ಸರ್ಕಾರಿ ಜಮೀನು ಒತ್ತುವರಿ ಆರೋಪ: ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ!
ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ನಡುವಿನ ಸಂಘರ್ಷ ಮುಂದುವರೆದಿದೆ. ಈ ಕೇತಗಾನಹಳ್ಳಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಂತದ ಕ್ರಮಕೈಗೊಳ್ಳುವುದಿಲ್ಲವೆಂಬ ಮುಚ್ಚಳಿಕೆಯನ್ನು ಇದೀಗ ಸರ್ಕಾರ ಹಿಂಪಡೆದುಕೊಂಡಿದೆ. ಈ ಮೂಲಕ ಕುಮಾರಸ್ವಾಮಿಗೆ ಶಾಕ್ ಕೊಟ್ಟಿದೆ.

ಬೆಂಗಳೂರು, (ಏಪ್ರಿಲ್ 08): ಬಿಡದಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ (kethanahalli land Case )ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿಗೆ (HD Kumaraswamy) ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮಕೈಗೊಳ್ಳುವುದಿಲ್ಲವೆಂಬ ಮುಚ್ಚಳಿಕೆಯನ್ನು ರಾಜ್ಯ ಸರ್ಕಾರ (Karnataka Government) ಹಿಂಪಡೆದುಕೊಂಡಿದೆ. ಇನ್ನು ಈ 6 ಎಕರೆ ಒತ್ತುವರಿ ತೆರವು ನೋಟಿಸ್ ಪ್ರಶ್ನಿಸಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ N.S.ಸಂಜಯಗೌಡ ಅವರಿದ್ದ ಹೈಕೋರ್ಟ್ ಪೀಠ, ಒತ್ತುವರಿ ಜಮೀನಿಗೆ ಸಂಬಂಧಿಸಿದ ಸರ್ಕಾರದ ಬಳಿ ಇರುವ ದಾಖಲೆಗಳನ್ನು ಒಂದು ವಾರದಲ್ಲಿ ತಹಸೀಲ್ದಾರ್ ಹೆಚ್ ಡಿ ಕುಮಾರಸ್ವಾಮಿಗೆ ನೀಡಬೇಕು. ಅದಾದ 2 ವಾರಗಳಲ್ಲಿ ತಹಸೀಲ್ದಾರ್ ನೋಟಿಸ್ಗೆ ಹೆಚ್ ಡಿಕೆ ಉತ್ತರಿಸಬೇಕೆಂದು ಸೂಚಿಸಿದೆ.
6 ಎಕರೆ ಒತ್ತುವರಿ ತೆರವು ನೋಟಿಸ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು(ಏಪ್ರಿಲ್ 08) ವಿಚಾರಣೆ ನಡೆಸಿದ್ದು, ಕಾಯ್ದೆ ತಿದ್ದುಪಡಿಯ ಸಂವಿಧಾನಬದ್ಧತೆ ಪ್ರಶ್ನಿಸುವುದಾಗಿ ಕುಮಾರಸ್ವಾಮಿ ಪರ ವಕೀಲ ವಾದ ಮಂಡಿಸಿದ್ದಾರೆ. ಹೀಗಾಗಿ ಮುಚ್ಚಳಿಕೆ ಹಿಂಪಡೆಯುವುದಾಗಿ ಎಎಜಿ ಕಿರಣ್ ರೋಣ್ ಕೋರ್ಟ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಯುದ್ಧ ಆರಂಭ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಕುಮಾರಣ್ಣ
ಇನ್ನು 1 ವಾರದಲ್ಲಿ ತಹಶೀಲ್ದಾರ್, ಕುಮಾರಸ್ವಾಮಿಗೆ ದಾಖಲೆಗಳನ್ನು ಒದಗಿಸಬೇಕು. ಅದಾದ 2 ವಾರಗಳಲ್ಲಿ ಕುಮಾರಸ್ವಾಮಿ, ತಹಶೀಲ್ದಾರ್ಗೆ ಉತ್ತರಿಸಬೇಕು ಎಂದು ನ್ಯಾಯಮೂರ್ತಿ ಎನ್ಎಸ್ ಸಂಜಯಗೌಡ ಅವರಿದ್ದ ಹೈಕೋರ್ಟ್ ಪೀಠ ಹೇಳಿದೆ. ಸಮಾಜ ಪರಿವರ್ತನಾ ಸಮುದಾಯದ ಪರ ಹಿರಿಯ ವಕೀಲ ಎಸ್. ಬಸವರಾಜು ವಾದ ಮಂಡಿಸಿದ್ದು, ಕುಮಾರಸ್ವಾಮಿಗೆ ಮಧ್ಯಂತರ ರಿಲೀಫ್ ವಿಸ್ತರಿಸದಂತೆ ವಾದ ಮಂಡಿಸಿದ್ದರು.
ಒತ್ತುವರಿ ತೆರವಿಗೆ ಆದೇಶಿಸಿದ್ದ ಕೋರ್ಟ್
ಬಿಡದಿಯ ಕೇತಗಾನಹಳ್ಳಿ ಬಳಿ 6 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿಯಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಕರ್ನಾಟಕ ಹೈಕೋರ್ಟ್, ಒತ್ತುವರಿ ಜಮೀನು ತೆರವು ಕಾರ್ಯಾಚರಣೆ ಮಾಡಲು ಆದೇಶಿಸಿತ್ತು. ಆದರೂ ಕಂದಾಯ ಇಲಾಖೆ ವಿಳಂಬ ಮಾಡಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಕೂಡಲೇ ಒತ್ತುವರಿ ತೆರವು ಮಾಡದಿದ್ದರೆ ನಿಮ್ಮನ್ನು ಜೈಲಿಗೆ ಕಳುಹಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ರಾಮನಗರ ಜಿಲ್ಲಾಡಳಿತ ಕೇತನಹಳ್ಳಿ ಬಳಿ ಇರುವ ಕುಮಾರಸ್ವಾಮಿ ತೋಟದ ನಿವಾಸ ಸುತ್ತಾಮುತ್ತ ಸರ್ವೆ ಕಾರ್ಯ ನಡೆಸಿತ್ತು.
ಒತ್ತುವರಿ ಜಾಗ ಮಾರ್ಕಿಂಗ್ ಮಾಡಿರುವ ಅಧಿಕಾರಿಗಳು
ಎಚ್.ಡಿ. ಕುಮಾರಸ್ವಾಮಿ ಒಡೆತನದ ತೋಟದಲ್ಲಿ ಸರಕಾರಿ ಭೂಮಿ ಒತ್ತುವರಿ ಜಾಗವನ್ನು ಗುರುತಿಸಿ ಈಗಾಗಲೇ ಮಾರ್ಕಿಂಗ್ ಮಾಡಲಾಗಿದೆ. ಸರ್ವೆ ನಂಬರ್ 7, 8, 9 ರಲ್ಲಿ ಸುಮಾರು 11 ಎಕರೆಯಷ್ಟು ಸರಕಾರಿ ಭೂಮಿ ಒತ್ತುವರಿಯಾಗಿದ್ದು, ಈ ಜಾಗಕ್ಕೆ ಜಿಲ್ಲಾಡಳಿತ ಮಾರ್ಕಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಅಲ್ಲದೇ ಕುಮಾರಸ್ವಾಮಿ ಅವರ ತೋಟದ ಹಿಂಭಾಗದ ಹಾಗೂ ಆಸುಪಾಸಿನಲ್ಲಿ ಒತ್ತುವರಿ ಜಾಗದ ಮಾರ್ಕಿಂಗ್ ಮಾಡಲಾಗಿದ್ದು, ಕಬ್ಬಿಣದ ರಾಡುಗಳಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ಕಟ್ಟಿ ಅತಿಕ್ರಮಣ ಜಾಗ ಗುರುತು ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 pm, Tue, 8 April 25