ಜೆಪ್ಟೋ ಡೆಲಿವರಿ ಪಾರ್ಟ್ನರ್ನಿಂದ ಕಿರುಕುಳ: ವಿಡಿಯೋ ಹಂಚಿಕೊಂಡು ಮಹಿಳೆ ಗಂಭೀರ ಆರೋಪ
ಬೆಂಗಳೂರಿನಲ್ಲಿ ಜೆಪ್ಟೋ ಡೆಲಿವರಿ ಸಿಬ್ಬಂದಿ ನೀರು ಕೇಳುವ ನೆಪದಲ್ಲಿ ಮನೆ ಒಳಗೆ ಬರಲು ಒತ್ತಾಯಿಸಿ ಕಿರುಕುಳ ನೀಡಿದ ಘಟನೆಯನ್ನು ಮಹಿಳೆಯೊಬ್ಬರು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗೇಟ್ ಮುಚ್ಚಲು ಮುಂದಾದಾಗ ಆತ ಮತ್ತೆ ಇದೇ ರೀತಿ ವರ್ತನೆ ಪುನರಾವರ್ತಿಸಿದ್ದು, ಇದರಿಂದ ಭಯಗೊಂಡು ಮನೆಯ ಬಾಗಿಲು ಮುಚ್ಚಿಕೊಂಡು ಒಳಗೇ ಇದ್ದೆ ಎಂಬ ಕರಾಳ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ.

ಮುಖ್ಯಾಂಶಗಳು
- ಜೆಪ್ಟೋ ಡೆಲಿವರಿ ಪಾರ್ಟ್ನರ್ನಿಂದ ಕಿರುಕುಳ ಆರೋಪ
- ವಿಡಿಯೋ ಹಂಚಿಕೊಂಡು ಮಹಿಳೆಯಿಂದ ಮಾಹಿತಿ
- ಮನೆಯೊಳಗೆ ಬರಲಾ ಎಂದು ಪೀಡಿಸಿದನಾ ವ್ಯಕ್ತಿ?
ಬೆಂಗಳೂರು, ಜುಲೈ 31: ಜೆಪ್ಟೋ ಡೆಲಿವರಿ ಪಾರ್ಟ್ನರ್ ಒಬ್ಬರು ಮನೆಗೆ ಬಂದ ಬಳಿಕ ಪದೇ ಪದೇ ಒಳಗೆ ಬರಬಹುದಾ ಎಂದು ವಿನಂತಿಸುವ ಮೂಲಕ ಭಯ ಹುಟ್ಟಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಈ ಕುರಿತು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು ಘಟನೆ ಬಗ್ಗೆ ಎಳೆ ಳೆಯಾಗಿ ಮಾಹಿತಿ ನೀಡಿದ್ದಾರೆ. ಜೆಪ್ಟೋ ಸಂಸ್ಥೆ ಸಂಬಂಧಿತ ಡೆಲಿವರಿ ಪಾರ್ಟ್ನರ್ ಮೇಲೆ ನಿರ್ಬಂಧ ಹೇರಿದ್ದು, ಆತನ ಐಡಿಯನ್ನು ರದ್ದುಪಡಿಸಿದೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.
ಘಟನೆ ಏನು?
View this post on Instagram
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಹಿಳೆ ನೀಡಿರುವ ಮಾಹಿತಿ ಪ್ರಕಾರ, ಡೆಲಿವರಿ ಪಾರ್ಟ್ನರ್ ಮನೆಗೆ ಆರ್ಡರ್ ತಲುಪಿಸಿದ ಬಳಿಕ ಕುಡಿಯಲು ನೀರು ಕೇಳಿದ್ದ. ಈ ವೇಳೆ ಮಹಿಳೆ ಒಂದು ಬಾಟಲ್ ನೀರು ನೀಡಿದ್ದು, ಅದನ್ನು ಇಟ್ಟುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಆದರೆ, ಬಾಟಲಿಯಲ್ಲಿದ್ದ ನೀರು ಕುಡಿದ ಬಳಿಕ ಆತ ಮತ್ತೆ ಬಂದು ಇನ್ನಷ್ಟು ನೀರನ್ನು ಆತ ಕೇಳಿದ್ದು, ಸತತ ಐದು ನಿಮಿಷ ಮನೆ ಒಳಗೆ ಬರಲು ಅವಕಾಶ ನೀಡುವಂತೆ ಪದೇ ಪದೇ ಮನವಿ ಮಾಡಿದ್ದ ಎಂಬುದಾಗಿ ಅವರು ಆರೋಪಿಸಿದ್ದಾರೆ. ಇದನ್ನು ತಾನು ನಿರಾಕರಿಸಿದ್ದು, ಹೊರಗಡೆಯಲ್ಲೇ ಸಾಕಷ್ಟು ಜಾಗವಿದ್ದು ಅಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದರೂ ಆತ ಮನೆ ಒಳಗೆ ಬಿಡುವಂತೆ ಒತ್ತಾಯಿಸುತ್ತಲೇ ಇದ್ದ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಹೋಟೆಲ್ ಮಾಲೀಕರಿಂದ ‘ಸ್ವಿಗ್ಗಿ’ಗೆ ಶಾಕ್: ಆ.15 ರ ನಂತರ ಫುಡ್ ಡೆಲಿವರಿ ಸ್ಥಗಿತಗೊಳಿಸಲು ನಿರ್ಧಾರ
ಗೇಟ್ ಮುಚ್ಚಲು ಮುಂದಾದಾಗ ಆತ ಮತ್ತೆ ಇದೇ ರೀತಿ ಹೇಳಿಕೆಗಳನ್ನು ಪುನರಾವರ್ತಿಸಿದ್ದು, ಇದರಿಂದ ಭಯಗೊಂಡು ಮನೆಯ ಬಾಗಿಲು ಮುಚ್ಚಿಕೊಂಡು ಒಳಗೇ ಇದ್ದೆ. ಬಳಿಕ ಆತ ಗೇಟ್ ಬಡಿದು ಗದ್ದಲ ಮಾಡಲಾರಂಭಿಸಿದ ಎಂದು ಮಹಿಳೆ ಹೇಳಿದ್ದಾರೆ. ಡೆಲಿವರಿ ಪಾರ್ಟ್ನರ್ನ ವೈಯಕ್ತಿಕ ವಿವರಗಳು ನನ್ನ ಬಳಿ ಇರಲಿಲ್ಲ. ಅದಕ್ಕಾಗಿಯೇ ನಾನು ಪೊಲೀಸರಿಗೆ ದೂರು ನೀಡಲಿಲ್ಲ ಎಂಬುದಾಗಿಯೂ ಅವರು ತಿಳಿಸಿದ್ದಾರೆ. ಇದೇ ತಿಂಗಳ ಆರಂಭದಲ್ಲಿ, ಫ್ಲಿಪ್ಕಾರ್ಟ್ ಡೆಲಿವರಿ ಸಿಬ್ಬಂದಿಯೊಬ್ಬರು ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಫ್ಲ್ಯಾಟ್ಗೆ ಅನುಮತಿಯಿಲ್ಲದೆ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧಿತರಾಗಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರೋದು ಆತಂಕಕ್ಕೆ ಕಾರಣವಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:40 pm, Fri, 31 July 26




