ ಅಲ್ಲದೆ ಇಡೀ ಊರಿಗೂ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ. ಇಂಥದ್ದೊಂದು ಅಪರೂಪದ ವಿದ್ಯಮಾನ ಬೆಂಗಳೂರು (Bangalore) ಹೊರವಲಯದ ಆನೇಕಲ್ನಿಂದ ವರದಿಯಾಗಿದೆ. ಆನೇಕಲ್ ತಾಲ್ಲೂಕಿನ ತಿರುಪಾಳ್ಯ ನಿವಾಸಿಯಾದ ನಾಗಿಣಿ ಎಲ್ ಎಂಬವರು ಲಕ್ಷ್ಮಣ್ ಮತ್ತು ಮಂಜುಳಾ ದಂಪತಿಯ ದ್ವಿತೀಯ ಪುತ್ರಿ. ತಂದೆ ಲಕ್ಷ್ಮಣ್ ಆಟೋ ಚಾಲಕರಾಗಿದ್ದು, ತಾಯಿ ಮಂಜುಳಾ ಹೂವಿನ ವ್ಯಾಪಾರ ಮಾಡುತ್ತಿದ್ದರು.
ಬಾಲ್ಯದಿಂದಲೇ ತಾಯಿ ಜೊತೆ ಸೇರಿ ಹೂವಿನ ವ್ಯಾಪಾರದಲ್ಲಿ ಕೈಜೋಡಿಸುತ್ತಿದ್ದ ನಾಗಿಣಿ, ಬಡತನದ ನಡುವೆಯೂ ಓದಿನ ಮೇಲಿನ ಆಸಕ್ತಿ ಕಡಿಮೆ ಮಾಡಲಿಲ್ಲ. ಚೆನ್ನಾಗಿ ಓದುತ್ತಿದ್ದ ಆಕೆ, ಶಾಲಾ ಕಲಿಕೆಯಲ್ಲಿ ಮುಂದಿದ್ದಳು. ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ನಾಗಿಣಿ ನಂತರ ಡಾ. ರಾಮ್ ಮನೋಹರ್ ಲೋಹಿಯಾ ಕಾಲೇಜಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದಳು.
ನ್ಯಾಯಾಂಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂಬುದು ನಾಗಿಣಿ ತಂದೆಯ ದೊಡ್ಡ ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದೇ ಗುರಿ ಎಂದು ನಿಶ್ಚಯಿಸಿಕೊಂಡ ನಾಗಿಣಿ ಛಲಬಿಡದೆ ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದಳು.
ಹಿನ್ನಡೆಯಾದರೂ ಛಲಬಿಡದೆ ಯತ್ನ, ಕೊನೆಗೂ ಸಿಕ್ತು ಯಶಸ್ಸು
ಮೊದಲ ಎರಡು ಪ್ರಯತ್ನಗಳಲ್ಲಿ ಅಲ್ಪ ಹಿನ್ನಡೆ ಅನುಭವಿಸಿದರೂ ಎದೆಗುಂದದೆ ಮೂರನೇ ಪ್ರಯತ್ನದಲ್ಲಿ ನಾಗಿಣಿ ಭರ್ಜರಿ ಯಶಸ್ಸು ಸಾಧಿಸಿದರು. ಇತ್ತೀಚೆಗೆ ನಡೆದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ 48ನೇ ರ್ಯಾಂಕ್ ಗಳಿಸಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.
ಪೋಷಕರ ಕಷ್ಟ ಮತ್ತು ಬೆವರಿನ ಬೆಲೆಯನ್ನು ಅರಿತು ನಾಗಿಣಿಯ ಮಾಡಿದ ಸಾಧನೆಗೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಂದೆಯ ಕನಸನ್ನು ನನಸು ಮಾಡುವುದು ನನ್ನ ಜೀವನದ ಗುರಿಯಾಗಿತ್ತು ಎನ್ನುವ ನಾಗಿಣಿ, ಈ ಯಶಸ್ಸಿಗೆ ಪೋಷಕರ ತ್ಯಾಗವೇ ಕಾರಣ ಎಂದು ವಿನಯದಿಂದ ಹೇಳುತ್ತಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಮನ್ ಕಿ ಬಾತ್ ಪ್ರೇರಣೆ: ಸಿರಿಧಾನ್ಯದ ಹೋಟೆಲ್ ತೆರೆದ ಚಾಮರಾಜನಗರದ ಗೃಹಿಣಿ
ಬಡತನವನ್ನು ಮೆಟ್ಟಿ ನಿಂತು ಶ್ರಮ ಮತ್ತು ಸಂಕಲ್ಪದಿಂದ ಸಾಧನೆ ಮಾಡಿದ ನಾಗಿಣಿ, ಈಗ ಆನೇಕಲ್ ಹಾಗೂ ರಾಜ್ಯದ ಯುವತಿಯರಿಗೆ ಪ್ರೇರಣೆಯಾಗಿದ್ದಾರೆ. ಅವರ ಸಾಧನೆಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.