ಆಟೋ ಚಾಲಕನ ಮಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೇ ಆರನೇ ರ್ಯಾಂಕ್!
ರಾಯಚೂರಿನ ವಿದ್ಯಾರ್ಥಿ ವಿಕಾಸ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾನೆ. ಆಟೋ ಚಾಲಕರ ಮಗನಾದ ವಿಕಾಸ್, ಕುಟುಂಬದ ಆರ್ಥಿಕ ಸಂಕಷ್ಟಗಳ ನಡುವೆಯೂ 600ಕ್ಕೆ 594 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಂಕಲ್ಪ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ.

ರಾಯಚೂರು, ಏಪ್ರಿಲ್ 11: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (PUC results) ಉತ್ತಮ ಶ್ರೇಣಿಯಲ್ಲಿ ಪಾಸಾದವರು ಹಲವರಿದ್ದಾರೆ. ಅದರಲ್ಲಿ ರಾಯಚೂರಿನ ಒಬ್ಬ ಬಡ ವಿದ್ಯಾರ್ಥಿಯ ಸಾಧನೆಯೂ ಸೇರಿದೆ. ಆರ್ಥಿಕ ಸಂಕಷ್ಟಗಳ ನಡುವೆಯೂ ಕಷ್ಟ ಪಟ್ಟು ಓದಿದರೆ ಯಾವುದೂ ಅಸಾಧ್ಯವಲ್ಲವೆಂದು ಈ ವಿದ್ಯಾರ್ಥಿ ಸಾಧಿಸಿ ತೋರಿಸಿದ್ದಾನೆ. ರಾಜ್ಯಕ್ಕೇ ಆರನೆ ಸ್ಥಾನ ಪಡೆದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾರ್ಥಕತೆ ಮೆರೆದಿದ್ದಾನೆ.
ತಂದೆಯ ಕಷ್ಟದ ಜೀವನವೇ ಸಾಧನೆಗೆ ಇಂಧನ!
ಆಟೋ ಚಾಲಕರಾದ ಹನಮಂತು ಅವರ ಮಗನಾದ ವಿಕಾಸ್, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಆರನೇ ರ್ಯಾಂಕ್ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ. ಜಿಲ್ಲೆಯ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ, 600ರಲ್ಲಿ 594 ಅಂಕಗಳನ್ನು ಗಳಿಸಿ ಶೇ99 ಫಲಿತಾಂಶ ಸಾಧಿಸಿದ್ದಾನೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದರೂ ತಂದೆಯ ಶ್ರಮವನ್ನು ನೋಡಿ ಏನಾದರೂ ಸಾಧಿಸಬೇಕು ಎಂಬ ದೃಢಸಂಕಲ್ಪದಿಂದ, ಪರಿಶ್ರಮದಿಂದ ಓದಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ.
ಇದನ್ನೂ ಓದಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮಹಾ ಎಡವಟ್ಟು! 600ಕ್ಕೆ 683 ಅಂಕ ನೀಡಿದ ಬೋರ್ಡ್!
ಸಾಲ ಮಾಡಿ ಓದಿಸಿದ್ದಕ್ಕೂ ಸಾರ್ಥಕವಾಯ್ತು ಎಂದ ಪೋಷಕರು!
ಮಗನ ಸಾಧನೆ ಕಂಡು ಕುಟುಂಬಸ್ಥರು ಆನಂದಭಾಷ್ಪ ಸುರಿಸಿದ್ದಾರೆ. ಟಿವಿ9 ಜೊತೆ ಮಾತನಾಡಿತ ವಿಕಾಸ್ ತಂದೆ-ತಾಯಿ ಭಾವುಕರಾಗಿ, ಸಾಲ ಮಾಡಿ ಓದಿಸಿದ್ದ ಮಗ ಇಷ್ಟು ದೊಡ್ಡ ಸಾಧನೆ ಮಾಡಿದಿದ್ದಾನೆ. ಇದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ವಿಕಾಸ್ ಸಾಧನೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಸಂಕಷ್ಟಗಳ ನಡುವೆಯೂ ಗುರಿ ಸಾಧಿಸಬಹುದೆಂಬ ನಂಬಿಕೆಯನ್ನು ಬಲಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:24 am, Sat, 11 April 26



