ಕುಡುಕರ ಅಡ್ಡೆಯಾಗಿ ಮಾರ್ಪಟ್ಟ ಕಾರಂಜಾ ಜಲಾಶಯ: ಇಲ್ಲಿ ಹೇಳೋರಿಲ್ಲ, ಕೇಳೋರೂ ಇಲ್ಲ!
ಬೀದರ್ನ ಜೀವನಾಡಿ ಕಾರಂಜಾ ಜಲಾಶಯವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. 8 ಜನ ಭದ್ರತಾ ಸಿಬ್ಬಂದಿಯಿದ್ದರೂ ಸೂಕ್ತ ಕಾವಲಿಲ್ಲದೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಅಳಲು.

ಬೀದರ್, ಆಗಸ್ಟ್ 27: ಬೀದರ್ (Bidar) ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ (Karanja Dam) ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಡ್ಯಾಂಗೆ ಯಾರು ಬೇಕಾದರೂ ಹೋಗಬಹುದು, ಏನು ಬೇಕಾದರೂ ಮಾಡಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿ ಬ್ಯಾಲಹಳ್ಳಿ ಗ್ರಾಮದ ಬಳಿಯ ಜಲಾಶಯಕ್ಕೆ ಅಭದ್ರತೆ ಕಾಡುತ್ತಿದ್ದು, ಇದರ ಜವಾಬ್ದಾರಿ ಹೊರಬೇಕಿದ್ದ ನೀರಾವರಿ ಇಲಾಖೆ ಅಧಿಕಾರಿಗಳು ಎಲ್ಲವನ್ನೂ ಕಂಡೂ ಕಾಣದಂತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಕೆಲಸಕ್ಕೇ ಬಾರದ ಭದ್ರತಾ ಸಿಬ್ಬಂದಿ!

ಬಟ್ಟೆ ತೊಳೆದಿರುವುದು
ಡ್ಯಾಂ ಭದ್ರತೆಗೆಂದು 8 ಜನ ಸಿಬ್ಬಂದಿ ಇದ್ದರೂ ಅವರ್ಯಾರೂ ಕೆಲಸಕ್ಕೇ ಬರುತ್ತಿಲ್ಲ. ತಮ್ಮ ಕರ್ತ್ಯವ್ಯ ನಿರ್ವಹಿಸಿದೆಯೇ ಸಂಬಳ ಪಡೆಯುತ್ತಿದ್ದಾರೆ. ಹೀಗಾಗಿ ಯಾರು ಬೇಕಾದರೂ ಡ್ಯಾಂ ಪರಿಸರಕ್ಕೆ ಹೋಗಿ ಬರಬಹುದು. ಅವರನ್ನು ಕೇಳುವವರು ಅಲ್ಲಿ ಯಾರೂ ಇಲ್ಲ. ರಾತ್ರಿಯಾದರೆ ಸಾಕು ಪುಂಡಪೋಕರಿಗಳು ಡ್ಯಾಂನೊಳಗೆ ಹೋಗಿ ಮದ್ಯದ ಪಾರ್ಟಿ ಮಾಡೋದಲ್ಲದೆ ಅಲ್ಲೇ ಮಲಗಿ ಬೆಳಿಗ್ಗೆ ಹಿಂದಿರುಗುತ್ತಿದ್ದಾರೆ. ಸಾಲದ್ದಕ್ಕೆ ಡ್ಯಾಂನ ಅಕ್ಕಪಕ್ಕದಲ್ಲಿರುವ ಗ್ರಾಮಸ್ಥರು ನೀರಿಗೆ ಇಳಿದು ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು ಮಾಡುತ್ತಿದ್ದಾರೆ.
ಇದನ್ನೂ ಓದಿ: ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ 3.14 ಕೋಟಿ ರೂ. ವೆಚ್ಚದ ಕಟ್ಟಡ
ದೂರುಗಳಿಗೆ ಅಧಿಕಾರಿಗಳು ಡೋಂಟ್ಕೇರ್!
ಬೀದರ್, ಭಾಲ್ಕಿ, ಹುಮ್ನಾಬಾದ್, ಚಿಟಗುಪ್ಪಾ ಹಾಗೂ ಔರಾದ್ ಪಟ್ಟಣಗಳು ಕುಡಿಯುವ ನೀರಿಗಾಗಿ 7.691 ಟಿಎಂಸಿ ಸಾಮರ್ಥದ ಇದೇ ಡ್ಯಾಂನ ನಂಬಿಕೊಂಡಿದ್ದಾರೆ. ಸುಮಾರು ಐದು ದಶಕದ ಹಿಂದೆ ಬೃಹತ್ ನೀರಾವರಿ ಉದ್ದೇಶದಿಂದ ನಿರ್ಮಾಣವಾಗಿರುವ ಈ ಜಲಾಶಯ, ಕುಡಿಯುವ ನೀರಿನ ಜೊತೆಗೆ 30 ಸಾವಿರಕ್ಕೂ ಹೆಚ್ಚು ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುತ್ತೆ. ಹೀಗಾಗಿ ಇಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಅಳಲು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:31 pm, Thu, 27 August 26




