ಬೆಂಗಳೂರಿನಲ್ಲಿ ವಾಕಿಂಗ್ ಹೋದ ಮಹಿಳೆ 25 ಅಡಿ ಗುಂಡಿಗೆ ಬಿದ್ದು ಪರದಾಟ: ಪತ್ತೆ ಮಾಡಿ ರಕ್ಷಿಸಿದ್ದೇ ರೋಚಕ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ಅತ್ಯಂತ ರೋಚಕ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ವಾಕಿಂಗ್ ಹೋಗಿದ್ದ ವೇಳೆ ಸುಮಾರು 25 ಅಡಿ ಆಳದ ಗುಂಡಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 56 ವರ್ಷದ ಮಹಿಳೆಯನ್ನು ಪೊಲೀಸರು ಸಿನಿಮೀಯ ಮಾದರಿಯಲ್ಲಿ ರಕ್ಷಿಸಿದ್ದಾರೆ. ಮಹಿಳೆ 25 ಅಡಿ ಗುಂಡಿಗೆ ಬಿದ್ದಿದ್ದನ್ನು ಪೊಲೀಸರು ಪತ್ತೆ ಮಾಡಿ ರಕ್ಷಿಸಿದ್ದೇ ಒಂದು ರೋಚಕ.

ಬೆಂಗಳೂರು, (ಮಾರ್ಚ್ 06): ವಾಕಿಂಗ್ ಹೋಗಿದ್ದ ಮಹಿಳೆ 25 ಅಡಿ ಆಳದ ಗುಂಡಿಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ 56 ವರ್ಷದ ಮಹಿಳೆಯನ್ನು (Woman) ಬೆಂಗಳೂರಿನ (Bengaluru) ಚಂದ್ರಲೇಔಟ್ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. 56 ವರ್ಷದ ಮಹಿಳೆಯೊಬ್ಬರು ಇಂದು (ಮಾರ್ಚ್ 06) ವಾಕಿಂಗ್ ಹೋಗುವಾಗ ನಾಗರಭಾವಿ ಪಾರ್ಕ್ ಸಮೀಪದ ಸುಮಾರು 25 ಅಡಿ ಆಳದ ಗುಂಡಿಗೆ ಬಿದ್ದು ಮೇಲೆ ಬರಲಾಗದೇ ಒಳಗೆ ಅಪಾಯಕ್ಕೆ ಸಿಲುಕಿದ್ದರು. ಬಳಿಕ ಮಗ ತಾಯಿ ಮನೆಗೆ ಬರದಿರುವುದರಿಂದ ಆತಂಕಗೊಂಡು 112ಗೆ ಕರೆ ಮಾಡಿ ತಿಳಿಸಿದ್ದ. ಈ ಕರೆ ಬಳಿಕ ಅಲರ್ಟ್ ಆದ ಚಂದ್ರಲೇಔಟ್ ಪೊಲೀಸರು, ಮಹಿಳೆಯ ಮೊಬೈಲ್ ಲೋಕೇಷನ್ ಟ್ರೇಸ್ ಮಾಡಿ ಆಕೆಯನ್ನು ಹುಡುಕಿಕೊಂಡು ಹೋಗಿ ರಕ್ಷಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಧಾ ಪರಿಮಳ (56) ಎಂಬ ಮಹಿಳೆ ಮಾರ್ಚ್ 06ರ ಬೆಳಗಿನ ಜಾವ ನಾಗರಭಾವಿ ಪಾರ್ಕ್ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಅಗೆಯಲಾಗಿದ್ದ ಸುಮಾರು 25 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಗುಂಡಿ ತೀವ್ರ ಆಳವಾಗಿದ್ದರಿಂದ ಹೊರಬರಲು ಸಾಧ್ಯವಾಗದೆ ಸುಧಾ ಅವರು ಅಲ್ಲಿಯೇ ಪರದಾಡಿದ್ದಾರೆ. ಬೆಳಗಿನ ಜಾವವಾಗಿದ್ದರಿಂದ ಅಲ್ಲಿ ಜನಸಂಚಾರವೂ ವಿರಳವಾಗಿತ್ತು. ಗುಂಡಿಯೊಳಗೆ ಬಿದ್ದ ಆಘಾತದಿಂದ ಸುಧಾ ಅವರು ಅಲ್ಲೇ ಅಸ್ವಸ್ಥರಾಗಿದ್ದರು.
ಇದನ್ನೂ ಒದಿ: ಡಿಕೆ ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್ನಲ್ಲಿ ಸಿದ್ದರಾಮಯ್ಯ ಭರಪೂರ ಕೊಡುಗೆ
ಇತ್ತ ಸುಧಾ ಅವರು ಸಮಯಕ್ಕೆ ಸರಿಯಾಗಿ ಮನೆಗೆ ಮರಳದಿದ್ದಾಗ ಆತಂಕಗೊಂಡ ಮಗ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಂದ್ರಲೇಔಟ್ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ, ಮಹಿಳೆಯ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದ್ದಾರೆ. ಆಗ ಮಹಿಳೆಯ ಮೊಬೈಲ್ ಸಿಗ್ನಲ್ ನಾಗರಭಾವಿ ಪಾರ್ಕ್ ಬಳಿ ತೋರಿಸಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಪಾರ್ಕ್ ಬಳಿ ಅಗೆಯಲಾಗಿದ್ದ ಆಳವಾದ ಗುಂಡಿಯೊಳಗೆ ಮಹಿಳೆ ಅಸ್ವಸ್ಥರಾಗಿ ಬಿದ್ದಿರುವುದು ಕಂಡುಬಂದಿದ್ದು, ಕೂಡಲೇ ಪೊಲೀಸರು, ಸ್ಥಳೀಯ ಸಾರ್ವಜನಿಕರ ಸಹಾಯ ಪಡೆದ ಹರಸಾಹಸ ಪಟ್ಟು 25 ಅಡಿ ಆಳದ ಗುಂಡಿಯಿಂದ ಸುಧಾ ಅವರನ್ನು ಮೇಲೆತ್ತಿದ್ದಾರೆ. ಬಳಿಕ ಸ್ವಸ್ಥರಾಗಿದ್ದ ಸುಧಾ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರ ರೋಚಕ ಕಾರ್ಯಚರಣೆ ಕುಟುಂಬದವರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಗುಂಡಿ ಅಗೆದು ಹಾಗೆ ಬಿಟ್ಟು ಹೋಗಿರುವವರು ಯಾರು ಎನ್ನುವುದನ್ನು ಪೊಲೀಸರು ತನಿಖೆ ನಡೆಸಿದ್ದಾರೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
