ಮೈಸೂರು: ಕಾವೇರಿ ನದಿಯಲ್ಲಿ 6 ಜನ ಜಲಸಮಾಧಿ; ದರ್ಗಾಕ್ಕೆ ಬಂದವರು ದುರಂತ ಅಂತ್ಯ
ಮೈಸೂರು ಜಿಲ್ಲೆಯ ಕೆ.ಆರ್.ನಗರದ ಅರ್ಕೇಶ್ವರ ದೇಗುಲ ಬಳಿಯ ಕಾವೇರಿ ನದಿಯಲ್ಲಿ ಇಂದು ದುರಂತ ಸಂಭವಿಸಿದೆ. ಉರೂಸ್ ಹಿನ್ನೆಲೆ ದರ್ಗಾಕ್ಕೆ ಬಂದಿದ್ದ 8 ಜನರ ತಂಡ ನದಿಯಲ್ಲಿ ಈಜಲು ತೆರಳಿದ್ದು, ಆರು ಮಂದಿ ನೀರುಪಾಲಾಗಿದ್ದಾರೆ. ಕೆ.ಆರ್.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು, ಏಪ್ರಿಲ್ 19: ಕಾವೇರಿ ನದಿಯಲ್ಲಿ (Cauvery River) ಮುಳುಗಿ 6 ಜನ ದುರ್ಮರಣ (death) ಹೊಂದಿರುವಂತಹ ಘಟನೆ ಜಿಲ್ಲೆ K.R.ನಗರದ ಅರ್ಕೇಶ್ವರ ದೇಗುಲದ ಬಳಿ ನಡೆದಿದೆ. ಉರೂಸ್ ಹಿನ್ನೆಲೆ 8 ಜನರ ತಂಡ ದರ್ಗಾಕ್ಕೆ ಬಂದಿದ್ದು, ಈ ವೇಳೆ ನದಿಗೆ ಈಜಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದು, ಉಳಿದ 6 ಜನ ನೀರುಪಾಲಾಗಿದ್ದಾರೆ. ಸ್ಥಳಕ್ಕೆ ಕೆ.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಡೆದದ್ದೇನು?
ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಇಂದು ಉರೂಸ್ ಹಿನ್ನೆಲೆ ದರ್ಗಾಕ್ಕೆ ಬೆಂಗಳೂರು ಮತ್ತು ಊಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂಟು ಜನರ ತಂಡವೊಂದು ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ನದಿಯಲ್ಲಿ ಮುಳುಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಉಳಿದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರು
ಯಾಸಿನ್(23), ಫಾತಿಮ್(30), ಹುಮಾಯೂನ್(7), ನೇಹಾನ್(19), ಅಲೀಂ(13), ಇನ್ನೊಬ್ಬರ ಗುರುತು ಪತ್ತೆ ಆಗಿಲ್ಲ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ನೇಹಿತರೊಂದಿಗೆ ಕೆರೆಯಲ್ಲಿ ಆಟವಾಡಲು ತೆರಳಿದ್ದ ವಿದ್ಯಾರ್ಥಿ ಸಾವು
ಸ್ನೇಹಿತರೊಂದಿಗೆ ಕೆರೆಯಲ್ಲಿ ಆಟವಾಡಲು ತೆರಳಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಅಂಬ್ಲಮೊಗರುವಿನಲ್ಲಿ ನಡೆದಿದೆ. ಕೆರೆಯ ಕೆಸರಲ್ಲಿ ಸಿಲುಕಿ ಗ್ರಾಮದ ಜರಿ ಹೌಸ್ ನಿವಾಸಿ ಶಿವರಾಮ್ ಅವರ ಪುತ್ರ ಸೃಜನ್ (17)ಮೃತಪಟ್ಟಿದ್ದಾನೆ.
ಖಾಸಗಿ ವಿವಿಗೆ ಸೇರಿದ ಜಮೀನಿನ ಕೆರೆಯಲ್ಲಿ ನೀರಾಟವಾಡಲು ತೆರಳಿದ್ದ. ಬಳಿಕ ಕೈಕಾಲು ತೊಳೆಯಲು ಪಕ್ಕದ ನಾಲೆಯೊಂದಕ್ಕೆ ಸೃಜನ್ ಏಕಾಂಗಿಯಾಗಿ ಇಳಿದಿದ್ದಾನೆ. ಈ ವೇಳೆ ಆತನ ಕಾಲುಗಳು ನಾಲೆಯ ಕೆಸರಿನಲ್ಲಿ ಮುಳುಗಿವೆ. ಸೃಜನ್ನನ್ನು ಮತ್ತೋರ್ವ ಸ್ನೇಹಿತ ರಕ್ಷಿಸಲು ಪ್ರಯತ್ನಿಸಿದ್ದು, ಸಾಧ್ಯವಾಗಿಲ್ಲ. ಘಟನೆಯಿಂದ ಆಘಾತಕ್ಕೊಳಗಾದ ಬಾಲಕ ವಿಚಾರವನ್ನು ಯಾರಲ್ಲೂ ತಿಳಿಸಿದೇ ತಮ್ಮ ಮನೆ ಸೇರಿದ್ದರು.
ಇದನ್ನೂ ಓದಿ: ಅರಹಳ್ಳಿ ಕೆರೆಯಲ್ಲಿ ದುರಂತ: ಮಕ್ಕಳನ್ನು ರಕ್ಷಿಸಲು ಹೋಗಿ ಜೀವ ತೆತ್ತ ಮಹಿಳೆಯರು
ರಾತ್ರಿ 8 ಗಂಟೆಯಾದರೂ ಸೃಜನ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆತನ ಸ್ನೇಹಿತರಲ್ಲಿ ವಿಚಾರಿಸಿದಾಗ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಕೊಣಾಜೆ ಪೊಲೀಸರು ಧಾವಿಸಿ ಶೋಧ ಮಾಡಿದ್ದು, ನಾಲೆಯಲ್ಲಿ ಭಾರೀ ಹೂಳು ತುಂಬಿದ್ದರಿಂದ ರಕ್ಷಣಾ ಕಾರ್ಯಕ್ಕೂ ಕಷ್ಟವಾಗಿದೆ. ಹರಸಾಹಸ ಪಟ್ಟು ಕೊನೆಗೂ ಮಧ್ಯರಾತ್ರಿ ಬಾಲಕನ ಮೃತದೇಹ ಪತ್ತೆ ಮಾಡಲಾಗಿದ್ದು, ಕೊಣಾಜೆ ಪೊಲೀಸರಿಂದ ಯುಡಿಆರ್ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:11 pm, Sun, 19 April 26



