ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾತುಕತೆಗೆ ಪಟ್ಟು: ಸಾರಿಗೆ ನೌಕರರ ಸಂಧಾನ ವಿಫಲ
ಬೆಂಗಳೂರಿನಲ್ಲಿ ಸಾರಿಗೆ ನೌಕರರ ಸಂಧಾನ ಸಭೆ ವಿಫಲವಾಗಿದೆ. ಮೇ 20ರಂದು ಕರೆ ನೀಡಿರುವ ಮುಷ್ಕರದ ಬಗ್ಗೆ ಸಂಧಾನ ನಡೆಸಲು ಅಧಿಕಾರಿಗಳು ನಡೆಸಿದ ಚರ್ಚೆ ಫಲ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನೇರ ಮಾತುಕತೆಗೆ ಮುಖಂಡರು ಪಟ್ಟು ಹಿಡಿದಿದ್ದು, ಸಭೆ ನಡೆಸದಿದ್ದರೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಾರಿಗೆ ಸಚಿವರ ನೇತೃತ್ವದಲ್ಲಿ ನಾಳೆಯೇ (ಮೇ 19) ಸಭೆಗೆ ಆಗ್ರಹಿಸಲಾಗಿದೆ.

ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರ ಮುಷ್ಕರ ವಿಚಾರ ಸಂಬಂಧ ಬೆಂಗಳೂರಿನ (Bengaluru) ಬನ್ನೇರುಘಟ್ಟದ ಕಾರ್ಮಿಕ ಭವನದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಎಷ್ಟೇ ಮನವೊಲಿಕೆಗೆ ಯತ್ನಿಸಿದರೂ ಸಾರಿಗೆ ನೌಕರರು ಪಟ್ಟು ಬಿಟ್ಟಿಲ್ಲ. ನಿಗಮಗಳ ಅಧಿಕಾರಿಗಳ ಮನವಿಗೆ ಜಂಟಿ ಕ್ರಿಯಾ ಸಮಿತಿ ಕೊನೆಗೂ ಒಪ್ಪಿಗೆ ಸೂಚಿಸಿಲ್ಲ. ಮತ್ತೆ ಮೇ 25ಕ್ಕೆ ಸಭೆಗೆ ಬರಲು ಅಧಿಕಾರಿಗಳು ಆಹ್ವಾನ ನೀಡಿದರೂ ನಿಗಮದ ಅಧಿಕಾರಿಗಳ ಮನವಿಗೆ ಒಪ್ಪದ ಸಾರಿಗೆ ಮುಖಂಡರು, ಸಿಎಂ ಜೊತೆಗೆ ಸಭೆಗೆ ಪಟ್ಟು ಹಿಡಿದಿದ್ದಾರೆ. ಸಾರಿಗೆ ಸಚಿವರ ನೇತೃತ್ವದಲ್ಲಿ ನಾಳೆಯೇ ಸಭೆಗೆ ಆಗ್ರಹಿಸಿದ್ದಾರೆ.
‘ಸಭೆ ಮಾಡಿಲ್ಲ ಅಂದ್ರೆ ಮುಷ್ಕರ ಫಿಕ್ಸ್ ‘
ಕಾರ್ಮಿಕ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಗಂಟೆಗಟ್ಟಲೆ ಮಾತುಕತೆ ನಡೆಸಿದರೂ ಸಭೆ ಯಶಸ್ವಿಯಾಗಿಲ್ಲ. ಯಾವುದೇ ಮನವೊಲಿಕೆಗೂ ಬಗ್ಗದ ನೌಕರರು, ನಾಳೆ ಮಧ್ಯಾಹ್ನದ ಒಳಗಾಗಿ ಸಭೆ ಕರೆದು ಬೇಡಿಕೆ ಈಡೇರಿಕೆ ಸಂಬಂಧ ಮಾತನಾಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಸರ್ಕಾರ ಸದ್ಯದ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ವಿವರಿಸಿದರೂ, ಸಿಎಂ ಜೊತೆ ಸಭೆಗೆ ಸಾರಿಗೆ ನೌಕರರ ಸಂಘಟನೆ ಆಗ್ರಹಿಸಿದೆ. ಅಲ್ಲದೆ ಸಭೆ ಮಾಡಿಲ್ಲ ಅಂದ್ರೆ ಮುಷ್ಕರ ಫಿಕ್ಸ್ ಎಂದು ವಾರ್ನಿಂಗ್ ಕೂಡ ನೀಡಿದೆ.
ಇದನ್ನೂ ಓದಿ: ಮೇ 20ರಂದು ಸಾರಿಗೆ ನೌಕರರ ಮುಷ್ಕರ, ಸಿಬ್ಬಂದಿಗೆ ಖಡಕ್ ಎಚ್ಚರಿಕೆ ಕೊಟ್ಟ KSRTC
2012ರಲ್ಲಿ ತಡರಾತ್ರಿ 2 ಗಂಟೆವರೆಗೂ ಮೀಟಿಂಗ್ ನಡೆದಿದೆ. ಸಾರಿಗೆ ಸಚಿವರ ಅಧ್ಯಕ್ಷತೆಯ ಸಭೆಗೆ ನಾವು ಸಿದ್ಧರಾಗಿದ್ದೇವೆ. ಮುಖ್ಯಮಂತ್ರಿ ಸಭೆ ನಡೆಸಿದ್ರೂ ನಾವು ಸಭೆಗೆ ಬರುತ್ತೇವೆ. ಸರ್ಕಾರದ ಸೂಚನೆಗಾಗಿ ಜಂಟಿ ಕ್ರಿಯಾ ಸಮಿತಿ ಕಾಯುತ್ತಿದೆ. ಕೋರ್ಟ್ ಹೇಳಿದರೂ ನಾವು ಅದರ ಬಗ್ಗೆ ಚರ್ಚೆ ಮಾಡ್ತೇವೆ. ಈ ಬಾರಿ ಸರ್ಕಾರ ಏನೇ ಬೆದರಿಕೆ ಹಾಕಿದ್ರೂ ನಾವು ಬಗ್ಗಲ್ಲ. ಎಲ್ಲ ಸಾರಿಗೆ ಮುಖಂಡರು ಒಗ್ಗಟ್ಟಿನಿಂದ ಭಾಗವಹಿಸಬೇಕಿದ್ದು, ಸರ್ಕಾರಕ್ಕೆ ನಾವು ಯಾವುದೇ ಡೆಡ್ಲೈನ್ ಕೊಡುವುದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ.
ನಾಳೆ ಸುದ್ದಿಗೋಷ್ಠಿ
ಈ ನಡುವೆ ನಾಳೆ (ಮೇ 19) ಬೆಳಿಗ್ಗೆ 11.30ಕ್ಕೆ ಸಂಪಂಗಿರಾಮನಗರದ ಕಚೇರಿಯಲ್ಲಿ ಜಂಟಿ ಕ್ರಿಯಾ ಸಮಿತಿಯ CITU ರಾಜ್ಯ ಸಮಿತಿ ಬಣದಿಂದ ಸುದ್ದಿಗೋಷ್ಠಿ ಕೂಡ ಕರೆಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:17 pm, Mon, 18 May 26

