ಪೀಣ್ಯ ಫ್ಲೈ ಓವರ್ : ಇನ್ನೂ ಒಂದೂವರೆ ವರ್ಷ ವಾಹನ ಸವಾರರಿಗೆ ತಪ್ಪಲ್ಲ ಟ್ರಾಫಿಕ್ ಸಂಕಷ್ಟ
ದುರಸ್ತಿಗಾಗಿ ಹಲವು ತಿಂಗಳಿಂದ ಬಂದ್ ಆಗಿದ್ದ ಪೀಣ್ಯ ಫ್ಲೈ ಓವರ್ ನಲ್ಲಿ ಕಳೆದ ಜುಲೈನಿಂದ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಲಾಗಿತ್ತು. ಪದೇ ಪದೇ ಟ್ರಾಫಿಕ್ ಸಮಸ್ಯೆಯಿಂದ ಸದ್ದುಮಾಡುತ್ತಿರುವ ಪೀಣ್ಯ ಫ್ಲೈ ಓವರ್ ಇದೀಗ ಮತ್ತೆ ವಾಹನ ಸವಾರರಿಗೆ ಶಾಕ್ ನೀಡಲು ಸಜ್ಜಾಗಿದೆ. ಭಾರೀ ವಾಹನಗಳಿಗೆ ಹೇರಿದ್ದ ನಿರ್ಬಂಧ ತೆರವಾಗೋಕೆ ಇನ್ನೂ ಒಂದೂವರೆ ವರ್ಷ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಇತ್ತ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯಿಂದ ಸದ್ಯಕ್ಕೆ ಮುಕ್ತಿ ಇಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.

ಬೆಂಗಳೂರು, (ಫೆಬ್ರವರಿ 17): ಸದ್ಯ ಫ್ಲೈ ಓವರ್ ಗೆ ಕೇಬಲ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಭಾರೀ ವಾಹನಗಳ ಸಂಚಾರಕ್ಕೆ ಪೂರ್ಣ ಅನುಮತಿ ಸಿಗುತ್ತೆ ಅಂದುಕೊಂಡಿದ್ದವರಿಗೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಫ್ಲೈ ಓವರ್ ಕೇಬಲ್ ದುರಸ್ತಿ ಬೆನ್ನಲ್ಲೆ ವಾರದ ನಾಲ್ಕು ದಿನಗಳ ಕಾಲ ಮಾತ್ರ ಬಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಲಾಗಿದ್ದು, ಶುಕ್ರವಾರ ಹಾಗೂ ಶನಿವಾರ ಬಾರೀ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಸದ್ಯ ಈ ನಿರ್ಬಂಧ ಶೀಘ್ರದಲ್ಲೇ ತೆರವಾಗುತ್ತೆ ಎಂದು ಕಾದುಕುಳಿತಿದ್ದ ವಾಹನ ಸವಾರರಿಗೆ ಇದೀಗ ಸಂಚಾರಿ ಪೊಲೀಸರು ಮತ್ತೆ ಶಾಕ್ ಕೊಟ್ಟಿದ್ದಾರೆ. ಸದ್ಯ ಪೀಣ್ಯ ಫ್ಲೈ ಓವರ್ ನಲ್ಲಿ ಪ್ರತಿ ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗ್ಗೆ ತನಕ ಬಾರೀ ವಾಹನಗಳಿಗೆ ನಿರ್ಬಂಧ ಇದ್ದು ಇನ್ನೂ ಒಂದೂವರೆ ವರ್ಷ ಇದೇ ನಿರ್ಬಂಧ ಹೇರಲು ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ
ಸದ್ಯ ಪೀಣ್ಯ ಫ್ಲೈ ಓವರ್ ನಲ್ಲಿ ಎಲ್ಲಾ ಪಿಲ್ಲರ್ ಗಳ ಮಧ್ಯೆ ತಲಾ ಎರಡರಂತೆ 240 ಕೇಬಲ್ ಗಳನ್ನ ಅಳವಡಿಸಲಾಗಿತ್ತು, ಎರಡನೇ ಹಂತದಲ್ಲಿ ಎರಡು ಪಿಲ್ಲರ್ ಮಧ್ಯೆ ತಲಾ 10 ರಂತೆ 1200 ಕೇಬಲ್ ಗಳನ್ನ ಬದಲಾಯಿಸಲಾಗಿದ್ದು, ಈಗಾಗಲೇ 300 ಕೇಬಲ್ ಅಳವಡಿಸಲಾಗಿದೆ. ಆದ್ರೆ ಇದೀಗ ಬಾಕಿ ಕೇಬಲ್ ಗಳ ಅಳವಡಿಕೆಗೆ ಇನ್ನೂ ಒಂದೂವರೆ ವರ್ಷ ಸಮಯ ಬೇಕಾಗಿದ್ದು, ಇತ್ತ ಕೇಬಲ್ ಅಳವಡಿಕೆ ಬಳಿಕ IISC ತಜ್ಞರು ಪರಿಶೀಲಿಸಿ ರಿಪೋರ್ಟ್ ಕೊಟ್ಟರಷ್ಟೇ ಪೂರ್ಣ ಪ್ರಮಾಣದವರೆಗೆ ಬಾರೀ ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ.
ಇನ್ನು ಫ್ಲೈ ಓವರ್ ಮೇಲೆ ಪದೇ ಪದೇ ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸವಾರರು ಕಂಗಾಲಾಗಿದ್ದು, ಇತ್ತ ಏನೆಲ್ಲ ಸರ್ಕಸ್ ಮಾಡಿದ್ರೂ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕೊಡದ ಸರ್ಕಾರದ ವಿರುದ್ಧ ವಾಹನ ಸವಾರರು ಕಿಡಿಕಾರುತ್ತಿದ್ದಾರೆ. ದುರಸ್ತಿ ಆಯ್ತು, ಈಗ ಈ ಫ್ಲೈ ಓವರ್ ಪದೇ ಪದೇ ಒಂದಿಲ್ಲೊಂದು ರೀತಿ ಸಮಸ್ಯೆ ತಂದಿಡುತ್ತಿದೆ ಅಂತಿರೋ ಸವಾರರು, ಫ್ಲೈ ಓವರ್ ಗುಣಮಟ್ಟ ಹೇಗಿದೆ ಅನ್ನೋದನ್ನ ಎಲ್ಲೆಡೆ ಪರಿಶೀಲಿಸಬೇಕು ಅಂತಿದ್ದಾರೆ.
ಸದ್ಯ ಹಲವು ಜಿಲ್ಲೆಗಳ ಜೊತೆಗೆ ರಾಜಧಾನಿಯನ್ನ ಸಂಪರ್ಕಿಸುವ ಕೊಂಡಿಯಂತಿರೋ ಪೀಣ್ಯ ಫ್ಲೈ ಓವರ್ ದಿನಕ್ಕೊಂದು ಸಮಸ್ಯೆ ಹೊತ್ತು ಸದ್ದುಮಾಡ್ತಿದೆ. ಅತ್ತ ಸಾಲು ಸಾಲು ಅಪಘಾತಗಳು, ಟ್ರಾಫಿಕ್ ಜಂಜಾಟದಿಂದ ಜನರ ನಿದ್ದೆಗೆಡಿಸಿರೋ ಫ್ಲೈ ಓವರ್ ಮೇಲೆ ಇದೀಗ ಬಾರೀ ವಾಹನಗಳ ಸಂಚಾರಕ್ಕೂ ಸಮಯ ಕೂಡಿ ಬರಬೇಕಿದ್ದು, ಟ್ರಾಫಿಕ್ ಕಿರಿಕಿರಿಯಿಂದ ಯಾವಾಗ ಮುಕ್ತಿ ಸಿಗುತ್ತೆ ಅಂತಾ ವಾಹನ ಸವಾರರು ಕಾದುಕುಳಿತಿದ್ದಾರೆ.
ವರದಿ: ಶಾಂತಮೂರ್ತಿ,ಟಿವಿ9,ಬೆಂಗಳೂರು