ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಯಿಂದಲೇ ಜೀವ ಬೆದರಿಕೆ: ಕೆಜಿಎಫ್ ಎಸ್ಪಿ ಧರಣಿದೇವಿಗೆ ದೂರು
ಆಕ್ರೋಶಗೊಂಡಿರುವ ಶಾಸಕರ ಬೆಂಬಲಿಗರಾದ ಸೂಲಿಕುಂಟೆ ರಮೇಶ, ಹುಣಸಹಳ್ಳಿ ವೆಂಕಟೇಶ, ಮಣಿವಣ್ಣನ್, ಚಿಕ್ಕನಾರಾಯಣ ತಮ್ಮ ಮನೆಯ ಮುಂದೆ ಧರಣಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಕೋಲಾರ: ಅಂಬೇಡ್ಕರ್ ಭವನ ನಿರ್ಮಾಣ ವಿಚಾರವಾಗಿ ಸಮಾಜ ಸೇವಕರೊಬ್ಬರಿಗೆ ಬಂಗಾರಪೇಟೆ ಶಾಸಕ ಪ್ರಾಣ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ, ಕೆಜಿಎಫ್ ಎಸ್ಪಿ ಅವರಿಗೆ ದೂರು ನೀಡಲಾಗಿದೆ. ಬಂಗಾರಪೇಟೆಯ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಸಮಾಜ ಸೇವಕ ಶ್ರೀಧರ್ ಎಂಬುವವರಿಗೆ ತಮ್ಮ ಸಹಚರರ ಮೂಲಕ ಪ್ರಾಣ ಬೆದರಿಕೆ ಹಾಕಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯ ಬಳಿಕ ಸಮಾಜ ಸೇವಕ ಶ್ರೀಧರ್ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೋರಿ, ಕೆಜಿಎಫ್ ಎಸ್ಪಿ ಧರಣಿ ದೇವಿ ಅವರಿಗೆ ದೂರು ಸಲ್ಲಿಸಿದ್ದಾರೆ.
ಬಂಗಾರಪೇಟೆ ಪಟ್ಟಣದ ಸರ್ವೇ ನಂ.137 ರ ಒಬ್ಬಟ್ಟು ಕೆರೆಯಲ್ಲಿ ಅಕ್ರಮವಾಗಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಾಗಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಘೋಷಿಸಿದ್ದರು. ಆದ್ರೆ ಕರೆಯ ಅಂಗಳದಲ್ಲಿ ಸುಮಾರು 3 ಎಕರೆ ಜಮೀನು ಒತ್ತುವರಿಯಾಗಿದ್ದು, ಇದರಲ್ಲಿ ತೋಟಗಾರಿಕೆ ಇಲಾಖೆ, ಕನ್ನಡ ಭವನ, ವಿದ್ಯಾರ್ಥಿ ನಿಲಯ ಮತ್ತು ಪ್ರಾಥಮಿಕ ಶಾಲೆಯನ್ನು ಕಟ್ಟಲಾಗಿದೆ.
ಇದರ ಜೊತೆಗೆ, ಈಗ ಶಾಸಕ ನಾರಾಯಣಸ್ವಾಮಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸಮಾಜ ಸೇವಕ ಶ್ರೀಧರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮಧ್ಯಂತರ ತಡೆಯಾಜ್ಞೆ ತರಲಾಗಿತ್ತು. ಅಲ್ಲದೆ ಒಬ್ಬಟ್ಟು ಕೆರೆ ಪ್ರದೇಶದಲ್ಲಿ ಅನಧಿಕೃತವಾಗಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ಅಲ್ಲಿನ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿತ್ತು.
ಇದರಿಂದ ಆಕ್ರೋಶಗೊಂಡಿರುವ ಶಾಸಕರ ಬೆಂಬಲಿಗರಾದ ಸೂಲಿಕುಂಟೆ ರಮೇಶ, ಹುಣಸಹಳ್ಳಿ ವೆಂಕಟೇಶ, ಮಣಿವಣ್ಣನ್, ಚಿಕ್ಕನಾರಾಯಣ ತಮ್ಮ ಮನೆಯ ಮುಂದೆ ಧರಣಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಅಕ್ಟೋಬರ್ 19ರೊಳಗೆ ಪ್ರಕರಣ ಇತ್ಯರ್ಥವಾಗದಿದ್ದಲ್ಲಿ, ಬಂಗಾರಪೇಟೆ ಬಂದ್ ಮಾಡುವ ಧಮಕಿ ಹಾಕಿದ್ದಾರೆ. ಹಾಗಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಎಸ್ಪಿ ಅವರಿಗೆ ದೂರಿನಲ್ಲಿ ಶ್ರೀಧರ್ ಮನವಿ ಮಾಡಿಕೊಂಡಿದ್ದಾರೆ ವರದಿ- ರಾಜೇಂದ್ರ ಸಿಂಹ