AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಶಾಲೆ ಪ್ರವೇಶ ದ್ವಾರದ ಮುಂದೆಯೇ ಕಸದ ರಾಶಿ, ಗಲೀಜು: ಮಕ್ಕಳ ಆರೋಗ್ಯಕ್ಕೆ ಸಂಚಕಾರ

Bangalore News: ಬೆಂಗಳೂರಿನ ಬಳೆಪೇಟೆಯ ಚಿಕ್ಕ ಲಾಲ್‌ಬಾಗ್ ಸರ್ಕಾರಿ ಶಾಲೆಯ ಮುಂಭಾಗವೇ ಸಾರ್ವಜನಿಕರು ಕಸ ಸುರಿಯುತ್ತಿದ್ದು, ಮೂತ್ರ ವಿಸರ್ಜನೆ ತಾಣವಾಗಿ ಮಾರ್ಪಟ್ಟಿದೆ. ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲಾ ಗೇಟ್ ಬಳಿ ದುರ್ವಾಸನೆ ಹರಡಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಬಾಯಿ ಮತ್ತು ಮೂಗು ಮುಚ್ಚಿಕೊಂಡು ಶಾಲೆಗೆ ಹೋಗಬೇಕಾದ ದುಃಸ್ಥಿತಿ ಎದುರಾಗಿದೆ.

ಸರ್ಕಾರಿ ಶಾಲೆ ಪ್ರವೇಶ ದ್ವಾರದ ಮುಂದೆಯೇ ಕಸದ ರಾಶಿ, ಗಲೀಜು: ಮಕ್ಕಳ ಆರೋಗ್ಯಕ್ಕೆ ಸಂಚಕಾರ
ಸರ್ಕಾರಿ ಶಾಲೆ ಪ್ರವೇಶ ದ್ವಾರದ ಮುಂದೆಯೇ ಕಸದ ರಾಶಿImage Credit source: tv9
ಗಣಪತಿ ಶರ್ಮಾ
|

Updated on: Jun 25, 2026 | 11:25 AM

Share

ಮುಖ್ಯಾಂಶಗಳು

  • ಶಾಲಾ ಗೇಟ್ ಮುಂದೆಯೇ ಕಸದ ರಾಶಿ
  • ಮೂಗು ಮುಚ್ಚಿ ತರಗತಿಗೆ ಹೋಗುವ ವಿದ್ಯಾರ್ಥಿಗಳು
  • ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪೋಷಕರ ತೀವ್ರ ಆಕ್ರೋಶ

ಬೆಂಗಳೂರು, ಜೂನ್ 25: ‘‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’’ ಎನ್ನುವ ಶ್ರೇಷ್ಠ ನುಡಿಯಿದೆ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಬಳೆಪೇಟೆಯಲ್ಲಿರುವ ಚಿಕ್ಕ ಲಾಲ್‌ಬಾಗ್ ಸರ್ಕಾರಿ ಶಾಲೆಯ ಸ್ಥಿತಿಯನ್ನು ನೋಡಿದರೆ, ‘‘ಬಾಯಿ, ಮೂಗು ಮುಚ್ಚಿಕೊಂಡು ಒಳಗೆ ಬಾ’’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಮುಖ್ಯ ಪ್ರವೇಶ ದ್ವಾರದ ಮುಂಭಾಗದಲ್ಲೇ ರಾಶಿ ರಾಶಿ ಕಸವನ್ನು ತಂದು ಸುರಿಯಲಾಗುತ್ತಿದ್ದು, ಇಡೀ ಆವರಣವು ಕಸದ ತಾಣವಾಗಿ ಮಾರ್ಪಟ್ಟಿದೆ. ಸ್ಥಳೀಯ ಜಿಬಿಎ (GBA) ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದ ಶಾಲೆಯ ಪರಿಸರ ಸಂಪೂರ್ಣವಾಗಿ ನರಕಸದೃಶವಾಗಿದೆ.

ಪೇ ಅಂಡ್ ಯೂಸ್ ಶೌಚಾಲಯವಿದ್ದರೂ ಗೇಟೇ ಮೂತ್ರಾಲಯ!

ಬೆಳಗ್ಗೆಯಿಂದ ಸಂಜೆಯವರೆಗೆ ನೂರಾರು ಸಣ್ಣ ಸಣ್ಣ ವಿದ್ಯಾರ್ಥಿಗಳು ಅಕ್ಷರ ಕಲಿಯುವ ಈ ಶಾಲೆಯ ಮುಖ್ಯ ಗೇಟ್ ಮುಂಭಾಗದಲ್ಲೇ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಶಾಲೆಯ ಗೇಟ್ ಪಕ್ಕದಲ್ಲೇ ಸಾರ್ವಜನಿಕ ‘ಪೇ ಅಂಡ್ ಯೂಸ್’ ಶೌಚಾಲಯವಿದೆ. ಆದರೆ, ಅಲ್ಲಿ ಹಣ ಕೊಡಬೇಕು ಎನ್ನುವ ಕಾರಣಕ್ಕಾಗಿ ಕೆಲ ಕಿಡಿಗೇಡಿಗಳು ನೇರವಾಗಿ ಶಾಲೆಯ ಆವರಣದ ಗೋಡೆ ಹಾಗೂ ಗೇಟ್ ಮುಂಭಾಗವನ್ನೇ ಮೂತ್ರಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇಡೀ ಶಾಲಾ ಆವರಣದ ಸುತ್ತಮುತ್ತ ತೀವ್ರ ದುರ್ವಾಸನೆ ಹರಡಿದ್ದು, ಸೊಳ್ಳೆ ಹಾಗೂ ನೊಣಗಳ ಕಾಟ ಮಿತಿಮೀರಿದೆ.

ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಲ್ಲಿ ಹೆಚ್ಚಿದ ಭೀತಿ

ಇಂತಹ ಕೊಳಕು ಪರಿಸರದಲ್ಲಿ ನಿತ್ಯ ಮಕ್ಕಳು ಪಾಠ ಕೇಳಬೇಕಾಗಿ ಬಂದಿರುವುದು ಹೆತ್ತವರ ಮತ್ತು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಗಂಭೀರ ಸಮಸ್ಯೆಯ ಕುರಿತು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯ ನಿವಾಸಿಗಳು ಹಲವು ಬಾರಿ ಜಿಬಿಎ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ, ಕಸ ತೆರವುಗೊಳಿಸಲು ಹಾಗೂ ಸಾರ್ವಜನಿಕ ಮೂತ್ರ ವಿಸರ್ಜನೆಗೆ ತಡೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಮನವಿಗೆ ಸ್ಪಂದಿಸದ ಜಿಬಿಎ

ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರು ದೂರು ನೀಡಿದರೂ ಅಧಿಕಾರಿಗಳು ಮಾತ್ರ ಇತ್ತ ತಲೆಹಾಕಿಯೂ ಮಲಗಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಗಂಭೀರ ಆರೋಪವಾಗಿದೆ. ಇನ್ನಾದರೂ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us