3 ದಿನದ ಹಿಂದೆ ಹಸೆಮಣೆ ಏರಿದ್ದ ಯುವಕ ಸಾವಿನ ಮನೆ ಸೇರಿದ
ಮೂರು ದಿನಗಳ ಹಿಂದೆ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿತ್ತು. ತಾನು ಪ್ರೀತಿಸಿ ಯುವತಿಯನ್ನು ಮಂಡ್ಯದ ಶಶಾಂಕ್ ವಿವಾಹವಾಗಿದ್ದರು. ಟೆಕ್ಕಿ ಶಶಾಂಕ್ ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ಜೀವನಕ್ಕೆ ಕಾಲಿಟ್ಟಿದ್ದ ಶಶಾಂಕ್ ಸಾವಿನ ಮನೆಯನ್ನು ಸೇರಿದ್ದಾರೆ. ಅಷ್ಟಕ್ಕೂ ಟೆಕ್ಕಿ ಶಶಾಂಕ್ಗೆ ಆಗಿದ್ದೇನು. ಸುಖ ಸಂಸಾರ ನಡೆಸಬೇಕಿದ್ದ ಶಶಾಂಕ್ಗೆ ಆಗಿದ್ದೇನು? ಈ ಸುದ್ದಿ ಓದಿ.

ಮಂಡ್ಯ, ಮಾರ್ಚ್ 05: ಮೂರು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ (KR Pete) ಪಟ್ಟಣದಲ್ಲಿ ನಡೆದಿದೆ. ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರ ಶಶಾಂಕ್ (28) ಸಾವು ಮೃತ ದುರ್ದೈವಿ. ಶಶಾಂಕ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿದ್ದನು. ಜಾರ್ಖಂಡ್ ಮೂಲದ ಯುವತಿ ಅಷ್ಣಾ ಕೂಡ ಶಶಾಂಕ್ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ನಂತರ ಸ್ನೇಹ ಪ್ರೇಮಕ್ಕೆ ತಿರುಗಿದೆ. ಇಬ್ಬರೂ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ತಮ್ಮ ಪ್ರೇಮದ ವಿಚಾರವನ್ನು ಇಬ್ಬರೂ ತಮ್ಮ ಕುಟುಂಬಸ್ಥರಿಗೆ ತಿಳಿಸಿ, ಮದುವೆಯಾಗುವುದಾಗಿ ಹೇಳಿದ್ದಾರೆ.
ಮದುವೆಗೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ. ಮನೆಯವರ ಸಮ್ಮುಖದಲ್ಲಿ ಪ್ರೇಮಿಗಳು ಕಳೆದ ಭಾನುವಾರ ಮೈಸೂರಿನ ರೆಸಾರ್ಟ್ ಒಂದರಲ್ಲಿ ಮದುವೆಯಾಗಿದ್ದಾರೆ. ಶಶಾಂಕ್ಗೆ ಮದುವೆ ದಿನ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ಈ ವಿಚಾರವನ್ನು ಶಶಾಂಕ್ ತನ್ನ ಸ್ನೇಹಿತರ ಮುಂದೆ ಹೇಳಿಕೊಂಡಿದ್ದನು.
ನಂತರ, ಶಶಾಂಕ್ ಮತ್ತು ಆತನ ಕುಟುಂಬಸ್ಥರು ಬೆಂಗಳೂರಿಗೆ ಬಂದು ವಾಸವಾಗಿದ್ದರು. ಮಂಗಳವಾರ (ಮಾ.04) ಶಶಾಂಕ್ಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ಪೋಷಕರು ಕೂಡಲೇ ಶಶಾಂಕ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಅಷ್ಟೊತ್ತಿಗಾಗಲೇ ಶಶಾಂಕ್ ಮೃತಪಟ್ಟಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 am, Wed, 5 March 25



