ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಚಾಲನೆ: SIR ವೇಳೆ ಇದನ್ನು ಮಾನ್ಯ ದಾಖಲೆಯಾಗಿ ಪರಿಣಗಣಿಸಲಾಗುತ್ತದೆಯೇ?
Permanent Residence Certificate: ರಾಜ್ಯದಲ್ಲಿ ಮನೆ ಮನೆಗೆ ಶಾಶ್ವತ ನಿವಾಸ ಮತ್ತು ಜಾತಿ ಪ್ರಮಾಣ ಪತ್ರ ವಿತರಣೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿಸಿಎಂ ಡಾ.ಜಿ. ಪರಮೇಶ್ವರ್ ಚಾಲನೆ ನೀಡಿದ್ದಾರೆ. ಅಷ್ಟಕ್ಕೂ ಈ ಪ್ರಮಾಣ ಪತ್ರದ ಪ್ರಯೋಜನ ಏನು? ಎಸ್ಐಆರ್ ಪ್ರಕ್ರಿಯೆ ವೇಳೆ ಇದನ್ನು ಮಾನ್ಯ ದಾಖಲೆ ಎಂದು ಪರಿಗಣಿಸಲಾಗುತ್ತದೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಮುಖ್ಯಾಂಶಗಳು
- ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಕರ್ನಾಟಕದಲ್ಲಿ ಚಾಲನೆ
- SIR ಪ್ರಕ್ರಿಯೆಯಲ್ಲಿ ಪಿಆರ್ಸಿ ಮಾನ್ಯ ದಾಖಲೆ ಎಂದು ಪರಿಗಣನೆ?
- ಪರ್ಮನೆಂಟ್ ರೆಸಿಡೆನ್ಸ್ ಸರ್ಟಿಫಿಕೇಟ್ ಯಾವುದಕ್ಕೆಲ್ಲ ಉಪಯೋಗ?
ಬೆಂಗಳೂರು, ಜುಲೈ 20: ಮನೆ ಮನೆಗೆ ಜಾತಿ ಪ್ರಮಾಣ ಪತ್ರ ವಿತರಣೆ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿಸಿಎಂ ಡಾ.ಜಿ. ಪರಮೇಶ್ವರ್ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. ಬಿಜೆಪಿ ವಿರೋಧದ ನಡುವೆಯೂ ಶಾಶ್ವತ ನಿವಾಸ ಪತ್ರ ವಿತರಣೆಗೆ ಚಾಲನೆ ನೀಡಲಾಗಿದ್ದು, 4.85 ಕೋಟಿ ಕುಟುಂಬಗಳಿಗೆ ಇದರ ಪ್ರಯೋಜನ ದೊರೆಯಲಿದೆ. ದೇಶದಲ್ಲಿ ಯಾವ ಸರ್ಕಾರವೂ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.
ಶಾಶ್ವತ ನಿವಾಸ ಪ್ರಮಾಣ ಪತ್ರ ಪಡೆಯೋದೇಗೆ?
ಮನೆ-ಮನೆಗೆ ವಿತರಣೆ
ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ PDF ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ. ಈ ಪ್ರತಿಗಳನ್ನು ಮುದ್ರಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಪ್ರಮಾಣ ಪತ್ರ ವಿತರಿಸಿದ ಬಳಿಕ, ವಿತರಕರು ಮೊಬೈಲ್ ಸಂಖ್ಯೆಯನ್ನು ದಾಖಲಿಸಿ, ಆಪ್ ಮೂಲಕ ಒಟ್ಟು ವಿತರಣೆಯ ವಿವರಗಳನ್ನು ದಾಖಲಿಸುತ್ತಾರೆ.
ಇದನ್ನೂ ಓದಿ: ‘ಅಕ್ರಮ ವಲಸಿಗರಿಗೆ ಮಣೆ, ಭದ್ರತೆಗೆ ಧಕ್ಕೆ’; ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣ ಪತ್ರಕ್ಕೆ ತಡೆನೀಡಲು ಅಮಿತ್ ಶಾಗೆ ಶೋಭಾ ಪತ್ರ
ವೆಬ್ಸೈಟ್ ಮೂಲಕ ಉಚಿತ ಡೌನ್ ಲೋಡ್
ಸಾರ್ವಜನಿಕರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ವಿಶೇಷ ವೆಬ್ಸೈಟ್ ಅಭಿವೃದ್ಧಿಪಡಿಸಲಾಗಿದೆ. ಆರ್.ಡಿ. ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದು. https://nadakacheri.karnataka.gov.in/AJSKCertificates ಎಂಬುದು ವೆಬ್ಸೈಟ್ URL ಆಗಿದೆ.
ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳು
ಜಾತಿ ಪ್ರಮಾಣ ಪತ್ರವನ್ನು ಸಾರ್ವಜನಿಕರು ಸುಲಭವಾಗಿ ಡೌನ್ ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಲು ಪ್ರತಿ ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಜಾತಿ ಪ್ರಮಾಣ ಪತ್ರ ದಾಖಲೆಗಳ ಮುದ್ರಣವನ್ನು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು.
ವಾಟ್ಸ್ಆ್ಯಪ್/ ಎಸ್ಎಂಎಸ್ ಮೂಲಕ ಮಾಹಿತಿ
ಸುಮಾರು 85 ಲಕ್ಷ ಜಾತಿ ಪ್ರಮಾಣ ಪತ್ರಗಳನ್ನು ಈಗಾಗಲೇ ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದ್ದು ಸಂಬಂಧಿತ ಫಲಾನುಭವಿಗಳಿಗೆ ವಾಟ್ಸ್ಆ್ಯಪ್ಅಥವಾ SMS ಮೂಲಕ ಡೌನ್ಲೋಡ್ ಲಿಂಕ್ ಕಳುಹಿಸಲಾಗಿದೆ. ಇದರ ಮೂಲಕ ಅವರು ತಮ್ಮ ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಶಾಶ್ವತ ನಿವಾಸ ಪ್ರಮಾಣ ಪತ್ರದ ಸೇವೆಯನ್ನು ಸರ್ಕಾರವು ಆದ್ಯತೆಯ ಮೇರೆ ಆರಂಭಿಸಿದ್ದು, ಸಾರ್ವಜನಿಕರು ಅವಶ್ಯಕತೆಗೆ ತಕ್ಕಂತೆ ಶಾಶ್ವತ ಪ್ರಮಾಣ ಪತ್ರ ಪಡೆಯಲು ಹತ್ತಿರದ ನಾಡಕಚೇರಿಯಲ್ಲಿ ಅಥವಾ ಆನ್ಸೆನ್ ಮುಖಾಂತರ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು, ಉತ್ತರಗಳು (FAQ’s)
ಪ್ರಶ್ನೆ: ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ?
ಉತ್ತರ: ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್, ಅಟಲ್ ಜನಸ್ನೇಹಿ ಕೆಂದ್ರ (ಎಜೆಎಸ್ಕೆ) ಪೋರ್ಟಲ್ ಅಥವಾ ಸರ್ಕಾರ ಕಾಲಕಾಲಕ್ಕೆ ಅಧಿಸೂಚಿಸುವ ಇತರೆ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಶ್ನೆ: ಪರ್ಮನೆಂಟ್ ರೆಸಿಡೆನ್ಸ್ ಸರ್ಟಿಫಿಕೇಟ್ ಪಡೆಯಲು ಇರುವ ಮಾನದಂಡಗಳು ಏನು?
ಉತ್ತರ: ಕರ್ನಾಟಕದಲ್ಲಿ 10 ವರ್ಷಗಳ ವಾಸ, ರಾಜ್ಯದಲ್ಲಿ 10 ವರ್ಷಗಳ ಶಿಕ್ಷಣ ಅಥವಾ ರಾಜ್ಯದಲ್ಲಿ ಸ್ಥಿರ ಆಸ್ತಿ ಹೊಂದಿರಬೇಕು. ಈ ಅಂಶಗಳನ್ನು ಸಾಬೀತುಪಡಿಸಲು ಆಧಾರ್ ಕಾರ್ಡ್, ಪಡಿತರ ಚೀಟಿ, ಕಂದಾಯ ದಾಖಲೆಗಳು, ಮತದಾರರ ಪಟ್ಟಿ ಸೇರಿದಂತೆ ವಿವಿಧ ದಾಖಲೆಗಳನ್ನು ಸಲ್ಲಿಸಬಹುದು.
ಪ್ರಶ್ನೆ: ಶಾಶ್ವತ ನಿವಾಸ ಪ್ರಮಾಣಪತ್ರವನ್ನು(PRC) ಯಾವೆಲ್ಲ ಅಧಿಕಾರಿಗಳು ನೀಡಬಹುದು?
ಉತ್ತರ: ಕರ್ನಾಟಕದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಅಧಿಕೃತಗೊಳಿಸಲಾದ ತಹಶೀಲ್ದಾರ್ ಅಥವಾ ಉಪ ತಹಸೀಲ್ದಾರ್ ಅಥವಾ ಇತರೆ ಯಾವುದೇ ಅಧಿಕಾರಿ ಪ್ರಮಾಣಪತ್ರ ನೀಡುವ ಪ್ರಾಧಿಕಾರವಾಗಿರುತ್ತಾರೆ. ಸಹಾಯಕ ಆಯುಕ್ತರು (ಎಸಿ)ಮೇಲ್ಮನವಿ ಪ್ರಾಧಿಕಾರವಾಗಿದ್ದರೆ, ಜಿಲ್ಲಾಧಿಕಾರಿಗಳು ಪುನರ್ ಪರಿಶೀಲನಾ ಪ್ರಾಧಿಕಾರವಾಗಿರುತ್ತಾರೆ.
ಪ್ರಶ್ನೆ: ದೇಶದ ಎಲ್ಲೆಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲಾಗುತ್ತದೆ?
ಉತ್ತರ: ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ನಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲಾಗುತ್ತದೆ.
ಪ್ರಶ್ನೆ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಶಾಶ್ವತ ನಿವಾಸ ಪ್ರಮಾಣಪತ್ರ ಅರ್ಹ ದಾಖಲೆಯಾಗಿ ಮಾನ್ಯವಾಗಲಿದೆಯೇ?
ಉತ್ತರ: ಹೌದು. ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಶಾಶ್ವತ ನಿವಾಸ ಪ್ರಮಾಣಪತ್ರ ಅರ್ಹ ದಾಖಲೆಯಾಗಿ ಮಾನ್ಯವಾಗಲಿದೆ. ಪಶ್ಚಿಮ ಬಂಗಾಳದಲ್ಲಿನ ಎಸ್ಐಆರ್ ಪ್ರಕ್ರಿಯೆ ವೇಳೆ ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಪ್ರಶ್ನೆ: ಪರ್ಮನೆಂಟ್ ರೆಸಿಡೆನ್ಸ್ ಸರ್ಟಿಫಿಕೇಟ್ ಯಾವುದಕ್ಕೆಲ್ಲ ಉಪಯೋಗವಾಗುತ್ತೆ?
ಉತ್ತರ: ಪರ್ಮನೆಂಟ್ ರೆಸಿಡೆನ್ಸ್ ಸರ್ಟಿಫಿಕೇಟ್ ಕೇವಲ ಆಡಳಿತಾತ್ಮಕ ಉದ್ದೇಶದ ಪುರಾವೆಯಾಗಿದ್ದು, ಉದ್ಯೋಗ ಅಥವಾ ಭೂ ಮಂಜೂರಾತಿಯ ಮೀಸಲಾತಿಗೆ ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




