ಡೆಂಗ್ಯೂ, ಚಿಕುನ್ ಗುನ್ಯಾ ಜತೆ ಬೆಂಗಳೂರನ್ನು ಕಾಡುತ್ತಿದೆ ಇಲಿ ಜ್ವರದ ಆತಂಕ: ವೈದ್ಯರು ನೀಡಿದ ಮುನ್ನೆಚ್ಚರಿಕೆ ಸಲಹೆಗಳು ಇಲ್ಲಿವೆ

ಮಳೆಗಾಲದ ಜೊತೆ ಜೊತೆಗೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಾಂಕ್ರಾಮಿಕ ಖಾಯಿಲೆಗಳು ಲಗ್ಗೆ ಇಟ್ಟಿವೆ. ರಾಜಧಾನಿಯಲ್ಲಿ ಈಗಾಗಲೆ ಜನರನ್ನ‌ ಡೆಂಗ್ಯೂ ಕಾಡ್ತಿದೆ. ಇಡೀ ರಾಜ್ಯಕ್ಕೆ ಹೋಲಿಸಿದ್ರೆ ಡೆಂಗ್ಯೂನ ಪ್ರಕರಣಗಳಲ್ಲಿ ಸಿಂಹಪಾಲು ಬೆಂಗಳೂರಿನದ್ದಾಗಿದೆ. ಹೀಗಿರುವಾಗ ನಗರಕ್ಕೆ ಮತ್ತೊಂದು ಭೀತಿ ಶುರುವಾಗಿದೆ.

ಡೆಂಗ್ಯೂ, ಚಿಕುನ್ ಗುನ್ಯಾ ಜತೆ ಬೆಂಗಳೂರನ್ನು ಕಾಡುತ್ತಿದೆ ಇಲಿ ಜ್ವರದ ಆತಂಕ: ವೈದ್ಯರು ನೀಡಿದ ಮುನ್ನೆಚ್ಚರಿಕೆ ಸಲಹೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on:Jul 18, 2024 | 12:20 PM

ಬೆಂಗಳೂರು, ಜುಲೈ.18: ಈಗಾಗಲೇ ರಾಜ್ಯದಲ್ಲಿ ಡೆಂಗ್ಯೂ (Dengue) ಆರ್ಭಟ ಶುರುವಾಗಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹರಸಾಹಸ ಪಡ್ತಿದೆ. ಇದೆಲ್ಲದರ ಆತಂಕದ ಮಧ್ಯೆ ಇಲಿ ಜ್ವರದ (Rat Fever) ಆತಂಕ ಶುರುವಾಗಿದೆ. ಮಳೆ ಶುರುವಾಗುತ್ತಿದ್ದಂತೆ ಇಲಿಗಳಿಂದ ಹರಡುವ ಇಲಿ ಜ್ವರ ಬರುವ ಸಾಧ್ಯತೆ ಇದ್ದು ರಾಜಧಾನಿಯ ವೈದ್ಯರು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಇಲಿ ಜ್ವರದ ಲಕ್ಷಣಗಳೇನು?

ಇಲಿಗಳಿಂದ ಲೆಪ್ಟೊಸ್ಪೈರೋಸಿಸ್ ಅಂದ್ರೆ ಇಲಿ ಜ್ವರ ಕಾಣಿಸಿಕೊಳ್ಳುತ್ತದೆ. ಬೆಂಗಳೂರು ವೈದ್ಯರು ಇಲಿ ಜ್ವರದ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಇಲಿಯ ಎಂಜಲು, ಮೂತ್ರ, ಮಲ ಅಥವಾ ಅದರ ದೇಹದ ಯಾವುದೇ ದ್ರವ ಮಾನವನ ಚರ್ಮಕ್ಕೆ ತಾಗುವುದರಿಂದ ಈ ಸೋಂಕು ಹರಡುತ್ತದೆ. ತಲೆನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಅಥವಾ ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆಗಳು, ತೀವ್ರ ಜ್ವರ ಲಕ್ಷಣಗಳಾದರೆ, ಸೋಂಕು ಉಂಟಾದ ಎರಡು ದಿನಗಳ ನಂತರ ಕೀಲುನೋವು ಕಂಡುಬರುತ್ತಿದ್ದು ಈ ಲಕ್ಷಣ ಕಂಡು ಬಂದರೆ ಎಚ್ಚರ ವಹಿಸಿ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರು ನೀಡಿದ ಸಲಹೆಗಳೇನು?

ಡೆಂಗ್ಯೂ, ಚಿಕುನ್ ಗುನ್ಯಾ ಅನೇಕ ವೈರಲ್ ಖಾಯಿಲೆಗಳ ನಡುವೆ ಈಗ ಮತ್ತೊಂದು ಆತಂಕ ಕಂಡು ಬರ್ತಿದೆ. ಮಳೆಗಾಲದಲ್ಲಿ ಮನೆಯ ಸಂಪ್​ಗಳು ನೀರಿನ ಬಗ್ಗೆ ಎಚ್ಚರ ವಹಿಸಿ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯೆ ರೇಖಾ ಎಚ್ಚರಿಕೆ ನೀಡಿದ್ದಾರೆ. ಮಳೆಗಾಲದಲ್ಲಿ ಇಲಿ ಜ್ವರ ಹೆಚ್ಚಾಗಲಿದೆ. ಕಳೆದ ವರ್ಷ ನಗರದಲ್ಲಿ ಸುಮಾರು 100ಕ್ಕೂ ಹೆಚ್ಚು ಇಲಿ ಜ್ವರದ ಪ್ರಕರಣ ದಾಖಲಾಗಿದ್ದವು. ಈ ವರ್ಷ ಮಳೆಗಾಲದ ಆರಂಭದಲ್ಲೇ ಇಲಿ ಜ್ವರ ಪತ್ತೆಯಾಗ್ತೀವೆ. ಈ ಹಿನ್ನೆಲೆ ಆಸ್ಪತ್ರೆಗಳಲ್ಲಿ ಇಲಿಜ್ವರ ಚಿಕಿತ್ಸೆಗೆ ಸಿದ್ದತೆ ಶುರುವಾಗಿದೆ. ಈಗಾಗಲೇ ಹಾವೇರಿಯಲ್ಲಿ ಇಲಿಜ್ವರಕ್ಕೆ ಒಂದು ಬಲಿಯಾಗಿದೆ. ಇಲಿಗಳಿಂದ ದೂರ ಇರಿ ಎಂದು ಡಾ.ರೇಖಾ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಳೆಗಾಲದಲ್ಲಿಯೂ ನೀರಿಗಾಗಿ ನಿಲ್ಲದ ಪರದಾಟ, ಜಲಮಂಡಳಿ ವಿರುದ್ಧ ಜನರ ಆಕ್ರೋಶ

ಇಲಿ ಜ್ವರ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು?

ಇನ್ನು ವಾಂತಿ ಬೇಧಿ, ಮೈ ಮೇಲೆ ಗುಳ್ಳೆಗಳು ಬಂದ್ರೆ ವೈದ್ಯರನ್ನ ಸಂಪರ್ಕಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಿಸುವಂತೆ ಹೇಳಿದ್ದಾರೆ. ಇಲಿ ಜ್ವರವನ್ನ ನೈರ್ಮಲ್ಯ, ಪರಿಸರ ನಿರ್ವಹಣೆ ಮತ್ತು ಅಪಾಯದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ತಡೆಗಟ್ಟಬಹುದಾಗಿದೆ. ಮನೆಯಲ್ಲಿ ಅಥವಾ ಉಗ್ರಾಣಗಳಲ್ಲಿ ಆಹಾರ ಪದಾರ್ಥಗಳು, ದವಸ ಧಾನ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಬಿಸಿ ನೀರು ಸೇವನೆ ಮಾಡುವ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ.

ರಾಜ್ಯದಲ್ಲಿ ದಾಖಲೆಯ ಡೆಂಗ್ಯೂ ಕೇಸ್

ಇನ್ನು ಮತ್ತೊಂದೆಡೆ ಡೆಂಗ್ಯೂ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಹತ್ತು ಸಾವಿರ ಗಡಿ ದಾಟಿ ಕೇಸ್ ಗಳು ಮುನ್ನುಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿಯೇ ಡೆಂಗ್ಯೂ ಕೇಸ್ ಸಿಂಗಪಾಲು ಪಡೆದಿದೆ. ಜುಲೈ 9ರಂದು ರಾಜ್ಯದಲ್ಲಿ 185 ಕೇಸ್​ಗಳು ಪತ್ತೆಯಾಗಿದ್ದವು. ಬಿಬಿಎಂಪಿ ವ್ಯಾಪ್ತಿಯಲ್ಲಿ 91 ಕೇಸ್​ಗಳು ಪತ್ತೆಯಾಗಿದ್ದವು. ಜುಲೈ 10ರಂದು ರಾಜ್ಯದಲ್ಲಿ 293, ಬಿಬಿಎಂಪಿ ವ್ಯಾಪ್ತಿಯಲ್ಲಿ 118 ಕೇಸ್​ಗಳು ಪತ್ತೆಯಾಗಿದ್ದವು. ಜುಲೈ 11ರಂದು ರಾಜ್ಯದಲ್ಲಿ 381, ಬಿಬಿಎಂಪಿ ವ್ಯಾಪ್ತಿಯಲ್ಲಿ 171. ಜುಲೈ 12ರಂದು ರಾಜ್ಯದಲ್ಲಿ 437, ಬಿಬಿಎಂಪಿ ವ್ಯಾಪ್ತಿಯಲ್ಲಿ 165 ಕೇಸ್​ಗಳು ಸಿಕ್ಕಿದ್ದವು. ಇನ್ನು ಜುಲೈ 16ರಂದು ರಾಜ್ಯದಲ್ಲಿ 487, ಬಿಬಿಎಂಪಿ ವ್ಯಾಪ್ತಿಯಲ್ಲಿ 128 ಕೇಸ್​ಗಳು ದಾಖಲಾಗಿವೆ. ಸದ್ಯ ಈಗ ಒಟ್ಟು ರಾಜ್ಯದಲ್ಲಿ 6679, ಬಿಬಿಎಂಪಿ ವ್ಯಾಪ್ತಿಯಲ್ಲಿ 3770 ಸೇರಿ ಒಟ್ಟು 10,449 ಕೇಸ್​ಗಳು ಪತ್ತೆಯಾಗಿವೆ.

ಒಟ್ನಲ್ಲಿ ನಗರದಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ ನಡುವೆ ಈಗ ಇಲಿ ಜ್ವರದ ಆತಂಕ ಎದುರಾಗಿದೆ.. ಆರೋಗ್ಯ ಇಲಾಖೆ ಪ್ರಕರಣಗಳು ಹೆಚ್ಚುವ ಮುನ್ನಾ ಮುಂಜಾಗೃತೆ ವಹಿಸಬೇಕಿದೆ. ಜನರು ಕೂಡಾ ತಮ್ಮ ಮನೆಗಳ ಬಳಿ ಸ್ವಚ್ಛತೆ ಕಾಪಾಡಿದ್ರೆ, ಡೆಂಗ್ಯೂ, ಚಿಕುನ್ ಗುನ್ಯಾ, ಇಲಿ ಜ್ವರದಿಂದ ದೂರ ಉಳಿಯಬಹುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:52 am, Thu, 18 July 24