Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್ ಮುಖ್ಯಾಂಶ ಇಲ್ಲಿದೆ
ಸಿದ್ದರಾಮಯ್ಯ ಬಜೆಟ್ 2026-27 ಹೈಲೈಟ್ಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 06) ಕರ್ನಾಟಕದ 2026, 27ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿದ್ದಾರೆ: ಒಟ್ಟು 4 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ನಲ್ಲಿ ವಲಯವಾರು ವಿಂಗಡಣೆ ಮಾಡಿದ್ದಾರೆ. ಹಾಗಾದ್ರೆ, ಈ ಬಾರಿಯ ಬಜೆಟ್ನಲ್ಲಿ ಪ್ರಮುಖವಾಗಿ ಏನೆಲ್ಲಾ ಹೊಸ ಘೋಷಣೆಗಳನ್ನು ಮಾಡಿದ್ದಾರೆ ಎನ್ನುವ 30 ಹೈಲೈಟ್ಸ್ ಇಲ್ಲಿ ಈ ಕೆಳಗಿನಂತಿವೆ ನೋಡಿ.

ಬೆಂಗಳೂರು, (ಮಾರ್ಚ್ 06): ಸಿಎಂ ಸಿದ್ದರಾಮಯ್ಯನವರು (Siddaramaiah) 2026-27ನೇ ಸಾಲಿನ ರಾಜ್ಯದ ಆಯವ್ಯಯ ಮಂಡಿಸಿದ್ದಾರೆ (Karnataka Budget 2026). ಈ ಬಾರಿ ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂಪಾಯಿ. ಇದರೊಂದಿಗೆ 2025ನೇ ಸಾಲಿನ ಕರ್ನಾಟಕ ಬಜೆಟ್ ಗಿಂತ ಈ ಬಾರಿ 40 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ. ರೈತರು, ಧಮನಿತರು, ಕಾರ್ಮಿಕ ಪರ ಬಜೆಟ್ ಇದಾಗಿದೆ ಎಂದು ಸಿದ್ದರಾಮಯ್ಯನವರು 3 ಗಂಟೆ 5 ನಿಮಿಷ ಮಂಡಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ 40 ಸಾವಿರ ಕೋಟಿ ರೂ. ತೆರಿಗೆ ಹೆಚ್ಚಳವಾಗಿದ್ದು, 2026-2027ನೇ ಸಾಲಿನಲ್ಲಿ 3.15 ಲಕ್ಷ ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಂತಹ ಹೆಚ್ಚಿನ ಬಂಡವಾಳ ಆಕರ್ಷಣೆ, ನಗರಾಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಇನ್ನು ನಾವು ಬೆಂಕಿಯನ್ನು ಬೆಳಕಾಗಿಸಿ ಮುಂದಿನ ಹೆಜ್ಜೆ ಇರಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಬರೋಬ್ಬರಿ 3 ಗಂಟೆ 5 ನಿಮಿಷ ಬಜೆಟ್ ಮಂಡನೆ
ಸಿಎಂ ಸಿದ್ದರಾಮಯ್ಯ ನಿರರ್ಗಳವಾಗಿ 3 ಗಂಟೆ 5 ನಿಮಿಷ ಗಂಟೆಗಳ ಕಾಲ ಬಜೆಟ್ ಭಾಷಣ ಮಾಡಿದರು. ನೀರೂ ಕುಡಿಯದೆ, ನಿಂತಲ್ಲಿಂದ ಕದಲದೆ, ನಿರಂತರವಾಗಿ ಬಜೆಟ್ ಮಂಡಿಸಿದರು. ಅವರಿಗೆ ಕಾಲು ನೋವು ಇರುವ ಕಾರಣ ಬಜೆಟ್ ಮಧ್ಯೆ ಕೆಲವರು ಕುಳಿತುಕೊಂಡು ಓದಿ ಎಂದು ಸಲಹೆ ನೀಡಿದರು. ಆದ್ರೆ, ಸಿದ್ದರಾಮಯ್ಯ ಸಾಧ್ಯವಾದಷ್ಟು ನಿಂತುಕೊಂಡೇ ಓದುತ್ತೇನೆ. ಕಷ್ಟವಾದಗ ಕುಳಿತುಕೊಳ್ಳುತ್ತೇನೆಂದು ಎದ್ದು ನಿಂತುಕೊಂಡೇ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಿದರು. ಬಳಿಕ ಸಂಪುಟ ಸಹೋದ್ಯೋಗಿಗಳ ಜೊತೆ ಫೋಟೋ ತೆಗೆಸಿಕೊಂಡರು. ಬಜೆಟ್ ಮೇಲಿನ ಚರ್ಚೆಯನ್ನು ಸೋಮವಾರಕ್ಕೆ ನಿಗದಿಪಡಿಸಲಾಯಿತು.
ಇದನ್ನೂ ಓದಿ: Karnataka Budget 2026: ಬಜೆಟ್ನಲ್ಲಿ ಇಲಾಖಾವಾರು ಹಣ ಹಂಚಿಕೆ: ಯಾವ ಕ್ಷೇತ್ರಕ್ಕೆ ಎಷ್ಟು ಪಾಲು?
ಕರ್ನಾಟಕ ಬಜೆಟ್ 2026ರ ಮುಖ್ಯಾಂಶಗಳು
- ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 11G ಮಾದರಿ ಆರ್ಥಿಕತೆ ಘೋಷಣೆ.
- ಪ್ರಸಕ್ತ ವರ್ಷದಲ್ಲಿ 56 ಸಾವಿರದ 432 ಉದ್ಯೋಗ ನೇಮಕಾತಿ
- ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಾ ಗಾಂಧಿ ಹೆಸರು
- ಅನ್ನಭಾಗ್ಯ: 5 ಕೆಜಿ ಅಕ್ಕಿ ಜೊತೆ ಇಂದಿರಾ ಕಿಟ್ ವಿತರಣೆ
- ಇಂದಿರಾ ಕಿಟ್ : ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಹೆಸರು ಕಾಳು, ಉಪ್ಪು
- 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್
- 800 ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಶಾಲೆಗಳು ಆರಂಭ
- ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಪುನರಾರಂಭ
- ಮಹಿಳೆಯರು ಮಕ್ಷಳ ರಕ್ಷಣೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ಆರಂಭ
- ಬೆಂಗಳೂರು, ಧಾರವಾಡದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’
- ವಿವಿಗಳಲ್ಲಿ ಜಾತಿ ದೌರ್ಜನ್ಯ ತಡೆಗೆ ‘ರೋಹಿತ್ ವೇಮುಲ’ ಕಾಯ್ದೆ
- ಕುವೆಂಪು ವಿವಿಯಲ್ಲಿ U.R.ಅನಂತಮೂರ್ತಿ ಅಧ್ಯಯನಪೀಠ ಸ್ಥಾಪನ
- ವಿಕ್ಟೋರಿಯಾ ಆಸ್ಪತ್ರೆ, ಶಾಂತವೇರಿ ಗೋಪಾಲಗೌಡ ಎಂದು ಮರುನಾಮಕರಣ
- 4.90 ಲಕ್ಷ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ನಿರ್ಧಾರ
- ಬೆಂಗಳೂರು ಅಭಿವೃದ್ಧಿಗೆ ಒಟ್ಟು ₹7,000 ಕೋಟಿ ಮೀಸಲು
- ಬೆಂಗಳೂರಿನಲ್ಲಿ 40 ಕಿ.ಮೀ ಸುರಂಗ ಮಾರ್ಗ ನಿರ್ಮಾಣ
- ಬೆಂಗಳೂರಿನ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಹಲವು ಯೋಜನೆ
- ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಮೈಸೂರನ್ನು ಎರಡನೇ ಐಟಿ ರಾಜಧಾನಿಯಾಗಿ ಬೆಳೆಸಲು ಉತ್ತೇಜನ
- 38 ಲಕ್ಷ ರೈತರಿಗೆ ಸಾಲ ನೀಡಲು $30,000 ಕೋಟಿ ಮೀಸಲು
- ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ಆರಂಭ
- . ಬೆಂಗಳೂರು, ಬೀದರ್ನಲ್ಲಿ ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ
- ಪಶುಗಳ ರೋಗ ಪತ್ತೆಗಾಗಿ ಸಿಟಿ ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆ
- 100 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ವಿಸ್ತಾರ ಯೋಜನೆ
- ಕೃಷಿ ವೆಚ್ಚ ಕಡಿತಕ್ಕೆ ಹೈಟೆಕ್ ಹಾರ್ವೆಸ್ಟರ್ ಹಬ್, ಕೋಲಾರದಲ್ಲಿ ರೈತ ಮಾಲ್
- ಅಲ್ಪಸಂಖ್ಯಾತ ವಿಧ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಭಾಗ್ಯ
- ಬಾಣಂತಿಯರಿಗೆ ಬಿಸಿಯೂಟ. ಮರಣ ಪ್ರಮಾಣ ತಗ್ಗಿಸಲು ಕ್ರಮ
- ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಇನ್ಸುಲಿನ್
- ಕಲ್ಯಾಣ ಕರ್ನಾಟಕದಲ್ಲಿ 1,000 ಕೋಟಿ ವೆಚ್ಚದಲ್ಲಿ 1,124 ಕೀಮೀ ಕಲ್ಯಾಣ ಪಥ
- ರಾಜ್ಯಾದ್ಯಂತ 1,250 ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಪಾಯಿಂಟ್
ಹೀಗೆ ಹತ್ತು ಹಲವು ಘೋಷಣೆಗಳೊಂದಿಗೆ ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ ಹಾಗೂ ನವ ಕರ್ನಾಟಕದ ನಿರ್ಮಾಣ” ಎಂಬ ದೂರದೃಷ್ಟಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2026-27ನೇ ಸಾಲಿನ ರಾಜ್ಯ ಆಯವ್ಯಯವನ್ನು ಮಂಡಿಸಿದ್ದಾರೆ. ಈ ಬಜೆಟ್ನಲ್ಲಿ ಜನಸಾಮಾನ್ಯರ ನಿರೀಕ್ಷೆಯಂತೆ ವಸತಿ, ಕೃಷಿ, ನೀರಾವರಿ ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಹಲವಾರು ಬಂಪರ್ ಕೊಡುಗೆಗಳನ್ನು ಘೋಷಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Fri, 6 March 26
