ಕಾಲೇಜು ವಿದ್ಯಾರ್ಥಿ ಸಾವಿನ ಸುತ್ತ ಹತ್ತಾರು ಅನುಮಾನ: ಸ್ಫೋಟಕ ಆರೋಪ ಮಾಡಿದ ಮೃತನ ತಂದೆ
ಯಲಹಂಕದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ನಲ್ಲಿ ವಿದ್ಯಾರ್ಥಿ ಸಾವಿನ ಸುತ್ತ ಅನುಮಾಗಳು ಹುಟ್ಟಿಕೊಂಡಿವೆ. 9ನೇ ಮಹಡಿಯಿಂದ ಜಿಗಿದು ಆತ ಮೃತಪಟ್ಟಿದ್ದಾನೆ ಎನ್ನಲಾಗಿದ್ದರೂ, ಮೃತನ ತಂದೆ ಮಾತ್ರ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಕೊಲೆಯೂ ಆಗಿರಬಹುದು ಎಂದು ಆರೋಪಿಸಿರುವ ಅವರು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ರಾತ್ರಿ ವೇಳೆ ಮೃತ ವ್ಯಕ್ತಿಯ ಅನುಮಾನಾಸ್ಪದ ಓಡಾಟವೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 08: ಕಟ್ಟಡದಿಂದ ಜಿಗಿದು ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಯಲಹಂಕದಲ್ಲಿರೋ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ನಲ್ಲಿ ನಿನ್ನೆ ನಡೆದಿತ್ತು. ಘಟನೆಯಲ್ಲಿ ಮೂಲತಃ ಜಾರ್ಖಂಡ್ನ ರಾಂಚಿ ನಿವಾಸಿ 21 ವರ್ಷದ ಲಕ್ಷ್ಯ ಮಿಶ್ರಾ ಮೃತಪಟ್ಟಿದ್ದರು. ಯಲಹಂಕ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ವಿದ್ಯಾರ್ಥಿ ನಸುಕಿನ ಜಾವ 3 ಗಂಟೆ ವೇಳೆಗೆ ಹಾಸ್ಟೆಲ್ನ 9ನೇ ಮಹಡಿಯಿಂದ ಜಿಗಿದಿದ್ದರು. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಆದರೀಗ ವಿದ್ಯಾರ್ಥಿ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಹೌದು, ಪುತ್ರ ಲಕ್ಷ್ಯ ಮಿಶ್ರಾ ಸಾವಿನ ಬಗ್ಗೆ ಅವರ ತಂದೆ ಅಂಜನಿ ಕುಮಾರ್ ಸಾಕಷ್ಟು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ವೀಡಿಯೋ ಮಾಡಿ ಘಟನೆ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಅವರು, ತಮಗಿರುವ ಅನುಮಾನಗಳನ್ನು ಉಲ್ಲೇಖಿಸಿ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.
ಇದನ್ನೂ ಓದಿ: ನರ್ಸ್ ಆಗುತ್ತಿದ್ದಂತೆಯೇ ಬದಲಾಯ್ತು ಲೈಫ್ ಸ್ಟೈಲ್; ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು, ಪತಿ ದುರಂತ ಸಾವು
ಅಂಜನಿ ಕುಮಾರ್ ಅನುಮಾನಗಳೇನು?
- 9ನೇ ಮಹಡಿಯಿಂದ ಬಿದ್ದರೂ ಲಕ್ಷ್ಯ ಮಿಶ್ರಾ ದೇಹ ಛಿದ್ರವಾಗಿಲ್ಲ ಯಾಕೆ?
- ಕಿಟಕಿಯಿಂದ ಜಿಗಿಯಲು ಸಾಕಷ್ಟು ಅಂತರ ಇಲ್ಲ
- ಮೃತ ದೇಹ ಬಿದ್ದಿದ್ದ ಜಾಗದಲ್ಲಿ ಸ್ವಲ್ಪ ರಕ್ತ ಮಾತ್ರ ಕಂಡುಬಂದಿದೆ
ಈ ರೀತಿ ಕೆಲ ಸೂಕ್ಷ ಅನುಮಾನಗಳನ್ನು ಅಂಜನಿ ಕುಮಾರ್ ವ್ಯಕ್ತಪಡಿಸಿದ್ದು, ಹೀಗಾಗಿ ಮಗನ ಸಾವು ಕೊಲೆ ಅಥವಾ ಬೇರೆ ಕೃತ್ಯ ಇರಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದು, ಸದ್ಯ ತಂದೆ ದೂರಿನ ಮೇಲೆ UDR ದಾಖಲು ಮಾಡಿಕೊಂಡಿರುವ ಯಲಹಂಕ ಉಪನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಲಕ್ಷ್ಯ ಮಿಶ್ರಾ ಮರಣೋತ್ತರ ಪರೀಕ್ಷೆ ಮತ್ತು FSL ವರದಿಗಾಗಿ ಕಾದು ಕುಳಿತಿದ್ದಾರೆ. ಇನ್ನು ರಾತ್ರಿ 11.16ರ ಸುಮಾರಿಗೆ ಪ್ಯಾಸೇಜ್ನಲ್ಲಿ ಮೃತ ಲಕ್ಷ್ಯ ಓಡಾಡಿದ್ದು, ಈ ವೇಳೆ ನಾಲ್ಕೈದು ಹುಡುಗರು ಮತ್ತೊಂದು ರೂಮ್ಗೆ ಎಂಟ್ರಿಯಾಗಿದ್ದಾರೆ. ತದನಂತರ 2 ಗಂಟೆ ಸುಮಾರಿಗೆ ರೂಮ್ನಿಂದ ಹೊರಬಂದಿದ್ದ ವಿದ್ಯಾರ್ಥಿ ಮತ್ತೆ ಒಳಗೆ ಹೋಗಿದ್ದಾನೆ. ಹೀಗಾಗಿ ಈ ಅನುಮಾನಸ್ಪಾದ ಓಡಾಟ ಕೂಡ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಮೃತನ ಪೋಷಕರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




