64ನೇ ಬೆಂಗಳೂರು ಗಣೇಶೋತ್ಸವ: ಶೂನ್ಯ ತಾಜ್ಯ, ಪರಿಸರ ಸ್ನೇಹಿ ಆಚರಣೆಗೆ ಹೆಜ್ಜೆ
ಬೆಂಗಳೂರು ಗಣೇಶೋತ್ಸವ ಈ ಬಾರಿ 64ನೇ ಆವೃತ್ತಿಯಲ್ಲಿ ಶೂನ್ಯ ತ್ಯಾಜ್ಯ ಮತ್ತು ಸುಸ್ಥಿರ ಆಚರಣೆಗೆ ಒತ್ತು ನೀಡಿದೆ. 15 ವರ್ಷಗಳಿಂದ ಪ್ಲಾಸ್ಟಿಕ್ ಮುಕ್ತವಾಗಿದ್ದ ಉತ್ಸವದಲ್ಲಿ, ಬಿದಿರು, ಹುಲ್ಲು, ಜೇಡಿಮಣ್ಣು ಹಾಗೂ ಗಂಗಾ ನದಿ ಮಣ್ಣಿನಿಂದ ತಯಾರಿಸಿದ 21 ಅಡಿ ಎತ್ತರದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರಮುಖ ಆಕರ್ಷಣೆಯಾಗಿದೆ. ಶ್ರೀ ವಿದ್ಯಾರಣ್ಯ ಯುವಕ ಸಂಘವು ಈ ಪರಿಸರ ಕಾಳಜಿಯ ಆಚರಣೆಯನ್ನು ಆಯೋಜಿಸುತ್ತಿದೆ.

ಬೆಂಗಳೂರು, ಸೆ.8: ಕಳೆದ 15 ವರ್ಷಗಳಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ ಗಣೇಶೋತ್ಸವ ಆಚರಿಸಿಕೊಂಡು ಬಂದಿರುವ ‘ಬೆಂಗಳೂರು ಗಣೇಶೋತ್ಸವ’, ಈ ಬಾರಿ 64ನೇ ಆವೃತ್ತಿಯಲ್ಲಿ ಶೂನ್ಯ ತ್ಯಾಜ್ಯ ಸುಸ್ಥಿರ ಆಚರಣೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ. ತ್ಯಾಜ್ಯ ವಿಂಗಡಣೆ, ಮರುಬಳಕೆ ಮತ್ತು ಮರುಚಕ್ರಬಳಕೆಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಬಾರಿಯ ಉತ್ಸವದಲ್ಲಿ ಬಿದಿರು, ಹುಲ್ಲು ಹಾಗೂ ಜೇಡಿಮಣ್ಣಿನಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ತಯಾರಿಸಿದ ೨೧ ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿ ಪ್ರಮುಖ ಆಕರ್ಷಣೆಯಾಗಲಿದೆ.
ಶ್ರೀ ವಿದ್ಯಾರಣ್ಯ ಯುವಕ ಸಂಘವು ಗಣೇಶೋತ್ಸವವನ್ನು ಪರಿಸರ ಕಾಳಜಿಯೊಂದಿಗೆ ಆಚರಿಸಲು ಗಂಗಾ ನದಿಯಿಂದ ತಂದ ಮಣ್ಣು ಮತ್ತು ಮರಳನ್ನು ಬಳಸಿ ಈ ಗಣೇಶ ಮೂರ್ತಿಯನ್ನು ನಿರ್ಮಿಸುತ್ತಿದೆ.ಶ್ರೀ ವಿದ್ಯಾರಣ್ಯ ಯುವಕ ಸಂಘವು 1967 ರಿಂದಲೂ ಬೆಂಗಳೂರು ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಿಕೊಂಡು ಬರುತ್ತಿದೆ.
ಇದನ್ನೂ ಓದಿ: ಬೆಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇಟ್ಟ ಬಣ್ಣ ಬಣ್ಣದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಹೇಗಿವೆ ನೋಡಿ!
ಈ ಪರಿಸರ ಸ್ನೇಹಿ ಉಪಕ್ರಮಕ್ಕೆ ಪ್ರೋತ್ಸಾಹ ನೀಡಲು ಅರಣ್ಯ, ಜೈವಿಕ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ಉತ್ಸವ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈ ಪರಿಸರ ಸ್ನೇಹಿ ೨೧ ಅಡಿ ಗಣೇಶ ಮೂರ್ತಿಯನ್ನು ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪ್ರತಿಷ್ಠಾಪಿಸಲಾಗುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




